ಹುಬ್ಬಳ್ಳಿ: ಕೊನೆಯ ಓವರ್ವರೆಗೂ ತಾಳ್ಮೆಯ ಬ್ಯಾಟಿಂಗ್ ಮಾಡಿದ ರೋಹನ್ ಯರೇಶೀಮಿ (ಅಜೇಯ 91, 83ಎಸೆತ, 8 ಬೌಂಡರಿ, 1 ಸಿಕ್ಸರ್) ಆಟದ ಬಲದಿಂದ ಹುಬ್ಬಳ್ಳಿಯ ಎಲೈಟ್ ಡ್ರೀಮ್ಸ್ ತಂಡ, ಎನ್ಎವಿಎಂ ಹುಬ್ಬಳ್ಳಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು.
ಬಿ.ಜಿ. ಅಸೋಸಿಯೇಟ್ಸ್ ನಗರದ ಶಿರೂರು ಲೇ ಔಟ್ನ ಭಾಣಜಿ ಡಿ. ಕಿಮ್ಜಿ ಮೈದಾನದಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ಭಾನುವಾರ ನಡೆದ ಫೈನಲ್ನಲ್ಲಿ ಈ ತಂಡ ಆರು ವಿಕೆಟ್ಗಳ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಬೆಳಗಾವಿ ಲಯನ್ಸ್ 30 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು. ಈ ಗುರಿಯ ಎದುರು ಆರಂಭದಲ್ಲಿ ಪರದಾಡಿದ ಎಲೈಟ್ ಬ್ಯಾಟ್ಸ್ಮನ್ಗಳು ಕೊನೆಯ ಹತ್ತು ಓವರ್ಗಳಲ್ಲಿ ಜವಾಬ್ದಾರಿಯುತ ಪ್ರದರ್ಶನ ನೀಡಿದರು. ವಿಕೆಟ್ ಬೀಳದಂತೆ ಎಚ್ಚರ ವಹಿಸಿ ಗುರಿಯ ಸನಿಹ ಸಾಗಿದರು. ಈ ತಂಡ 29.2 ಓವರ್ಗಳಲ್ಲಿ ಗೆಲುವು ಪಡೆದು ಟ್ರೋಫಿ ತನ್ನದಾಗಿಸಿಕೊಂಡಿತು.
ಎಲೈಟ್ ಡ್ರೀಮ್ಸ್ 48 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಹೀಗಾಗಿ ಬೆಳಗಾವಿ ತಂಡ ಗೆಲುವಿನ ಆಸೆ ಹೊಂದಿತ್ತು. ನಾಲ್ಕನೆ ವಿಕೆಟ್ ಜೊತೆಯಾಟದಲ್ಲಿ ರೋಹನ್ ಮತ್ತು ಕೇದಾರನಾಥ ವಿ. ಉಸುಲ್ಕರ್ (55,50ಎಸೆತ, 4ಬೌಂಡರಿ, 3 ಸಿಕ್ಸರ್) ಕಲೆಹಾಕಿದ 106 ರನ್ಗಳು ಎಲೈಟ್ ಗೆಲುವಿಗೆ ರಹದಾರಿಯಾಯಿತು. ಎಲೀಟ್ ಕೊನೆಯ ಐದು ಓವರ್ಗಳಲ್ಲಿ 41 ರನ್ ಗಳಿಸಬೇಕಿತ್ತು. ನಂತರದ ಪ್ರತಿ ಓವರ್ನಲ್ಲಿ ರೋಹನ್ ಮತ್ತು ನಾಯಕ ಆದಿತ್ಯ ಹಿರೇಮಠ ರನ್ ಅಂತರ ಕಡಿಮೆ ಮಾಡಿದರು. ಕೊನೆಯ ಓವರ್ನಲ್ಲಿ ಎಲೈಟ್ 7 ರನ್ ಗಳಿಸಬೇಕಿತ್ತು. ಸ್ಟ್ರೈಕ್ನಲ್ಲಿದ್ದ ರೋಹನ್, ಯಶ್ ಹವಲ್ನಾಚೆ ಬೌಲಿಂಗ್ನ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಬೆಳಗಾವಿ ತಂಡದ ಗೆಲುವಿನ ಆಸೆ ನುಚ್ಚುನೂರು ಮಾಡಿದರು.
ವೈಯಕ್ತಿಕ ಪ್ರಶಸ್ತಿಗಳು: 14 ವರ್ಷದ ಒಳಗಿನವರ ವಿಭಾಗ: ಯಶಸ್ ಕುರುಬರ (ಅತ್ಯುತ್ತಮ ಬ್ಯಾಟ್ಸ್ಮನ್), ಮಣಿಕಂಠ ಬುಕಿಟಗಾರ (ಅತ್ಯುತ್ತಮ ಬೌಲರ್). 14 ವರ್ಷದ ಒಳಗಿನವರ ವಿಭಾಗ: ಸುದೀಪ್ ಸತೇರಿ (ಅತ್ಯುತ್ತಮ ಬ್ಯಾಟ್ಸ್ಮನ್), ಧ್ರುವ ದೇಸಾಯಿ (ಅತ್ಯುತ್ತಮ ಬೌಲರ್), ಟೂರ್ನಿ ಶ್ರೇಷ್ಠ ಆಟಗಾರ: ರೋಹನ್ ಯರೇಶೀಮಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.