ADVERTISEMENT

ಹುಬ್ಬಳ್ಳಿ: ತಂತ್ರಜ್ಞಾನದಿಂದ ಸಮಾನ ಅವಕಾಶ

ಇನ್ಫೊಸಿಸ್‌ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 7:44 IST
Last Updated 5 ಫೆಬ್ರುವರಿ 2023, 7:44 IST
ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನ ದೇಶಪಾಂಡೆ ಫೌಂಡೇಷನ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಮಾತನಾಡಿದರು
ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನ ದೇಶಪಾಂಡೆ ಫೌಂಡೇಷನ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಮಾತನಾಡಿದರು   

ಹುಬ್ಬಳ್ಳಿ: ‘ತಂತ್ರಜ್ಞಾನ ಅಭಿವೃದ್ಧಿಯಿಂದ ದೇಶದ ಜನರ ಆತ್ಮವಿಶ್ವಾಸ ಹೆಚ್ಚಿದೆ. ಎಲ್ಲರಿಗೂ ಸಮಾನ ಅವಕಾಶಗಳು ದೊರೆಯುತ್ತಿವೆ’ ಎಂದು ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದರು.

ನಗರದ ಬಿ.ವಿ.ಬಿ ಕಾಲೇಜಿನ ದೇಶಪಾಂಡೆ ಫೌಂಡೇಷನ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿ, ‘ಜನರ ಜೀವನಮಟ್ಟ ಸುಧಾರಣೆಯೇ ತಂತ್ರಜ್ಞಾನದ ಮುಖ್ಯ ಉದ್ದೇಶ. ಜನರು ತಂತ್ರಜ್ಞಾನಕ್ಕೆ ತೆರೆದುಕೊಂಡಾಗಲೇ ಸಂಪೂರ್ಣ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.

‘ಆಧಾರ್‌ ಕಾರ್ಡ್‌ನಿಂದಾಗಿ ಅರ್ಹ ಫಲಾನುಭವಿಗಳಿಗೆ ಅಗತ್ಯ ಸೌಲಭ್ಯಗಳು ದೊರೆಯುತ್ತಿವೆ. ಭ್ರಷ್ಟಾಚಾರ ಒಂದು ಹಂತಕ್ಕೆ ನಿಯಂತ್ರಣವಾಗಿದೆ. ಆದರೆ, ಜನರ ಮನಸ್ಥಿತಿ ಬದಲಾಯಿಸುವಂತಹ ತಂತ್ರಜ್ಞಾನದ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಿಟಿಒ ಆಧಾರ್‌ನ ಸಂಸ್ಥಾಪಕ ಶ್ರೀಕಾಂತ್ ನಧಮುನಿ, ‘ಕೋವಿಡ್‌ ಸಂದರ್ಭದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚು ಅವಕಾಶಗಳು ಸಿಕ್ಕವು. ವಿಶ್ವದರ್ಜೆಯ ವೈದ್ಯ ಕೂಡ, ಇಲ್ಲಿನ ಗ್ರಾಮವೊಂದರ ಕಡುಬಡವನಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುವಂತಹ ವಾತಾವರಣ ಸೃಷ್ಟಿಯಾಗಿದೆ. ಸಾಮಾನ್ಯರು ಸಹ ಕ್ಯುಆರ್‌ ಕೋಡ್‌ ಬಳಸಿ, ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇ–ಗವರ್ನೆನ್ಸ್‌ ವ್ಯವಸ್ಥೆ ಅಧಿಕೃತ ಗುರುತು ನೀಡಿದೆ’ ಎಂದು ಹೇಳಿದರು.

ಐ–ಮೆರಿಟ್‌ ಸಂಸ್ಥೆಯ ಸಿಇಒ ರಾಧಾ ಬಸು, ‘ಸ್ತ್ರೀಸಬಲೀಕರಣಕ್ಕೆ ತಂತ್ರಜ್ಞಾನದ ಕೊಡುಗೆ ಅಪಾರ. ಗ್ರಾಮೀಣ ಭಾಗದ ಜನರಲ್ಲಿ ತಾಂತ್ರಿಕ ಜ್ಞಾನ ಇನ್ನಷ್ಟು ವೃದ್ಧಿಯಾಗಬೇಕು’ ಎಂದರು.

ದೇಶಪಾಂಡೆ ಫೌಂಡೇಷನ್‌ನ ಗ್ಲೋಬಲ್ ಸಿಟಿಒ ಶುಬೊ ಬಿಸ್ವಾಸ್‌ ಗೋಷ್ಠಿ ನಿರ್ವಹಿಸಿದರು. ವಿವಿಧ ಕ್ಷೇತ್ರಗಳ ಮೇಲೆ ತಂತ್ರಜ್ಞಾನದ ಪರಿಣಾಮದ ಕುರಿತು ಗೋಷ್ಠಿಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.