ADVERTISEMENT

ಹುಬ್ಬಳ್ಳಿ: ಮೆಣಸಿನಕಾಯಿ ಹೊಲ ಹರಗಿದ ರೈತ

ಮತ್ತಷ್ಟು ಹೆಚ್ಚಿದ ಅನ್ನದಾತರ ಸಂಕಷ್ಟ, ನಾಲ್ಕು ಎಕರೆ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 19:30 IST
Last Updated 30 ಅಕ್ಟೋಬರ್ 2020, 19:30 IST
ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದ ಬಸವರಾಜ ಯೋಗಪ್ಪನವರ ತಾವು ಬೆಳೆದ ಮೆಣಸಿನಕಾಯಿಯನ್ನು ನಾಶ‍ಪಡಿಸಿದ ಚಿತ್ರಣ
ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದ ಬಸವರಾಜ ಯೋಗಪ್ಪನವರ ತಾವು ಬೆಳೆದ ಮೆಣಸಿನಕಾಯಿಯನ್ನು ನಾಶ‍ಪಡಿಸಿದ ಚಿತ್ರಣ   

ಹುಬ್ಬಳ್ಳಿ: ಜಿಲ್ಲೆಯಾದ್ಯಂತ ಕೆಲ ದಿನಗಳ ಹಿಂದೆ ಮೇಲಿಂದ ಮೇಲೆ ಸುರಿದ ಮಳೆ ಮತ್ತು ಮೋಡಕವಿದ ವಾತಾವರಣದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ನೀರು ಹೊಲದಲ್ಲಿ ನಿಂತಿದ್ದರಿಂದ ಕುಂದಗೋಳ, ಕಲಘಟಗಿ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಮೆಣಸಿನಕಾಯಿಯನ್ನು ರೈತರು ಹೊಲದಲ್ಲಿಯೇ ಹರಗುತ್ತಿದ್ದಾರೆ.

ನಾಲ್ಕೈದು ವರ್ಷಗಳಿಂದ ಸತತ ಬರಗಾಲ ಕಾಡಿದ್ದರಿಂದ ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಎರಡು ವರ್ಷಗಳಿಂದ ಕಾಡುತ್ತಿರುವ ಅತಿವೃಷ್ಠಿಗೆ ಕಂಗಾಲಾಗಿದ್ದಾರೆ. ಸಾಕಷ್ಟು ಸಾಲ ಮಾಡಿ ಬೆಳೆದ ಬೆಳೆಯನ್ನೇ ಹರವುತ್ತಿದ್ದಾರೆ. ಇದರಿಂದ ನಷ್ಟದ ಪ್ರಮಾಣ ಹೆಚ್ಚಾಗುತ್ತಲೇ ಇದೆ.

ಈಗಾಗಲೇ ಶೇಂಗಾ, ಹತ್ತಿ ಬೆಳೆಗಳಲ್ಲಿ ವಿಪರೀತ ಇಳುವರಿ ಕಳೆದುಕೊಂಡಿರುವ ರೈತರು ಸದ್ಯದ ಪರಿಸ್ಥಿತಿಯಲ್ಲಿ ತಾವೇ ಬೆಳೆಸಿದ ಮೆಣಸಿನಕಾಯಿ ಗಿಡಗಳನ್ನು ಹರಗಿಸಿ ಕಿತ್ತೊಗೆಯುವ ಪರಿಸ್ಥಿತಿ ಎದುರಾಗಿದೆ.

ADVERTISEMENT

ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದ ಬಸವರಾಜ ಯೋಗಪ್ಪನವರ ಎಂಬ ರೈತ ನಾಲ್ಕು ಎಕರೆ ಹೊಲದಲ್ಲಿ ಮೆಣಸಿನ ಗಿಡ ಬೆಳೆಸಿದ್ದು ಅತಿವೃಷ್ಟಿ ಹೊಡೆತಕ್ಕೆ ಸಿಲುಕಿದ ಬೆಳೆಗಳು ಇಳುವರಿ ಕಳೆದುಕೊಂಡಿದ್ದು ಹೊಲದ ತುಂಬೆಲ್ಲಾ ಹುಲ್ಲು ಕಸ ಬೆಳೆದಿದೆ. ಹೀಗಾಗಿ ರೂಟರ್ ಮೂಲಕ ಇಡೀ ಹೊಲವನ್ನೇ ಹರಗಿಸಿ ಕೈ ಬಿಟ್ಟಿದ್ದು, ಹಿಂಗಾರಿನ ಮೇಲೆ ಭರವಸೆ ಹೊತ್ತು ಕುಳಿತು ಸರ್ಕಾರ ನೀಡುವ ಪರಿಹಾರ ಬೆಳೆವಿಮೆಗೆ ಕಾಯುತ್ತಿದ್ದಾನೆ.

‘ಮೊದಲು ಕೆಲವು ವರ್ಷ ವಿಪರೀತ ಎನ್ನುವಷ್ಟು ಬರಗಾಲ, ಈಗ ಸಾಕು ಎನ್ನುವಷ್ಟು ಮಳೆ. ಪ್ರತಿವರ್ಷ ಒಂದಲ್ಲ ಒಂದು ಸಮಸ್ಯೆಯಾಗುತ್ತಲೇ ಇದೆ. ಈ ಬಾರಿ ಮೆಣಸಿನಕಾಯಿ ಉತ್ತಮ ಇಳುವರಿ ಮತ್ತು ಲಾಭ ತಂದುಕೊಡುವ ನಿರೀಕ್ಷೆಯಲ್ಲಿದ್ದೆ. ಮಳೆಯಿಂದ ಎಲ್ಲವೂ ನೀರು ಪಾಲಾಗಿದೆ’ ಎಂದು ಬಸವರಾಜ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.