ಅಳ್ನಾವರ: ರೈತರು ಕೃಷಿಯ ಜೊತೆಗೆ ಇತರ ಆದಾಯ ಮೂಲಗಳನ್ನೂ ಕಂಡುಕೊಳ್ಳಬೇಕು. ಹೈನೋದ್ಯಮ, ಪುಷ್ಪೋದ್ಯಮ, ಗೊಬ್ಬರ ತಯಾರಿಕೆ ಹಾಗೂ ಮಾರಾಟ ಬಗ್ಗೆಯೂ ಗಮನ ಹರಿಸಬೇಕು ಎಂದುಅರವಟಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಿವಾನಂದ ಹಿರೇಮಠ ಹೇಳಿದರು.
ಸಮೀಪದ ಡೋರಿ ಗ್ರಾಮದ ಅರವಟಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿ, ಪ್ರಸಕ್ತ ವರ್ಷ 200 ಜನರಿಗೆ ಸದಸ್ಯತ್ವ ನೀಡಲಾಗಿದೆ. ಸಂಘದಿಂದ ₹ 3ರ ಬಡ್ಡಿ ದರದಲ್ಲಿ ನಾಲ್ಕು ಟ್ರ್ಯಾಕ್ಟರ್ ನೀಡಲಾಗಿದೆ.ಸಹಕಾರಿ ಸಂಘದಿಂದ ಯೋಗ್ಯ ದರದಲ್ಲಿ ಬೀಜ ಹಾಗೂ ಗೊಬ್ಬರ ನೀಡಲಾಗುವುದು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಯವ ಗೊಬ್ಬರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿವೆ. ರೈತರು ರಾಸಾಯನಿಕ ಗೊಬ್ಬರ ಬಳಸದೆ ಕೊಟ್ಟಿಗೆ ಗೊಬ್ಬರ ಬಳಕೆ ಮಾಡಬೇಕು. ಸಹಕಾರಿ ಸಂಘದಿಂದ ಸಾಲ ಪಡೆದ ಗ್ರಾಹಕರು ತಮ್ಮ ಕೃಷಿ ಚಟುವಟಿಕೆ ಹಣವನ್ನು ಸದ್ಬಳಿಕೆ ಮಾಡಿಕೊಂಡು ಸರಿಯಾದ ಸಮಯದಲ್ಲಿ ಸಾಲ ಮರು ಪಾವತಿ ಮಾಡುವ ಮೂಲಕ ತಮ್ಮ ಹಾಗೂ ಸಂಘದ ಆರ್ಥಿಕ ಪ್ರಗತಿಗೆ ಕೈಜೋಡಿಸಬೇಕು ಎಂದರು.
ಈಗಾಗಲೆ ಸಹಕಾರಿ ಸಂಘದಿಂದ ₹ 3. 62 ಕೋಟಿ ಬೆಳೆ ಸಾಲ ನೀಡಲಾಗಿದೆ. ಸಂಘದ ಸದಸ್ಯರು ಅಕಾಲಿಕ ಮರಣ ಹೊಂದಿದರೆ ಮರಣೋತ್ತರ ನಿಧಿ ಮೀಸಲಿಡಲಾಗಿದೆ. ನಿಧನರಾದ ಸದಸ್ಯರ ಕುಟುಂಬಕ್ಕೆ ₹ 4 ಸಾವಿರ ಪರಿಹಾರ ರೂಪದ ಹಣ ನೀಡಲಾಗುವುದು ಎಂದರು.
ಸಾಲ ಪ್ರಮಾಣ ಹೆಚ್ಚಿಸಿ: ಇದುವರಗೆ ಇರುವ ನಿಯಮ ಸಡಿಲಿಕೆ ಮಾಡಿ ಪ್ರತಿ ಎಕರೆಗೆ ನೀಡುವ ಸಾಲದ ಮೊತ್ತ ಹೆಚ್ಚಳ ಮಾಡಿ ಎಂದು ಸದಸ್ಯರು ಆಗ್ರಹಿಸಿದರು.
ಉಪಾಧ್ಯಕ್ಷ ಮಹ್ಮದಹನೀಫ್ ಪಾಟೀಲ, ನಿರ್ದೇಶಕರಾದ ಮಡಿವಾಳಪ್ಪ ಬೋರಿಮನಿ, ಅಶೋಕ ಜೋಡಟ್ಟಿ, ಅಶೋಕ ಸಾವಂತ, ಚನ್ನಬಸಯ್ಯ ಹಿರೇಮಠ, ವಾಸುದೇವ ಕಲ್ಲಾಪೂರ, ಪ್ರದೀಪ ಕುಣಕಿಕೊಪ್ಪ, ಭೀಮಪ್ಪ ಹರಿಜನ, ರೇಣುಕಾ ದಬಾಲಿ, ಮಲ್ಲವ್ವ ತಳವಾರ ಹಾಗೂ ಕಾರ್ಯದರ್ಶಿ ಸಿಕಂದರ ನದಾಫ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.