ಸಚಿವ ಆರ್.ಬಿ. ತಿಮ್ಮಾಪುರ
ಹುಬ್ಬಳ್ಳಿ: ‘ದೇಶದಲ್ಲಿ ಎಲ್ಲಿಯೂ ಹಿಂದೂಗಳಿಗೆ ರಕ್ಷಣೆ ಇಲ್ಲವಾಗಿದೆ. ದಲಿತ ಸಮುದಾಯದವರನ್ನು ಕೊಚ್ಚಿ ಕೊಲೆ ಮಾಡಲಾಗುತ್ತದೆ. ಅವರು ಹಿಂದೂಗಳಲ್ಲವೇ’ ಎಂದು ಸಚಿವ ಆರ್.ಬಿ. ತಿಮ್ಮಾಪುರ ಪ್ರಶ್ನಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದರೆ ಅದು ಜಾತಿ ಗಣತಿ, ಪ್ರಧಾನಿ ನರೇಂದ್ರ ಮೋದಿ ನಡೆಸಿದೆ ಯಾವ ಗಣತಿ? ರಾಜಕೀಯಕ್ಕಾಗಿ ಬಿಜೆಪಿಯವರು ಅರ್ಥವಿಲ್ಲದ ಹೇಳಿಕೆ ನೀಡುತ್ತ, ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಜಾತಿ, ಧರ್ಮವನ್ನು ಮುಂದಿಟ್ಟುಕೊಂಡು ಮಾತನಾಡುತ್ತಾರೆ. ದೇಶದ ವಿವಿಧ ರಾಜ್ಯಗಳಲ್ಲಿ ದಲಿತ ಸಮುದಾಯದವರನ್ನು ಕೊಲೆ ಮಾಡಲಾಗುತ್ತಿದೆ, ಅವರಿಗೆ ರಕ್ಷಣೆಯೇ ಇಲ್ಲವಾಗಿದೆ. ಹಿಂದೂಗಳನ್ನು ರಕ್ಷಿಸುವಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಆರೋಪಿಸಿದರು.
‘ರಾಜಕೀಯವಾಗಿ ಯಾರ್ಯಾರು ಹಿಂದುಳಿದ್ದಾರೆ, ಅವರ ಆರ್ಥಿಕ ಸ್ಥಿತಿಗತಿಗಳೇನು ಎನ್ನುವ ಕುರಿತು ರಾಜ್ಯದಲ್ಲಿ ಜಾತಿ ಗಣತಿ ನಡೆಯುತ್ತಿದೆ. ಹಿಂದುಳಿದ ವರ್ಗಗಳಿಗೆ ಸರ್ಕಾರ ಸಹಾಯ ಮಾಡಲಿದೆ. ವರದಿ ಬಂದ ತಕ್ಷಣ ಶಿಫಾರಸ್ಸುಗಳನ್ನು ಜಾರಿಗೆ ತರಲಾಗುವುದು’ ಎಂದು ತಿಳಿಸಿದರು.
‘ಪಾಕಿಸ್ತಾನ ವಿರುದ್ಧ ಯುದ್ಧಕ್ಕೆ ಹೋಗುತ್ತೇನೆ’ ಎನ್ನುವ ಸಚಿವ ಜಮೀರ್ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ ಜಮೀರ್ ದೇಶ ಭಕ್ತರಾಗಿದ್ದು, ಯುದ್ಧಕ್ಕೆ ಹೋಗಿ ಬಾಂಬ್ ಹಾಕುವುದಿದ್ದರೆ ಹಾಕಲಿ. ದೇಶದ ಭದ್ರತೆಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಬೆಂಬಲಿಸುತ್ತೇವೆ’ ಎಂದರು.
‘ಜನಾರ್ಧನ ರೆಡ್ಡಿ ಯಾವೆಲ್ಲ ಅಕ್ರಮ ನಡೆಸಿದ್ದರೋ ಅವರಿಗೇ ಗೊತ್ತು. ಆದರೆ, ಸಾಕ್ಷ್ಯಾಧಾರದ ಮೇಲೆ ಕೋರ್ಟ್ ಅವರಿಗೆ ಶಿಕ್ಷೆ ವಿಧಿಸಿದೆ. ಕೋರ್ಟ್ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.