ಹುಬ್ಬಳ್ಳಿ: ಕೋವಿಡ್ ಕಾರಣದಿಂದ ಬಂದ್ ಆಗಿದ್ದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳು ಪದವಿ ಹಾಗೂ ಸ್ನಾತಕೋತ್ತರ ಪದವಿ ಅಂತಿಮ ಸೆಮಿಸ್ಟರ್ ಪರೀಕ್ಷೆ ನಿಗದಿಯಾಗಿರುವುದರಿಂದ ಪುನರಾರಂಭಗೊಂಡಿವೆ. ಕೊರೊನಾ ಭೀತಿ ಇನ್ನೂ ಇರುವುದರಿಂದ ವಿದ್ಯಾರ್ಥಿಗಳ ಸುರಕ್ಷೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ದಿನ ವಿದ್ಯಾರ್ಥಿಗಳೊಂದಿಗೆ ವಾರ್ಡನ್ಗಳು ಅರ್ಧ ಗಂಟೆ ಸಂವಾದದ ಮೂಲಕ ಆತ್ಮವಿಶ್ವಾಸ ತುಂಬುತ್ತಿದ್ದಾರೆ.
ಪ್ರತಿ ದಿನ ಸಂಜೆ ಎಲ್ಲ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಲಾಗುತ್ತದೆ. ಪರೀಕ್ಷೆಯ ತಯಾರಿ ಬಗ್ಗೆ ಅವರಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಉತ್ತಮ ರೀತಿಯಲ್ಲಿ ತಯಾರಿ ಮಾಡಿಕೊಳ್ಳಲು ಹುರಿದುಂಬಿಸಲಾಗುತ್ತಿದೆ. ಅಲ್ಲದೆ ಯಾರಲ್ಲಾದರೂ ಕೋವಿಡ್ ಲಕ್ಷಣ ಇದೆಯೇ ಎಂದು ಪರಿಶೀಲಿಸಿ, ಅಂತಹ ಲಕ್ಷಣ ಇದ್ದರೆ ಕೂಡಲೇ ಅವರನ್ನು ಪ್ರತ್ಯೇಕಿಸಿ ಪರೀಕ್ಷೆಗೆ ವ್ಯವ್ಯಸ್ಥೆ ಮಾಡಲಾಗುತ್ತದೆ.
ಸುರಕ್ಷೆ ಆದ್ಯತೆ: ವಿದ್ಯಾರ್ಥಿಗಳ ಸುರಕ್ಷತೆಗಾಗಿ ಈ ಬಾರಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಮೊದಲು 5ರಿಂದ 6ವಿದ್ಯಾರ್ಥಿಗಳು ಒಂದು ಕೊಠಡಿಯನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಈಗ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆಗಾಗ್ಗೆ ಸ್ಯಾನಿಟೈಸರ್ ಬಳಸುವಂತೆ ಸೂಚನೆ ನೀಡಲಾಗಿದೆ. ಕೊಠಡಿ ಬಿಟ್ಟು ಹೊರಗೆ ಬಂದರೆ ಮಾಸ್ಕ್ ಧರಿಸುವುದು ಕಡ್ಡಾಯ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಗುಂಪುಗೂಡುವಂತಿಲ್ಲ. ಮೆಸ್ನಲ್ಲಿಯೇ ಊಟ ಮಾಡಲು ಅವಕಾಶ ಇದೆ, ಬೇಡ ಎನ್ನುವವರು ತಟ್ಟೆಗೆ ಊಟ ಹಾಕಿಸಿಕೊಂಡು ತಮ್ಮ ಕೊಠಡಿಗೆ ಹೋಗಿ ತಿನ್ನಬಹುದು.
‘ವಿದ್ಯಾರ್ಥಿಗಳ ಸುರಕ್ಷೆ ಖಾತ್ರಿಪಡಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ. ಈ ದುರಿತ ಕಾಲದಲ್ಲಿ ಅವರ ಆತ್ಮವಿಶ್ವಾಸ ಹೆಚ್ಚಿಸಲು ಪ್ರತಿದಿನ ಅವರೊಂದಿಗೆ ಸಂವಾದ ನಡೆಸಲಾಗುತ್ತಿದೆ. ಸುರಕ್ಷತಾ ಮಾರ್ಗಸೂಚಿಗಳನ್ನು ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಿ ಸಹಕಾರ ನೀಡುತ್ತಿರುವುದರಿಂದ ಯಾವುದೇ ರೀತಿಯ ತೊಂದರೆ ಆಗುತ್ತಿಲ್ಲ’ ಎನ್ನುತ್ತಾರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ್.
ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಭಯ ಇದೆ. ಆ ಭಯ ಹೋಗಲಾಡಿಸಿ ಅವರು ಯಶಸ್ವಿಯಾಗಿ ಪರೀಕ್ಷೆ ಎದುರಿಸುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ
-ಅಜ್ಜಪ್ಪ ಸೊಗಲದ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.