ಹುಬ್ಬಳ್ಳಿ: ಕಳೆದ ಎರಡು ವಾರಗಳಿಂದ ನಗರದಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಶುಕ್ರವಾರವೂ ಬೆಳಿಗ್ಗೆ ಶುರುವಾದ ಮಳೆ, ನಂತರ ಬಿಡುವು ಕೊಟ್ಟಿತ್ತು. ಮಧ್ಯಾಹ್ನದಿಂದ ರಾತ್ರಿಯವರೆಗೆ ಆಗಾಗ ಸುರಿಯಿತು. ಮಳೆಗೆ ಹುಬ್ಬಳ್ಳಿಯ ಪಿ.ಬಿ. ರಸ್ತೆಯ ಗಣೇಶ ಹೋಟೆಲ್ ಸಮೀಪ ಮರದ ಕೊಂಬೆಗಳು ಮುರಿದುಬಿದ್ದಿದ್ದವು. ಸಾರ್ವಜನಿಕರ ದೂರಿನ ಮೇರೆಗೆ ಪಾಲಿಕೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ತೆರವುಗೊಳಿಸಿದರು.
ಮಳೆಯಿಂದಾಗಿ ಹುಬ್ಬಳ್ಳಿಯ ಜನತಾ ಬಜಾರ್, ದುರ್ಗದಬೈಲ್, ಶಾ ಬಜಾರ್ ಸೇರಿದಂತೆ ಮಾರುಕಟ್ಟೆ ಪ್ರದೇಶಗಳಲ್ಲಿ ರಸ್ತೆಗಳು ಕೆಸರಿನಿಂದ ಕೂಡಿದ್ದರಿಂದ ವ್ಯಾಪಾರಸ್ಥರು, ಗ್ರಾಹಕರು ಪರದಾಡುವಂತಾಯಿತು. ಇನ್ನು ತಗ್ಗು ಪ್ರದೇಶಗಳಲ್ಲಿ, ರಸ್ತೆಗಳಲ್ಲಿ ನೀರು ನಿಂತುಕೊಂಡಿತ್ತು. ಸಾರ್ವಜನಿಕರು ಮಳೆಯಿಂದ ರಕ್ಷಣೆ ಪಡೆಯಲು ಜಾಕೆಟ್ ಧರಿಸಿ, ಛತ್ರಿ ಹಿಡಿದು ಓಡಾಡುವುದು ಸಾಮಾನ್ಯವಾಗಿತ್ತು.
ಹುಬ್ಬಳ್ಳಿ ತಾಲ್ಲೂಕಿನಲ್ಲಿ ಶುಕ್ರವಾರ ಹುಬ್ಬಳ್ಳಿಯಲ್ಲಿ 8 ಮಿ.ಮೀ., ಛಬ್ಬಿ 9 ಮಿ.ಮೀ., ಶಿರಗುಪ್ಪಿ 3.4 ಮಿ.ಮೀ., ಬ್ಯಾಹಟ್ಟಿ 4 ಮಿ.ಮೀ ಮಳೆಯಾಗಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.