ADVERTISEMENT

ಸೂಕ್ಷ್ಮತೆ ಇಲ್ಲದ ಸಾಹಿತ್ಯ ಹೆಚ್ಚಳ: ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ

ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 16:29 IST
Last Updated 20 ಮಾರ್ಚ್ 2022, 16:29 IST
ಹುಬ್ಬಳ್ಳಿ ಪತ್ರಕರ್ತರ ಭವನದಲ್ಲಿ ಭಾನುವಾರ ನುಡಿ ಕನ್ನಡ ಬಳಗ ಹಮ್ಮಿಕೊಂಡಿದ್ದ ಕವಿ ಗಂಗಪ್ಪ ವಾಲಿ ಅವರ ಜನ್ಮ ದಿನ ಕಾರ್ಯಕ್ರಮದಲ್ಲಿ ಸಾಹಿತಿ ಶ್ಯಾಮಸುಂದರ ಬಿದರಕುಂದಿ ಮಾತನಾಡಿದರು
ಹುಬ್ಬಳ್ಳಿ ಪತ್ರಕರ್ತರ ಭವನದಲ್ಲಿ ಭಾನುವಾರ ನುಡಿ ಕನ್ನಡ ಬಳಗ ಹಮ್ಮಿಕೊಂಡಿದ್ದ ಕವಿ ಗಂಗಪ್ಪ ವಾಲಿ ಅವರ ಜನ್ಮ ದಿನ ಕಾರ್ಯಕ್ರಮದಲ್ಲಿ ಸಾಹಿತಿ ಶ್ಯಾಮಸುಂದರ ಬಿದರಕುಂದಿ ಮಾತನಾಡಿದರು   

ಹುಬ್ಬಳ್ಳಿ: ‘ಇತ್ತೀಚೆಗೆ ವಿಚಿತ್ರ ಸಾಹಿತ್ಯಗಳು ಸೃಷ್ಟಿಯಾಗುತ್ತಿವೆ. ಸೂಕ್ಷ್ಮತೆ ಇರದ, ಅರ್ಥವೂ ಆಗದ ಇಂತಹ ಬರವಣಿಗೆ ಸಾಹಿತ್ಯ ಲೋಕವನ್ನೇ ಅಣಕಿಸುವಂತಿದೆ. ಹಿಂದಿನ ಕಾವ್ಯ, ಸಾಹಿತ್ಯ ಸಮಾಜವನ್ನು ಒಗ್ಗಡಿಸುತ್ತಿತ್ತು. ಸೂಕ್ಷ್ಮವಾಗಿ ತಿಳಿ ಹೇಳುತ್ತಿತ್ತು. ಸಾಹಿತಿಗಳು ಸಹ ಸೌಮ್ಯವಾಗಿ ಕ್ಷರದ ಮೂಲಕವೇ ಛಾಟಿ ಬೀಳಿಸುತ್ತಿದ್ದರು’ ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಅಭಿಪ್ರಾಯಪಟ್ಟರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನುಡಿ ಕನ್ನಡ ಬಳಗ ಹಮ್ಮಿಕೊಂಡಿದ್ದ, ಸುಪ್ರಭಾತ ಕವಿ ಗಂಗಪ್ಪ ವಾಲಿ ಅವರ 111ನೇ ಜನ್ಮ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಇಂದಿನ ಕೆಲವು ಸಾಹಿತಿಗಳು ಏನನ್ನು ಹೇಳಲು ಹೊರಟಿದ್ದಾರೆ ಎಂಬುದೇ ಅರ್ಥವಾಗುವುದಿಲ್ಲ. ಅವರಿಗೆ ನಾನೊಬ್ಬನೇ ಜಾಣ, ಉಳಿದವರು ದಡ್ಡರು ಎನ್ನುವ ಅಹಂ ಬಂದಿದೆ’ ಎಂದರು.

‘ಕಮ್ಯುನಿಸಂ ಹೆಸರಲ್ಲಿ ರಷ್ಯಾದಲ್ಲಿ ಅಧಿಕಾರಕ್ಕೆ ಬಂದ ವ್ಲಾಡಿಮಿರ್ ಪುಟಿನ್, ಭಾವನೆಯೇ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ಯಾರ ಮಾತು ಕೇಳದ ಅವರು ಯುದ್ದೋನ್ಮಾದದಲ್ಲಿದ್ದಾರೆ. ಇದು ವಿನಾಶದ ಪ್ರತೀಕ. ಪ್ರಗತಿ ಎಂದರೆ ಪ್ರೀತಿಯಿಂದ ಬದುಕುವುದು. ಅದು ಅಂತರಂಗದ ಪ್ರತೀಕ. ಅದಕ್ಕೆ ಮತ, ಜಾತಿ, ಧರ್ಮದ ಯಾವ ಎಲ್ಲೆಯೂ ಇಲ್ಲ. ಅದುವೇ ಕಾವ್ಯ. ಪ್ರೀತಿಯ ಅರಿವೆ ಸಾಹಿತ್ಯದ ಅರಿವು. ಪ್ರೀತಿ ಇಲ್ಲದೆ ಏನೂ ಇಲ್ಲ. ಇಂತಹ ಸೂಕ್ಷ್ಮ ಭಾವವನ್ನು ಗಂಗಪ್ಪ ವಾಲಿ ಅವರು ಸೌಮ್ಯವಾಗಿ ಹೇಳುತ್ತಿದ್ದರು’ ಎಂದರು.

ADVERTISEMENT

ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಪತ್ರಿಕೆ ಸಂಪಾದಕ ಪುಟ್ಟು ಕುಲಕರ್ಣಿ ಉಪನ್ಯಾಸ ನೀಡಿದರು. ನುಡಿ ಕನ್ನಡ ಬಳಗದ ಅಧ್ಯಕ್ಷ ಏಕನಾಥ ಕಲಬುರ್ಗಿ, ವೀರಣ್ಣ ಹೂಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.