ಧಾರವಾಡ: ‘ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ) ಏಳನೇ ಘಟಿಕೋತ್ಸವ ಜುಲೈ 4ರಂದು ನಡೆಯಲಿದೆ. 257 ಮಂದಿ ವಿವಿಧ ಪದವಿ, ಒಬ್ಬರು ಪಿಎಚ್.ಡಿ ಪಡೆಯಲಿದ್ಧಾರೆ’ ಎಂದು ಐಐಐಟಿ ನಿರ್ದೇಶಕ ಪ್ರೊ.ಮಹದೇವ ಪ್ರಸನ್ನ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೆಳಿಗ್ಗೆ 10 ಗಂಟೆ ಘಟಿಕೋತ್ಸವ ಆರಂಭವಾಗಲಿದೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ಮಂಡಳಿ (ಸಿಎಸ್ಐಆರ್) ಮಹಾನಿರ್ದೇಶಕಿ ಎನ್.ಕಲೈಸೆಲ್ವಿ, ಐಐಐಟಿ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ ವೆಂಬು ಪಾಲ್ಗೊಳ್ಳುವರು. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ 132, ಡಾಟಾ ಸೈನ್ಸ್–ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಜಿನಿಯರಿಂಗ್ 70, ಎಲೆಕ್ಟ್ರಾನಿಕ್ಸ್–ಕಮ್ಯುನಿಕೇಷನ್ ಎಂಜಿನಿಯರಿಂಗ್ 55 ಹಾಗೂ ಒಬ್ಬರು ಪಿಎಚ್.ಡಿ ಪಡೆಯುವರು’ ಎಂದು ತಿಳಿಸಿದರು.
‘ಈ ವರ್ಷ ಐಐಟಿಯ ಸುಮಾರು 190 ವಿದ್ಯಾರ್ಥಿಗಳನ್ನು ವಿವಿಧ ಸಂಸ್ಥೆಗಳು ಉದ್ಯೋಗಕ್ಕೆ ಆಯ್ಕೆ ಮಾಡಿವೆ. ಈ ಪೈಕಿ ಒಂದು ಕಂಪನಿಯು ವಾರ್ಷಿಕ ₹ 72 ಲಕ್ಷ ಸಂಬಳದ ಪ್ಯಾಕೇಜ್ ನಿಗದಿಪಡಿಸಿದೆ’ ಎಂದರು.
‘ಈ ಐಐಐಟಿಗೆ ಈಗ ದಶಮಾನೋತ್ಸವ ವರ್ಷ. ಒಂದು ಸಾವಿರ ವಿದ್ಯಾರ್ಥಿ ವಾಸ್ತವ್ಯ ಸಾಮರ್ಥ್ಯದ ಹಾಸ್ಟೆಲ್ ನಿರ್ಮಿಸಲು, ಮೈದಾನ ಪರಿಧಿ ಮತ್ತು ಅಕಾಡೆಮಿಕ್ ಬ್ಲಾಕ್ ವಿಸ್ರರಣೆಗೆ ಉದ್ದೇಶಿಸಲಾಗಿದೆ. ಕೆಲವು ಹೊಸ ಕೋರ್ಸ್ ಆರಂಭಿಸಲಾಗಿದ್ದು, 2025–26ನೇ ಸಾಲಿಗೆ 1450 ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ. ಆನ್ಲೈನ್ ಎಂ.ಟೆಕ್ ಕೋರ್ಸ್ ಆರಂಭಿಸಿದ್ದು, 100 ಮಂದಿ ಪ್ರವೇಶ ಪಡೆದಿದ್ಧಾರೆ. ಪಿಎಚ್.ಡಿ ಕೋರ್ಸ್ಗೆ 70 ಮಂದಿ ದಾಖಲಾಗಲು ಅವಕಾಶ ಇದೆ’ ಎಂದು ಮಾಹಿತಿ ನೀಡಿದರು.
‘ಜಿಲ್ಲೆಯ ಸರ್ಕಾರಿ ಶಾಲೆಗಳ 6, 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಕಲಿಕೆ ಸುಧಾರಣೆಗೆ ಐಐಐಟಿ ಕೈಜೋಡಿಸಿ ಒಡಂಬಡಿಕೆ (ಎಂಒಯು) ಮಾಡಿಕೊಂಡಿದೆ. ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಐಐಐಟಿಯಿಂದ ವಿದ್ಯಾಶಕ್ತಿ ಕಾರ್ಯಕ್ರಮ ರೂಪಿಸಲಾಗಿದೆ. 579 ಶಾಲೆಗಳ ಸುಮಾರು 80 ಸಾವಿರ ವಿದ್ಯಾರ್ಥಿಗಳು ಈ ಕಾರ್ಯಕ್ರಮ ಪ್ರಯೋಜನ ಪಡೆಯಲಿದ್ಧಾರೆ’ ಎಂದು ಸಂಯೋಜಕ ರಾಜೇಶ್ ತಿಳಿಸಿದರು.
‘ವಿದ್ಯಾಶಕ್ತಿ ಕಾರ್ಯಕ್ರಮ ‘ವಿಜ್ಞಾನ’, ‘ಗಣಿತ’ ಮತ್ತು ‘ಇಂಗ್ಲಿಷ್ ಸಂವಹನ ಕೌಶಲ‘ ವಿಷಯ ಬೋಧನೆ ಆನ್ಲೈನ್ನಲ್ಲಿ ನಡೆಯಲಿದೆ. ಮಧ್ಯಾಹ್ನ 3ರಿಂದ 4 ಗಂಟೆ ಸಮಯ ನಿಗದಿಪಡಿಸಲಾಗಿದೆ. ಶಿಕ್ಷಕರು ‘ವರ್ಚುವೆಲ್’ ಮೂಲಕ ಕಲಿಸುವವರು, ಇಬ್ಬರು ಈ ಕಾರ್ಯ ನಿರ್ವಹಿಸುವರು. ಈ ಕಾರ್ಯಕ್ರಮ ನಿಟ್ಟಿನಲ್ಲಿ 3763 ಶಿಕ್ಷಕರಿಗೆ ತರಬೇತಿ ನೀಡಲಾಗುವುದು’ ಎಂದರು.
‘ಜಿಲ್ಲೆಯ ಸುಮಾರು 140 ಸರ್ಕಾರಿ ಶಾಲೆಗಳಲ್ಲಿ ಪ್ರಯೋಗಾಲಯ ಕೊರತೆ ಇದೆ. 280 ಶಾಲೆಗಳಲ್ಲಿ ಸ್ಮಾರ್ಟ್ ಬೋರ್ಡ್ ಇವೆ’ ಎಂದು ಪ್ರೊ.ಗೋಪಿನಾಥ್ ತಿಳಿಸಿದರು.
ಐಐಐಟಿ ಕುಲಸಸಚಿವ ಪ್ರೊ.ಮುರುಗನಂತಮ್ ಪೊನ್ನುಸ್ವಾಮಿ, ವಾಸುದೇವ್ ಪರ್ವತಿ, ಪ್ರೊ.ಹೆಗಡೆ ಇದ್ದರು.
Quote - ಮಂಗಳ ಗ್ರಹದಲ್ಲಿ ‘ಡ್ರೋನ್’ ಹಾರಾಟ ಸಾಧ್ಯತೆ ಸಂಬಂಧಿಸಿದಂತೆ ಐಐಐಟಿ ವಿದ್ಯಾರ್ಥಿಗಳು ಪ್ರಾಜೆಕ್ಟ್ ಸಿದ್ಧಪಡಿಸಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಆಯ್ಕೆ ಮಾಡಿರುವ 20 ಪ್ರಾಜೆಕ್ಟ್ಗಳಲ್ಲಿ ಇಲ್ಲಿಯದು ಒಂದು. ಪ್ರಾಜೆಕ್ಟ್ ಪರಿಶೀಲನೆಗೆ ಇಸ್ರೊ ಅಧಿಕಾರಿಗಳು ಶೀಘ್ರದಲ್ಲಿ ಐಐಐಟಿಗೆ ಭೇಟಿ ನೀಡಲಿದ್ಧಾರೆ ಮಹದೇವ ಪ್ರಸನ್ನ ನಿರ್ದೇಶಕ ಐಐಐಟಿ ಧಾರವಾಡ
Cut-off box - ‘ಸಂಶೋಧನೆ: 5 ಯೋಜನೆ ಅಂತಿಮ ಹಂತದಲ್ಲಿ’ ‘ಐಐಐಟಿ ಸಂಶೋಧನಾ ಪಾರ್ಕ್ನಲ್ಲಿ 22 ಸಂಶೋಧನಾ ಯೋಜನೆಗಳ ಅಧ್ಯಯನ ನಡೆಯುತ್ತಿದ್ದು ಈ ಪೈಕಿ ಐದು ಯೋಜನೆಗಳು ಅಂತಿಮ ಹಂತದಲ್ಲಿವೆ. ಬಹುತೇಕ ಸಂಶೋಧನೆಗಳು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದವು’ ಎಂದು ಪಾರ್ಕ್ ಮುಖ್ಯಸ್ಥ ದೀಪಕ್ ತಿಳಿಸಿದರು. ‘ಮಾನಸಿಕ ಆರೋಗ್ಯ ವಿಜ್ಞಾನ‘ ‘ಚಿಕಿತ್ಸೆ’ ‘ಬಯೋಮೆಡಿಕಲ್ಸೈನ್ಸ್’ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಯೋಜನೆಗಳ ಅಧ್ಯಯನ ನಡೆಯುತ್ತಿದೆ. ಇಸಿಜಿ ಎಸ್ಪಿಒ2 ರಕ್ತದೊತ್ತಡ ಮಧುಮೇಹ ಇವೆಲ್ಲವನ್ನು ಪರೀಕ್ಷಿಸುವ ಏಕಯಂತ್ರ ಸಂಶೋಧನೆ ಪ್ರಗತಿಯಲ್ಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.