ಹುಬ್ಬಳ್ಳಿ: ‘ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇದು ನೆರವಾಗಲಿದೆ’ ಎಂದು ಗೋಕುಲ ರಸ್ತೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಸಲಹೆ ನೀಡಿದರು.
ಆದಿಕವಿ ಪಂಪ ಕನ್ನಡ ಬಳಗವು ನಗರದ ಎಸ್.ಜೆ.ಎಂ.ವಿ.ಎಸ್ ಕಲಾ ಮಹಾವಿದ್ಯಾಲಯದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆದಿಕವಿ ಪಂಪನ ಜಯಂತ್ಯುತ್ಸವ ಹಾಗೂ ರಸಪ್ರಶ್ನೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹೆಣ್ಣು ಮಕ್ಕಳು ಇಂದು ಕೇವಲ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ. ಪುರುಷರಂತೆ ಅವರಿಗೂ ಸಮಾನ ಅವಕಾಶಗಳಿವೆ. ಶಿಕ್ಷಣ, ರಾಜಕೀಯ, ಕ್ರೀಡೆ, ವಿಜ್ಞಾನ– ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಅಂತಹ ಸಾಧಕರನ್ನು ಸ್ಫೂರ್ತಿಯಾಗಿ ಸ್ವೀಕರಿಸಿ ತಾವೂ ಸಾಧನೆ ಮಾಡಬೇಕು’ ಎಂದರು.
ಬಳಗದ ಅಧ್ಯಕ್ಷ ವೀರೇಶ ಎಸ್. ಕುಬಸದ ಮಾತನಾಡಿ, ‘ರಸಪ್ರಶ್ನೆ ಸ್ಪರ್ಧೆಯಲ್ಲಿ ಶಾಲಾ– ಕಾಲೇಜುಗಳ ಸುಮಾರು 6,000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ದಾನಿಗಳಿಂದ76 ಬಹುಮಾನಗಳನ್ನು ನೀಡಲಾಗಿದೆ’ ಎಂದರು.
ಅತಿಥಿಗಳಾಗಿ ಉದ್ಯಮಿ ದೇವರಾಜ ದಾಡಿಬಾವಿ, ಗುರುಪ್ರಸಾದ ಪಾಟೀಲ, ಶೆಲುಡಿ ಡಾಕ್ಟರ್, ಡಾ.ಜಿ.ಎಸ್. ನವಲಗುಂದ, ಪ್ರಕಾಶ ಶಂಕು, ಎಂ.ಎಂ. ಹೊನಳ್ಳಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ದಾನಮ್ಮ ಸುರೇಬಾನ ಪ್ರಾರ್ಥನೆ ಹಾಡಿದರು. ಜಿ.ಎಸ್. ನವಲಗುಂದ ನಿರೂಪಣೆ ಮಾಡಿದರು. ಮಮ್ತಾಜ್ ಬೇಗಂ ತಹಶೀಲ್ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.