ADVERTISEMENT

ಹುಬ್ಬಳ್ಳಿ | ಭಾಷಾಭಿಮಾನ ಹೆಚ್ಚಾಗಲಿ: ನಟ ನವೀನಶಂಕರ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 6:08 IST
Last Updated 3 ಆಗಸ್ಟ್ 2025, 6:08 IST
   

ಹುಬ್ಬಳ್ಳಿ: ‘ನಮ್ಮ ಕನ್ನಡ ಭಾಷೆ ಬಗ್ಗೆ ನಾವು ಹೆಮ್ಮೆ, ಅಭಿಮಾನ ಇಟ್ಟುಕೊಂಡಿರಬೇಕು. ಭಾಷೆಯಿಂದಲೇ ನಾವು ಹೊರತು, ನಮ್ಮಿಂದ ಭಾಷೆಯಲ್ಲ’ ಎಂದು ನಟ ನವೀನ ಶಂಕರ ಎ. ಹೇಳಿದರು.

ಇಲ್ಲಿನ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿ–ಆರ್‌ಐ)ಯ ಸಭಾಂಗಣದಲ್ಲಿ ಸಂಸ್ಥೆಯ ಕನ್ನಡ ಸಂಘದಿಂದ ಆಯೋಜಿಸಿದ್ದ ‘ಕನ್ನಡ ಹಬ್ಬ–ಲಹರಿ’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭಾಷೆ ನಮ್ಮ ಅಸ್ತಿತ್ವದ ಸಂಕೇತ. ಅದು ನಮ್ಮ ಗಟ್ಟಿತನ ಮತ್ತು ಒಗ್ಗಟ್ಟು ತೋರಿಸುತ್ತದೆ. ಅದರೊಂದಿಗೆ ಬೆಳವಣಿಗೆ ಹಾಗೂ ಬದುಕು ಹಾಸುಹೊಕ್ಕಾಗಿರುತ್ತದೆ’ ಎಂದರು.

ADVERTISEMENT

‘ಭಾಷೆ ಅಸ್ತಿತ್ವದ ಸಂಕೇತವಾಗಿದ್ದು, ಅದು ಉಳಿದರೆ ನಾವು ಉಳಿಯುತ್ತೇವೆ. ಭಾಷೆಯ ಉಳಿವಿಗೆ ನಾವೆಲ್ಲರೂ ಸಂಘಟಿತರಾಗಿ ಹೋರಾಡಬೇಕು. ಇತ್ತೀಚೆಗೆ ಕನ್ನಡಿಗರಲ್ಲಿ ಕನ್ನಡದ ಅರಿವು ಮೂಡುತ್ತಿದ್ದು, ಅದು ಇನ್ನಷ್ಟು ಹೆಚ್ಚಾಗಬೇಕು’ ಎಂದು ಹೇಳಿದರು.

ರಂಗಭೂಮಿ ಕಲಾವಿದ ಅನಂತ ದೇಶಪಾಂಡೆ, ಗಾಯಕಿ ಸಾಕ್ಷಿ ಕಲ್ಲೂರ, ಕೆಎಂಸಿ–ಆರ್‌ಐ ನಿರ್ದೇಶಕ ಡಾ.ಈಶ್ವರ ಹೊಸಮನಿ, ಮುಖ್ಯ ಆಡಳಿತಾಕಾರಿ ರಮೇಶ ಕಳಸದ, ಪ್ರಾಚಾರ್ಯ ಡಾ.ಅನ್ನಪೂರ್ಣಾ ಡಿ., ಡಾ.ಕೆ.ಎಫ್.ಕಮ್ಮಾರ, ಕನ್ನಡ ಸಂಘದ ಕಾರ್ಯಾಧ್ಯಕ್ಷ ಮತ್ತು ಸ್ಥಾನಿಕ ವೈದ್ಯಾಧಿಕಾರಿ ಡಾ.ರಾಜಶೇಖರ ದ್ಯಾಬೇರಿ, ಡಾ.ಗೋಪಾಲಕೃಷ್ಣ ಮಿತ್ರ, ಡಾ.ಸ್ಮಿತಾ ಎಂ., ಸಂಘದ ಕಾರ್ಯದರ್ಶಿ ಸದಾಶಿವ ಬಟಕುರ್ಕಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.