ADVERTISEMENT

ಸಾಲ ಮರಳಿಸದ ವ್ಯಕ್ತಿಯ ಅಪಹರಣ; ಬಂಧನ

ಬಡ್ಡಿ ಹೊರೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 11:29 IST
Last Updated 15 ಜೂನ್ 2020, 11:29 IST
   

ಹುಬ್ಬಳ್ಳಿ: ಸಾಲ ಮರಳಿಸಲು ತಡ ಮಾಡಿದ್ದರಿಂದ ಹಳೇ ಹುಬ್ಬಳ್ಳಿಯ ಬಡ್ಡಿ ವ್ಯಾಪಾರಿ ಸಿದ್ದೇಶ್ವರ ಬಂಕಾಪುರ ಎಂಬಾತ, ತಾಲ್ಲೂಕಿನ ಅದರಗುಂಚಿ ಗ್ರಾಮದಲ್ಲಿ ವಾಸವಾಗಿದ್ದ ತಮಿಳುನಾಡು ಮೂಲದ ಜಿ. ಶಿವಶಂಕರ ಎಂಬುವವರನ್ನು ಅಪಹರಿಸಿ ಪೊಲೀಸರ ಅತಿಥಿಯಾಗಿದ್ದಾನೆ.

ಶಿವಶಂಕರ ಶೇ 10ರಷ್ಟು ಬಡ್ಡಿ ದರದಲ್ಲಿ ₹5 ಲಕ್ಷ ಸಾಲ ಪಡೆದಿದ್ದರು. ನಿಗದಿತ ಸಮಯಕ್ಕೆ ಸಾಲ ಮರುಪಾವತಿಸದ ಕಾರಣ ಸಿದ್ದೇಶ್ವರ, ಅದರಗುಂಚಿಯ ಶಿವಶಂಕರ ಅವರ ಮನೆಗೆ ಬೀಗ ಹಾಕಿ ಅಪಹರಿಸಿಕೊಂಡು ಬಂದು ಹಳೇ ಹುಬ್ಬಳ್ಳಿಯ ಬೃಂದಾವನ ಲಾಡ್ಜ್‌ನಲ್ಲಿ ನಾಲ್ಕು ದಿನ ಬಂಧನದಲ್ಲಿಟ್ಟಿದ್ದ. ಶಿವಶಂಕರ ಅವರಿಂದ ಸಿದ್ದೇಶ್ವರ ಒತ್ತಾಯಪೂರ್ವಕವಾಗಿ ಒಂದು ಸ್ಯಾಂಟ್ರೊ ಮತ್ತು ನ್ಯಾನೊ ಕಾರು ಕಸಿದುಕೊಂಡು ಮಾರಾಟ ಮಾಡಿದ್ದ. ಮಾರಾಟದಿಂದ ಬಂದ ಹಣವನ್ನೂ ತಾನೇ ಇಟ್ಟುಕೊಂಡಿದ್ದ.ಮನೆಯ ಮೂಲಕಾಗದ ಪತ್ರಗಳನ್ನು, ಎಂಟು ಚೆಕ್‌ಗಳನ್ನು ಕೂಡ ಪಡೆದುಕೊಂಡಿದ್ದ. ಶಿವಶಂಕರ, ಹೋಟೆಲ್‌ ಬಂಧನದಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬಯಲಾಗಿದೆ. ಈ ಕುರಿತು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಸಿದ್ದೇಶ್ವರನನ್ನು ಪತ್ತೆ ಹಚ್ಚಿದ ಪೊಲೀಸರು ಕೃತ್ಯಕ್ಕೆ ಉಪಯೋಗಿಸಿದ ಇನ್ನೊವಾ ಕಾರು, ಸ್ಯಾಂಟ್ರೊ ಕಾರು, ಮನೆಯ ಮೂಲದಾಖಲೆ ಮತ್ತು ಎಂಟು ಚೆಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸಾರ್ವಜನಿಕರು ಮೀಟರ್‌ ಬಡ್ಡಿ ಕಾರಣಕ್ಕೆ ತೊಂದರೆ ಅನುಭವಿಸುತ್ತಿದ್ದರೆ ಪೊಲೀಸ್ ಕಂಟ್ರೋಲ್ ರೂ 0836-2233555 ದೂರು ನೀಡುವಂತೆ ಪೊಲೀಸ್‌ ಇಲಾಖೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.