ಹುಬ್ಬಳ್ಳಿ: ಮಹದಾಯಿ ಐ ತೀರ್ಪಿನ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವುದು ಸ್ವಾಗತಾರ್ಹ. ಕೇಂದ್ರ ಸರ್ಕಾರ ಇನ್ನು ತಡ ಮಾಡದೆ ಅಧಿಸೂಚನೆ ಹೊರಡಿಸಬೇಕು. ಕಾಮಗಾರಿ ಆರಂಭಿಸಲು ಅಗತ್ಯ ಇರುವ ವಿವಿಧ ಇಲಾಖೆಗಳ ಅನುಮತಿಯನ್ನೂ ಕೂಡಲೇ ನೀಡಬೇಕು ಎಂದು ಕಳಸಾ– ಬಂಡೂರಿ ಹೋರಾಟಗಾರ, ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಆಗ್ರಹಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐ ತೀರ್ಪು ಹೊರಬಿದ್ದು ಒಂದು ವರ್ಷವೇ ಕಳೆದರೂ ಅಧಿಸೂಚನೆ ಹೊರಡಿಸಿರಲಿಲ್ಲ. ಈಗ ನ್ಯಾಯಾಲಯವೇ ಸೂಚನೆ ನೀಡಿರುವುದರಿಂದ ಈ ಭಾಗದ ಜನರು ನಿಟ್ಟುಸಿರುವ ಬಿಡುವಂತಾಗಿದೆ. 13.42 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಬಹುದಾಗಿದೆ ಎಂದರು.
ಹಣದ ಕೊರತೆ ಇಲ್ಲ: ಕರ್ನಾಟಕ ನೀರಾವರಿ ನಿಗಮದಲ್ಲಿ ಈಗಾಗಲೇ ಸಾಕಷ್ಟು ಹಣ ಲಭ್ಯವಿರುವುದರಿಂದ ಅನುದಾನ ಸಮಸ್ಯೆಯಾಗದು ಎಂದು ಅವರು ಅಭಿಪ್ರಾಯಪಟ್ಟರು.
ಕಳಸಾ– ಬಂಡೂರಿ ಹೋರಾಟ ಸಮಿತಿ ಸಂಚಾಲಕ ವಿಕಾಸ್ ಸೊಪ್ಪಿನ್ ಮಾತನಾಡಿ, ಕಳಸಾ ಕಾಮಗಾರಿ ಅನುದಾನದ ಅಗತ್ಯವಿಲ್ಲ. 1.5 ಟಿಎಂಸಿ ಅಡಿಯಷ್ಟು ನೀರು ನೈಸರ್ಗಿಕವಾಗಿಯೇ ಹರಿದು ಬರುತ್ತದೆ. ಬಂಡೂರಿ ನಾಲಾ ಕಾಮಗಾರಿಗೆ ಮಾತ್ರ ಟೆಂಡರ್ ಕರೆಯಬೇಕಾಗುತ್ತದೆ ಎಂದರು.
ಕಳಸಾ ಬಂಡೂರಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ಮುಖಂಡರಾದ ಬಾಬಾಜಾನ್ ಮುಧೋಳ್, ಸಿದ್ದಣ್ಣ ತೇಜಿ ಇದ್ದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ಈ ಕೂಡಲೇ ಅಧಿಸೂಚನೆ ಹೊರಡಿಸಬೇಕು ಎಂದು ಮಾಜಿ ಶಾಸಕ, ಹೋರಾಟಗಾರಎನ್.ಎಚ್. ಕೋನರಡ್ಡಿ ಹೇಳಿದರು.
ನೈಸರ್ಗಿಕವಾಗಿಯೇ ಹರಿದು ಬರುವ 1.5 ಟಿಎಂಸಿ ಅಡಿಯಷ್ಟು ನೀರನ್ನು ಕಳಸಾ ನಾಲೆಯ ಮೂಲಕ ಪಡೆದುಕೊಳ್ಳಬಹುದು ಎಂದುಕಳಸಾ– ಬಂಡೂರಿ ಹೋರಾಟ ಸಮಿತಿ ಸಂಚಾಲಕವಿಕಾಸ್ ಸೊಪ್ಪಿನ್ ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.