ADVERTISEMENT

ಸ್ವತಂತ್ರ ಅಭ್ಯರ್ಥಿ ರಾಜು ನಾಯಕವಾಡಿಗೆ ಕೆಆರ್‌ಎಸ್‌ ಬೆಂಬಲ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 11:09 IST
Last Updated 11 ಏಪ್ರಿಲ್ 2019, 11:09 IST

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜು ನಾಯಕವಾಡಿಗೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಬೆಂಬಲ ಸೂಚಿಸಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ವಿಕಾಸ ಸೊಪ್ಪಿನ ‘ಕೆಆರ್‌ಎಸ್‌ ಸಮಿತಿಯಿಂದ ಮುಂಬೈ–ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಮತ್ತು ಉತ್ತರ ಕನ್ನಡ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಧಾರವಾಡ ಕ್ಷೇತ್ರದಲ್ಲೂ ಸ್ಪರ್ಧಿಸುವ ಇರಾದೆ ಇತ್ತು. ಆದರೆ, ಕೊನೆಯಲ್ಲಿ ಸಾಧ್ಯವಾಗಲಿಲ್ಲ. ಆದ್ದರಿಂದ ಪಕ್ಷೇತರ ಅಭ್ಯರ್ಥಿ ರಾಜು ನಾಯಕವಾಡಿಗೆ ಬೆಂಬಲ ನೀಡಲಾಗುವುದು. ಅವರ ಪರ ಹತ್ತು ದಿನ ಪ್ರಚಾರ ನಡೆಸಲಾಗುವುದು’ ಎಂದರು.

‘ರಾಜಕೀಯ ಪಕ್ಷಗಳ ಚುನಾವಣಾ ಭಾಷಣಗಳು ವ್ಯಕ್ತಿಗತ ಟೀಕೆಗೆ ಸೀಮಿತವಾಗಿವೆ. ಫಸಲ್‌ ಬೀಮಾ ಯೋಜನೆ, ಯುವಜನರ ನಿರುದ್ಯೋಗ ಮತ್ತು ಮಹದಾಯಿ ಸಮಸ್ಯೆಗಳಂಥ ಗಂಭೀರ ವಿಷಯಗಳು ಚರ್ಚೆಗೆ ಬರುತ್ತಿಲ್ಲ. ಇದು ವಿಷಯಾಧಾರಿತ ಚುನಾವಣೆಯಾಗಿದೆ. ಇದರಿಂದ ಜನಸಾಮಾನ್ಯರಿಗೆ ಏನೂ ಪ್ರಯೋಜನವಾಗುತ್ತಿಲ್ಲ’ ಎಂದು ದೂರಿದರು.

ADVERTISEMENT

‘ಮಹದಾಯಿ ವಿಷಯದಲ್ಲಿ ರೈತರು ಮತ್ತು ಹೋರಾಟಗಾರರ ನಡುವೆ ಒಗ್ಗಟ್ಟು ಮುರಿದು ಹೋಗಿದೆ. ಈ ಭಾಗದ ಜನಪ್ರತಿನಿಧಿಗಳು ಕೂಡ ಸಮಸ್ಯೆ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ. ಪ್ರತಿ ಚುನಾವಣೆ ವಿಷಯದಿಂದ ಕೂಡಿರಬೇಕು. ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಇರಬೇಕು. ಇದಕ್ಕಾಗಿ ಕೆಆರ್‌ಎಸ್‌ ರಾಜ್ಯದ 17 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ’ ಎಂದರು.

ರಾಜು ನಾಯಕವಾಡಿ ಮಾತನಾಡಿ ‘ಕ್ಷೇತ್ರದಲ್ಲಿ ನೀರು, ರಸ್ತೆ, ಶಿಕ್ಷಣ, ನಿರುದ್ಯೋಗ ಹೀಗೆ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಆದ್ಯತೆ ನೀಡಲಾಗುವುದು. ಮಾಧ್ಯಮಗಳಲ್ಲಿ ಪ್ರಹ್ಲಾದ ಜೋಶಿ ಹಾಗೂ ವಿನಯ ಕುಲಕರ್ಣಿ ಪ್ರಚಾರದ ಸುದ್ದಿಗಳು ಮಾತ್ರ ಬರುತ್ತಿವೆ. ಎಲ್ಲ ಸ್ಪರ್ಧಿಗಳ ಸುದ್ದಿ ಏಕೆ ಪ್ರಕಟಿಸುವುದಿಲ್ಲ’ ಎಂದು ಪ್ರಶ್ನಿಸಿದರು

ಕೆಆರ್‌ಎಸ್‌ನ ಸದಸ್ಯರಾದ ಶ್ರೀಕಾಂತ ಮುಗಜಿಕೊಂಡಿ, ಸಂಜಯಕುಮಾರ ಪಾಟೀಲ, ಮಂಜುನಾಥ ಜಕ್ಕನ್ನವರ ಮತ್ತು ಬಸವರಾಜ ಮೊರಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.