ಹುಬ್ಬಳ್ಳಿ: ‘ಕಟ್ಟಡ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ ಅವರ ನಿವಾಸಕ್ಕೆ ಫೆ. 12ಕ್ಕೆ ‘ಸಚಿವರ ಮನೆಗೆ ಚಲೋ’ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಬಸವಶ್ರೀ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದುರುಗಪ್ಪ ಚಿಕ್ಕತುಂಬಳ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕರಲ್ಲಿ ಶೇ 30ಷ್ಟು ಟೈಲ್ಸ್ ಕಾರ್ಮಿಕರಿದ್ದಾರೆ. ಆದರೆ, ಇದುವರೆಗೆ ಅವರಿಗೆ ಯಾವುದೇ ಟೂಲ್ ಕಿಟ್ ನೀಡಿಲ್ಲ. ಅವರನ್ನು ಕಡೆಗಣಿಸಲಾಗಿದೆ. ಹಿರಿಯ ಕಾರ್ಮಿಕರಿಗೆ ಪಿಂಚಣಿ ಯೋಜನೆ ಅರ್ಜಿ ಸಲ್ಲಿಸಲು ಹೇರಿರುವ ನಿರ್ಬಂಧ ತೆರವುಗೊಳಿಸಬೇಕು. ಸೇವಾಸಿಂಧು ಪೋರ್ಟಲ್ನಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸಬೇಕು’ ಎಂದರು.
‘ಕಾರ್ಮಿಕ ಇಲಾಖೆಯಲ್ಲಿ ಹಲವು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ಆಗ್ರಹಿಸಿ, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ, ಸ್ಪಂದಿಸಿಲ್ಲ. ಹಾಗಾಗಿ, ಯಲ್ಲಾಪುರದಲ್ಲಿರುವ ಸಚಿವರ ಮನೆಗೆ ಚಲೋ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಸಂಘದ ಉಮೇಶ ಧಾರವಾಡ, ಮಲ್ಲಿಕಾರ್ಜುನ, ರಾಮಣ್ಣ ಪೂಜಾರ ಹಾಗೂ ಭೀಮಪ್ಪ ಮೇಲಿನಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.