ADVERTISEMENT

ಸೇವಾ ನ್ಯೂನತೆ: ಪರಿಹಾರ ನೀಡುವಂತೆ ಲಕ್ಷ್ಮಿ ಗೋಲ್ಡ್‌ ಪ್ಯಾಲೇಸ್‌ಗೆ ಆದೇಶ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 7:26 IST
Last Updated 13 ಡಿಸೆಂಬರ್ 2022, 7:26 IST

ಧಾರವಾಡ: ಯೋಜನೆಯೊಂದರ ಮೂಲಕ ಕಂತುಗಳಲ್ಲಿ ₹2ಲಕ್ಷ ಪಾವತಿಸಿದರೂ ಬಂಗಾರದ ನೀಡದೆ ಸೇವಾ ನ್ಯೂನತೆ ಎಸಗಿದ ಹುಬ್ಬಳ್ಳಿಯ ಲಕ್ಷ್ಮಿ ಗೋಲ್ಡ್‌ ಪ್ಯಾಲೇಸ್‌ಗೆ 64ಗ್ರಾಂ ಬಂಗಾರದೊಂದಿಗೆ ₹35ಸಾವಿರ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಗುರ್ಲಹೊಸೂರು ಗ್ರಾಮದ ಸತೀಶ ಇಜಂತಕರ ಎಂಬುವವರು ತಮ್ಮ ಮಗಳ ಹೆಸರಿನಲ್ಲಿ ‘ಆದಿತ್ಯ ಗೋಲ್ಡ್ ಪರ್ಚೇಸ್‌’ ಯೋಜನೆಯಡಿ ಒಟ್ಟು 19 ಕಂತುಗಳಲ್ಲಿ ₹2ಲಕ್ಷ ಕಟ್ಟಿದ್ದರು. ಈ ಹಣಕ್ಕೆ ಸಮನಾಂತರವಾಗಿ ಒಟ್ಟು 64.011 ಗ್ರಾಂ ಬಂಗಾರ ನೀಡಬೇಕಿದ್ದ ಮಳಿಗೆಯವರು, ಅವಧಿ ಮೀರಿದರೂ ಬಂಗಾರದ ನೀಡದೇ ಸತಾಯಿಸಿದ್ದಾರೆ. ಆ ಮೂಲಕ ಸೇವಾ ನ್ಯೂನತೆ ಎಸಗಿದ್ದಾರೆ’ ಎಂದು ಆರೋಪಿಸಿ ಸತೀಶ ಅವರು ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರಿನ ವಿಚಾರಣೆಯನ್ನು ಆಯೋಗದ ಅಧ್ಯಕ್ಷ ಈಶಪ್ಪ ಕೆ. ಭೂತೆ, ಸದಸ್ಯರಾದ ವಿ.ಅ.ಬೋಳಶೆಟ್ಟಿ ಹಾಗೂ ಪಿ.ಸಿ.ಹಿರೇಮಠ ಅವರು ನಡೆಸಿದರು.

ADVERTISEMENT

‘ಯೋಜನೆಯ ಒಪ್ಪಂದದಂತೆ ದೂರುದಾರರಿಂದ ಹಣ ಪಡೆದು ಅದಕ್ಕೆಸಮಾನಾಂತರ ಮೌಲ್ಯದ ಬಂಗಾರ ನೀಡದೆ ಲಕ್ಷ್ಮಿ ಗೋಲ್ಡ್‌ ಪ್ಯಾಲೇಸ್‌ ಸೇವಾ ನ್ಯೂನತೆ ಎಸಗಿದೆ. ಹೀಗಾಗಿ 24 ಕ್ಯಾರೆಟ್‌ನ 64.011 ಗ್ರಾಂ ತೂಕದ ಚಿನ್ನವನ್ನು ಗ್ರಾಹಕರಿಗೆ ನೀಡಬೇಕು. ಸೇವಾ ನ್ಯೂನತೆ ಎಸಗಿದ್ದಕ್ಕಾಗಿ ದೂರುದಾರರಿಗೆ ₹25ಸಾವಿರ ಪರಿಹಾರ ಮತ್ತು ₹10ಸಾವಿರ ಪ್ರಕರಣದ ವೆಚ್ಚವನ್ನು ನೀಡಬೇಕು’ ಎಂದು ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.