ಹುಬ್ಬಳ್ಳಿ: ‘ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿ ಅಗತ್ಯವಿರುವ ಭೂಮಿಯ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಒಂದು ಹಂತದ ಕಾಮಗಾರಿ ಮುಕ್ತಾಯವಾದ ನಂತರ ಮತ್ತೊಂದು ಹಂತದ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.
ರಾಣಿ ಚನ್ನಮ್ಮ ವೃತ್ತದ ಬಳಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಪರಿಶೀಲಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಿಗದಿತ ಪಡಿಸಿದ ಕಾಲಾವಧಿಯಲ್ಲೇ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದರು.
‘ನಾಲ್ಕು ತಿಂಗಳು ಮೇಲ್ಸೇತುವೆ ಕಾಮಗಾರಿ ನಡೆಯಲಿದೆ ಎಂದು ತಿಳಿಸಲಾಗಿತ್ತು. ಚನ್ನಮ್ಮ ವೃತ್ತದಿಂದ ಬಸವವನದವರೆಗೆ ಹಾಗೂ ಕೋರ್ಟ್ ವೃತ್ತದವರೆಗೆ ಏ. 20ರಿಂದ ಕಾಮಗಾರಿ ಆರಂಭವಾಗಿದ್ದು, ತ್ವರಿತವಾಗಿ ನಡೆಯುತ್ತಿದೆ. ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಗರ್ಡರ್ ಲಾಚಿಂಗ್, ಸ್ಲ್ಯಾಬ್ ಅಳವಡಿಕೆ ಹಾಗೂ ರಸ್ತೆ ಕಾಮಗಾರಿ ನಡೆಯಬೇಕಿವೆ. ಹಳೇ ಬಸ್ ನಿಲ್ದಾಣದ ಎದುರಿನ ಬಿಆರ್ಟಿಎಸ್ ಬಸ್ ನಿಲ್ದಾಣ ನೆಲಸಮಗೊಳಿಸಿ, ಅದೇ ಸ್ಥಳದಲ್ಲಿ ಫಿಲ್ಲರ್ ಅಳವಡಿಸಬೇಕಿದೆ’ ಎಂದು ತಿಳಿಸಿದರು.
‘ಒಂದು ತಿಂಗಳಲ್ಲಿ 10 ಗರ್ಡರ್ಗಳನ್ನು ನಿರ್ಮಿಸಲಾಗಿದ್ದು, ಜೂನ್ ಅಂತ್ಯದ ವೇಳೆಗೆ 60 ಗರ್ಡರ್ಗಳು ನಿರ್ಮಾಣವಾಗಲಿವೆ. ನಾಲ್ಕು ಫಿಲ್ಲರ್ಗಳು ಪೂರ್ಣಗೊಂಡಿದ್ದು, ಎರಡು ಫಿಲ್ಲರ್ಗಳು ನಿರ್ಮಾಣವಾಗಬೇಕಿದೆ. ಆ. 20ರ ಒಳಗೆ ಈ ಭಾಗದ ಕಾಮಗಾರಿ ಪೂರ್ಣಗೊಳ್ಳಲಿದೆ. ಅಗತ್ಯವಿರುವ ಕಾರ್ಮಿಕರನ್ನು ಈಗಾಗಲೇ ಹೊಂದಿಸಿಕೊಳ್ಳಲಾಗಿದೆ’ ಎಂದು ವಿವರಿಸಿದರು.
‘ನಗರದ ರಸ್ತೆಗಳು ತೀರಾ ಇಕ್ಕಟ್ಟಾಗಿರುವುದರಿಂದ ವಾಹನಗಳ ಸಂಚಾರ ನಿರ್ವಹಣೆ ದೊಡ್ಡ ಸವಾಲಾಗಿದೆ. ದೊಡ್ಡ ವಾಹನಗಳು ಹಗಲಿನ ವೇಳೆ ನಗರಕ್ಕೆ ಬರದಂತೆ ನಿಷೇಧಿಸಲಾಗಿದೆ. ಇಕ್ಕಟ್ಟಾದ ರಸ್ತೆಯಲ್ಲಿ ಪೊಲೀಸ್ ಸಿಬ್ಬಂದಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಸಾರ್ವಜನಿಕರಿಗೆ ಸಮಸ್ಯೆಯಾಗದ ಹಾಗೆ, ಹಂತ ಹಂತವಾಗಿ ಕಾಮಗಾರಿ ಕೈಗೊಂಡು, ಪೂರ್ಣಗೊಳಿಸಬೇಕಿದೆ’ ಎಂದರು.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಪರಿಂಟೆಂಡೆಂಟ್ ಎಂಜಿನಿಯರ್ ಟಿ. ಪ್ರದೀಪ, ಪಾಲಿಕೆಯ ಹೆಚ್ಚುವರಿ ಆಯುಕ್ತ ವಿಜಯಕುಮಾರ, ಡಿಸಿಪಿ ರವೀಶ ಸಿ.ಆರ್., ಎಚ್.ಜಿ. ಗುಂಡಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕಸದ ರಾಶಿ; ಡಿ.ಸಿ. ಗರಂ
ಚನ್ನಮ್ಮ ವೃತ್ತದ ಬಳಿ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದಾಗ ಅಲ್ಲಿಯೇ ಪಕ್ಕದ ಅಂಗಡಿಯ ಎದುರು ಕಸದ ರಾಶಿ ಇರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಅಧಿಕಾರಿಗಳನ್ನು ಹಾಗೂ ಅಂಗಡಿ ಮಾಲೀಕರನ್ನು ತರಾಟೆ ತೆಗೆದುಕೊಂಡರು. ನಗರ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರೂ ಯಾರೊಬ್ಬರೂ ಅದರ ಬಗ್ಗೆ ಗಮನಹರಿಸುತ್ತಿಲ್ಲ. ಪ್ರಮುಖ ಸ್ಥಳದಲ್ಲಿಯೇ ಕಸದ ರಾಶಿ ಬಿದ್ದಿದೆ ಎಂದರೆ ಏನರ್ಥ? ತಕ್ಷಣ ಪಾಲಿಕೆ ವಾಹನ ತಂದು ಶುಚಿಗೊಳಿಸಬೇಕು. ಕಸ ಚೆಲ್ಲುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.