ADVERTISEMENT

ಭೂ ಕುಸಿತ: ರೈಲ್ವೆ ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 16:28 IST
Last Updated 23 ಜುಲೈ 2021, 16:28 IST
ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ದೂಧಸಾಗರ –ಸೋನಾಲಿಯಂ ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿರುವುದು
ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ದೂಧಸಾಗರ –ಸೋನಾಲಿಯಂ ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿರುವುದು   

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ದೂಧಸಾಗರ –ಸೋನಾಲಿಯಂ ಮಾರ್ಗ ಮತ್ತು ಕಾರಂಜೊಲ್‌–ದೂಧಸಾಗರ ರೈಲು ಮಾರ್ಗದಲ್ಲಿ ಶುಕ್ರವಾರ ಬೆಳಿಗ್ಗೆ 6ರ ಸುಮಾರಿಗೆ ಭೂ ಕುಸಿತ ಸಂಭವಿಸಿತು. ಅರ್ಧ ದಾರಿಯಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಬಸ್‌ಗಳ ಮೂಲಕ ಅವರ ಸ್ಥಳಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು.

ಮಂಗಳೂರು- ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದು ಹಳಿ ತಪ್ಪಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಅವರನ್ನು ಬೇರೆ ಬೋಗಿಗಳಿಗೆ ಸ್ಥಳಾಂತರಿಸಲಾಗಿದೆ.ಹಜರತ್ ನಿಜಾಮುದ್ದೀನ್- ವಾಸ್ಕೊಡಾ ಗಾಮಾ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೂ ಅಡ್ಡಿಯಾಯಿತು.

ಎರಡೂ ರೈಲುಗಳಲ್ಲಿದ್ದ ಸುಮಾರು 1,232 ಪ್ರಯಾಣಿಕರನ್ನು ಬಸ್‌ಗಳಲ್ಲಿ ಮೂಲಕ ಬೆಳಗಾವಿ, ಹುಬ್ಬಳ್ಳಿ ರೈಲ್ವೆ‌ ನಿಲ್ದಾಣಕ್ಕೆ ಕರೆದುಕೊಂಡು ಬರಲಾಯಿತು. ಎಲ್ಲರಿಗೂ ಆಹಾರದ ವ್ಯವಸ್ಥೆ ಮಾಡಲಾಯಿತು. ಭೂ ಕುಸಿತ ಸಂಭವಿಸಿದ ರೈಲ್ವೆ ಮಾರ್ಗಗಳಲ್ಲಿ 60ಕ್ಕೂ ಹೆಚ್ಚು ಕಾರ್ಮಿಕರೊಂದಿಗೆ ಜೆಸಿಬಿ, ಬುಲ್ಡೋಜರ್ ಮತ್ತು ಹಿಟಾಚಿಗಳನ್ನು ಬಳಸಿ ದುರಸ್ತಿ ಕಾರ್ಯ ಕೈಗೊಳ್ಳಲಾಯಿತು.ಘಟನಾ ಸ್ಥಳಕ್ಕೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲ್ಕೇಡೆ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ರೈಲು ರದ್ದು
ಹುಬ್ಬಳ್ಳಿ:
ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಸೊನಾಲಿಯಂ–ಕುಲೇಂ ಮಾರ್ಗದಲ್ಲಿ ರೈಲಿನ ಬೋಗಿ ಹಳಿ ತಪ್ಪಿರುವುದರಿಂದ ಹಾಗೂ ದೂಧಸಾಗರ–ಕ್ಯಾರಂಜೊಲ್ ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿರುವುದರಿಂದ ಕೆಲ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.

ಜುಲೈ 24ರಂದು ದಾದರ್–ಹುಬ್ಬಳ್ಳಿ ಎಕ್ಸ್‌ಪ್ರೆಸ್ (07318), ಬೆಳಗಾವಿ–ಮೈಸೂರು ಎಕ್ಸ್‌ಪ್ರೆಸ್, ಹಜರತ್ ನಿಜಾಮುದ್ದೀನ್– ವಾಸ್ಕೊಡಾ ಗಾಮ ಎಕ್ಸ್‌ಪ್ರೆಸ್ ಸಂಚಾರವನ್ನು ಜುಲೈ 25ರಂದು ಹಾಗೂ ಹೌರಾ– ವಾಸ್ಕೊಡಾ ಗಾಮಾ ಎಕ್ಸ್‌ಪ್ರೆಸ್ (08047) ಅನ್ನು ಜುಲೈ 26ರವರೆಗೆ ರದ್ದುಪಡಿಸಲಾಗಿದೆ.ಮಳೆಯಿಂದಾಗಿ ಅಳ್ನಾವರ– ಲೋಂಡಾ ಮಾರ್ಗದ ರೈಲ್ವೆ ಸೇತುವೆಯ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ಈ ಮಾರ್ಗದ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಯಾಣಿಕರ ಮಾಹಿತಿ ಕೇಂದ್ರ ಆರಂಭ
ಪ್ರಯಾಣಿಕರ ಕುರಿತ ಮಾಹಿತಿಗಾಗಿ ನಿಲ್ದಾಣವಾರು ಸಹಾಯವಾಣಿಯೊಂದಿಗೆ ಮಾಹಿತಿ ಕೇಂದ್ರವನ್ನು ಆರಂಭಿಸಲಾಗಿದೆ. ಹುಬ್ಬಳ್ಳಿ– 9481011214 (ದೊಡ್ಡಮನಿ), ಲೋಂಡಾ– 9606005620 (ಪ್ರಶಾಂತ್), ವಾಸ್ಕೊಡಾ ಗಾಮ–9606005617 (ಶ್ರೀನಿವಾಸ್), ಬೆಳಗಾವಿ–9448339567 (ಪ್ರಕಾಶ್ ಜಿ.), ಗದಗ– 9980711240 (ಮಹೇಶ್), ಬಳ್ಳಾರಿ– 9482723235 (ಪ್ರಶಾಂತ್), ಧಾರವಾಡ– 9986072807 (ಹುಲಗಪ್ಪ), ಹೊಸಪೇಟೆ –9491040425 (ರಮೇಶಬಾಬು) ಹಾಗೂ ಕೊಪ್ಪಳ –9916932062(ಈರಪ್ಪ ತಳವಾರ) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.