ADVERTISEMENT

ಹುಬ್ಬಳ್ಳಿ: ಭಯ ಬಿಟ್ಟು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬನ್ನಿ

ಜುಲೈ 19, 22ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ; ಮೂರು ಬಣ್ಣಗಳಲ್ಲಿ ಒಎಂಆರ್‌ ಶೀಟ್‌

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 3:33 IST
Last Updated 14 ಜುಲೈ 2021, 3:33 IST
ಹುಬ್ಬಳ್ಳಿಯ ‘ಪ್ರಜಾವಾಣಿ’ ಬ್ಯುರೊ ಕಚೇರಿಯಲ್ಲಿ ಮಂಗಳವಾರ ನಡೆದ ‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್‌. ಮಾಯಾಚಾರ್ಯ, ಜಿಲ್ಲಾ ಪಂಚಾಯ್ತಿ ಸಿಇಒ ಆಪ್ತ ಸಹಾಯಕ ಅಭಿನಂದನ್‌, ಡಿಡಿಪಿಐ ಕಚೇರಿ ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ, ಹುಬ್ಬಳ್ಳಿ ಗ್ರಾಮೀಣ ಬಿಇಒ ಅಶೋಕ ಸಿಂದಗಿ, ಡಿಡಿಪಿಐ ಮೋಹನ ಹಂಚಾಟೆ, ಜಿ.ಪಂ. ಸಿಇಒ ಡಾ. ಸುಶೀಲಾ ಬಿ., ಧಾರವಾಡ ಗ್ರಾಮೀಣ ಬಿಇಒ ಉಮೇಶ ಬೊಮ್ಮಕ್ಕನವರ, ಧಾರವಾಡ ಶಹರ ಬಿಇಒ ಗಿರೀಶ ಪದಕಿ ಹಾಗೂ ಹುಬ್ಬಳ್ಳಿ ಶಹರ ಬಿಇಒ ಶ್ರೀಶೈಲ ಕರಿಕಟ್ಟಿ ಭಾಗವಹಿಸಿದ್ದರು
ಹುಬ್ಬಳ್ಳಿಯ ‘ಪ್ರಜಾವಾಣಿ’ ಬ್ಯುರೊ ಕಚೇರಿಯಲ್ಲಿ ಮಂಗಳವಾರ ನಡೆದ ‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್‌. ಮಾಯಾಚಾರ್ಯ, ಜಿಲ್ಲಾ ಪಂಚಾಯ್ತಿ ಸಿಇಒ ಆಪ್ತ ಸಹಾಯಕ ಅಭಿನಂದನ್‌, ಡಿಡಿಪಿಐ ಕಚೇರಿ ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ, ಹುಬ್ಬಳ್ಳಿ ಗ್ರಾಮೀಣ ಬಿಇಒ ಅಶೋಕ ಸಿಂದಗಿ, ಡಿಡಿಪಿಐ ಮೋಹನ ಹಂಚಾಟೆ, ಜಿ.ಪಂ. ಸಿಇಒ ಡಾ. ಸುಶೀಲಾ ಬಿ., ಧಾರವಾಡ ಗ್ರಾಮೀಣ ಬಿಇಒ ಉಮೇಶ ಬೊಮ್ಮಕ್ಕನವರ, ಧಾರವಾಡ ಶಹರ ಬಿಇಒ ಗಿರೀಶ ಪದಕಿ ಹಾಗೂ ಹುಬ್ಬಳ್ಳಿ ಶಹರ ಬಿಇಒ ಶ್ರೀಶೈಲ ಕರಿಕಟ್ಟಿ ಭಾಗವಹಿಸಿದ್ದರು   

ಹುಬ್ಬಳ್ಳಿ: ಸರ್‌, ನನಗ ಪರೀಕ್ಷೆ ಅಂದ್ರ ಭಯ ಆಗಾಕ ಹತ್ತದ...ಏನ್‌ ಮಾಡ್ಲಿ? ನಮ್ಮ ಮಕ್ಕಳು ಪರೀಕ್ಷೆ ಬರ‍್ಯಾಕ ಕೇಂದ್ರದಾಗ ಏನೇನ್ ವ್ಯವಸ್ಥೆ ಮಾಡಿದಿರಿ? ಕೋವಿಡ್‌ ಲಕ್ಷಣ ಇರೋ ವಿದ್ಯಾರ್ಥಿಗಳಿಗಾಗಿ ಏನ್‌ ವಿಶೇಷ ಸುರಕ್ಷತಾ ಕ್ರಮ ಕೈಗೊಂಡಿರಿ? ಫಲಿತಾಂಶಕ್ಕಾಗಿ ಯಾವ ಕ್ರಮ ಅನುಸರಿಸ್ತಿರಿ....

ಹೀಗೆ ಸಾಲು ಸಾಲು ಪ್ರಶ್ನೆಗಳು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಕೇಳಿಬಂದಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಮಂಗಳವಾರ ‘ಪ್ರಜಾವಾಣಿ’ ಆಯೋಜಿಸಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ.

ವಿದ್ಯಾರ್ಥಿಗಳು ಮತ್ತು ಪಾಲಕರ ಸಂದೇಹಗಳಿಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಸುಶೀಲಾ ಬಿ. ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಜಿಲ್ಲಾ ಉಪನಿರ್ದೇಶಕ ಮೋಹನ ಎಲ್‌. ಹಂಚಾಟೆ ಉತ್ತರಿಸಿದರು. ಜಿಲ್ಲೆಯ 161 ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲೂಸುರಕ್ಷತಾ ಮಾರ್ಗಸೂಚಿ (ಎಸ್ಒಪಿ) ಅಳವಡಿಸಿದ್ದು, ವಿದ್ಯಾರ್ಥಿಗಳೆಲ್ಲರೂ ಭಯಬಿಟ್ಟು ಪರೀಕ್ಷೆ ಬರೆಯಿರಿ ಎಂದು ಆತ್ಮವಿಶ್ವಾಸ ತುಂಬಿದರು.

ADVERTISEMENT

ಫೋನ್‌–ಇನ್‌ನಲ್ಲಿ ಕೇಳಿಬಂದ ಪ್ರಶ್ನೆಗಳು ಮತ್ತು ಪರಿಹಾರಗಳು:

* ಆನಂದ, ಹುಬ್ಬಳ್ಳಿ; ಒಎಂಆರ್‌ ಶೀಟ್‌ ಹೇಗಿರುತ್ತೆ? ಭಾವಚಿತ್ರ, ನೋಂದಣಿ ಸಂಖ್ಯೆ ಇರಲಿದೆಯೇ?

ಎಲ್ಲಾ ವಿವರಗಳು ಒಎಂಆರ್‌ ಶೀಟ್‌ನಲ್ಲಿರಲಿವೆ. ನೀವು ಸಹಿ ಮಾತ್ರ ಮಾಡಬೇಕು. ಒಎಂಆರ್‌ ಶೀಟ್‌ನಲ್ಲಿ ಏನೇನು ಅಂಶಗಳನ್ನು ಭರ್ತಿ ಮಾಡಬೇಕು ಎಂಬುದನ್ನು ಐದು ನಿಮಿಷ ವಿವರಿಸಲಾಗುವುದು. ಹೀಗಾಗಿ ಒಂದು ಗಂಟೆ ಮೊದಲೇ ಕೇಂದ್ರಕ್ಕೆ ಬನ್ನಿ.

* ಅವಿನಾಶ್, ಬೀಳಗಿ (ಬಾಗಲಕೋಟೆ ಜಿಲ್ಲೆ): ಪರೀಕ್ಷೆ ವಿಧಾನ ಬದಲಾವಣೆ ಕುರಿತು ಭಯವಿದೆ.

ಭಯ ಬೇಡ. ಪ್ರಶ್ನೆಗಳು ಸರಳ ಹಾಗೂ ನೇರವಾಗಿರಲಿವೆ. ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ಎದುರಿಸಿ.

*ಶಿವಾನಂದ, ಕೊಟಬಾಗಿ: ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಯೊಂದರಲ್ಲಿ ಉತ್ತರ ತಪ್ಪಿತ್ತು.ಒಎಂಆರ್‌ ಶೀಟ್‌ನಲ್ಲಿ ವೈಯಕ್ತಿಕ ಮಾಹಿತಿ ತುಂಬಲು ಪ್ರತ್ಯೇಕ ಸಮಯ ಇರಲಿದೆಯೇ?

ಕೀ ಉತ್ತರ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು. ವಿದ್ಯಾರ್ಥಿ ಹೆಸರು, ನೋಂದಣಿ ಸಂಖ್ಯೆ, ಶಾಲೆ ಹೆಸರು, ಪ್ರಶ್ನೆಪತ್ರಿಕೆ ಸಂಖ್ಯೆ ಪ್ರಿಂಟ್‌ ಮಾಡಿಯೇ ಕೊಡಲಾ
ಗಿರುತ್ತದೆ. ಅದನ್ನು ಪರಿಶೀಲಿಸಿಕೊಳ್ಳಲು ಪ್ರತ್ಯೇಕ ಸಮಯವಿರುತ್ತದೆ. ಇದರ ಮಾದರಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

* ಪ್ರಮೋದ್‌, ಗುರು, ಅರವಿಂದನಗರ, ಹುಬ್ಬಳ್ಳಿ: ಕೋವಿಡ್‌ ಸಂದರ್ಭದಲ್ಲಿ ಪರೀಕ್ಷೆ ನಡೆಯುತ್ತಿದೆ. ಇದು ವಿದ್ಯಾರ್ಥಿಗಳಿಗೆ ಸುರಕ್ಷಿತವೇ?

ಪರೀಕ್ಷಾ ಕೇಂದ್ರಗಳು ಸಂಪೂರ್ಣ ಸುರಕ್ಷಿತವಾಗಿವೆ. ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಆತಂಕದ ಅಗತ್ಯವಿಲ್ಲ.

*ಮಾದಪ್ಪ, ಹುಬ್ಬಳ್ಳಿ: ತಮ್ಮನಿಗೆ ಕೋವಿಡ್‌ ದೃಢಪಟ್ಟು ವಾರವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಪರೀಕ್ಷೆಗೆ ಕಳುಹಿಸುವುದು ಸುರಕ್ಷಿತವೇ?

ಇನ್ನೊಂದು ವಾರದಲ್ಲಿ 14 ದಿನಗಳ ಐಸೋಲೇಷನ್‌ ಮುಗಿಯುತ್ತದೆ. ಈಚೆಗೆ ಕೋವಿಡ್‌ ದೃಢಪಟ್ಟವರು, ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರು ಶಾಲೆಗೆ ತಿಳಿಸಿದರೆ, ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಐಸೋಲೇಟ್ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುವುದು.

*ಪ್ರಶಾಂತ ಗಡಾದ, ನವನಗರ: ಮೊದಲು ಒಂದು ಕೇಂದ್ರದಲ್ಲಿ ಹೆಚ್ಚು ಜನ ಇರುತ್ತಿದ್ದರು. ಈಗ ಕಡಿಮೆ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನೀಡಲಾಗುತ್ತಿದೆ. ದೂರದೂರಿನ ವಿದ್ಯಾರ್ಥಿಗಳಿಗೆ ಬಸ್‌ ವ್ಯವಸ್ಥೆ ಇದೆಯೇ?

ಪ್ರತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದು ನಿಜ. ಆದರೆ, ಹಿಂದಿನಿಗಿಂತ ಈ ಬಾರಿ ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ವಿದ್ಯಾರ್ಥಿಗಳಿಗೆ ಸಮೀಪವಿರುವಂತೆ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಇಲಾಖೆಯಿಂದ ಸಾರಿಗೆ ವ್ಯವಸ್ಥೆ ಇರುವುದಿಲ್ಲ.

*ರಾಜಶೇಖರ, ಅಳ್ನಾವರ: ಮಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಳೆ. ಅವಳ ಪ್ರವೇಶಪತ್ರದಲ್ಲಿ ಅನೇಕ ತಪ್ಪುಗಳಿವೆ. ಇದರಿಂದ ಸಮಸ್ಯೆ ಆಗುವುದೇ?

ನೋಂದಣಿ ಸಂಖ್ಯೆ, ಹೆಸರು ತಪ್ಪಾಗಿದ್ದರೆ ಶಾಲೆಗೆ ತಕ್ಷಣ ಮಾಹಿತಿ ನೀಡಿ ಸರಿಪಡಿಸಿಕೊಳ್ಳಿ.

*ಸುರೇಶ ಮಡಿವಾಳ, ಕಲಘಟಗಿ: ಪ್ರತಿ ವಿಷಯದ ಅಂಕಗಳನ್ನು ಹೇಗೆ ನಿರ್ಧರಿಸಲಾಗುತ್ತದೆ?

ವಿಷಯವಾರು 20 ಆಂತರಿಕ ಅಂಕಗಳಿವೆ. ಉಳಿದ 80 ಅಂಕಗಳಿಗೆ ಪರೀಕ್ಷೆ ಬರೆಯಬೇಕು. ಒಟ್ಟು 40 ಪ್ರಶ್ನೆಗಳಿದ್ದು, ಇವೆಲ್ಲವೂ ಬಹುಆಯ್ಕೆ ಮಾದರಿ ಒಳಗೊಂಡಿರುತ್ತವೆ. ಪ್ರತಿ ಪ್ರಶ್ನೆಗೆ 2 ಅಂಕಗಳಿರುತ್ತವೆ. ವಿದ್ಯಾರ್ಥಿ ನೀಡುವ ಸರಿ ಉತ್ತರಗಳನ್ನು ನಿರ್ಧರಿಸಿ ಅಂಕ ನೀಡಲಾಗುತ್ತದೆ.

*ಮುತ್ತು ಮಡಿವಾಳ, ಧಾರವಾಡ: ಬಹುಆಯ್ಕೆ ಪ್ರಶ್ನೆಗಳು ಹೇಗಿರುತ್ತವೆ?

ವಿಷಯವಾರು ಕೇಳಲಾದ ಬಹುಆಯ್ಕೆ ಪ್ರಶ್ನೆಗಳಿಗೆ ಸರಳವಾಗಿ ಉತ್ತರಿಸಬಹುದಾಗಿದೆ. ಈಗಾಗಲೆ ವಿದ್ಯಾರ್ಥಿಗಳಿಗೆ ಒಎಂಆರ್‌ ಶೀಟ್‌ ಮಾದರಿ ನೀಡಿ, ಅಭ್ಯಾಸ ಮಾಡಿಸಲಾಗಿದೆ. ಈ ಬಗ್ಗೆ ಸ್ಪಷ್ಟ ಅರಿವು ಮೂಡಿಸಲಾಗಿದೆ. ಗೊಂದಲ ಬೇಡ.

*ನವೀನ್‌, ಹುಬ್ಬಳ್ಳಿ: ಕೋವಿಡ್ ಲಕ್ಷಣವಿರುವ ವಿದ್ಯಾರ್ಥಿಗಳನ್ನು ಪರೀಕ್ಷೆ ಕೇಂದ್ರಕ್ಕೆ ಕರೆತರಲು ಯಾವ ವ್ಯವಸ್ಥೆ ಮಾಡಲಾಗಿದೆ? ಸಾರ್ವಜನಿಕ ಸಾರಿಗೆಯಲ್ಲೇ ಅವರು ಬರಬೇಕೇ?

ಕೋವಿಡ್‌ ಲಕ್ಷಣವಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಯಾವುದೇ ತೊಂದರೆ ಇಲ್ಲದಂತೆ ವ್ಯವಸ್ಥೆ ಮಾಡಲಾಗಿದೆ. ಅಂತಹವರಿಗಾಗಿ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಪ್ರತ್ಯೇಕ ಐಸೊಲೇಷನ್‌ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಅವರನ್ನು ಕರೆದುಕೊಂಡು ಬರಲು, ವಾಪಸ್‌ ಕರೆದೊಯ್ಯಲು ತಾಲ್ಲೂಕಿಗೊಂದು ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ.

*ಆಶಾ, ನವನಗರ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ರದ್ದುಮಾಡಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಮಾಡುವುದು ಸೂಕ್ತವಲ್ಲವೇ?

ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಮಹತ್ವದ ಹಂತ. ಮುಂದಿನ ಕಾಲೇಜು ಹಾದಿಯನ್ನು ಇದು ನಿರ್ಧರಿಸುತ್ತದೆ. ವಿವಿಧ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಈ ಪರೀಕ್ಷೆ ಮಾನದಂಡವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಪರೀಕ್ಷೆ ನಡೆಸಲು ನಿರ್ಧಾರ ಮಾಡಿದೆ.

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಇರಲಿದೆ ‘ಹೆಲ್ತ್‌ ಟೀಂ’

ಸರ್ಕಾರದ ನಿರ್ದೇಶನದಂತೆ ಕೋವಿಡ್ ಸುರಕ್ಷತಾ ಕ್ರಮ ಕ್ರಮಗಳೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರೋಗ್ಯ ಇಲಾಖೆಯ‘ಹೆಲ್ತ್‌ ಟೀಂ’ ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಇರಲಿದೆ. ಸೋಂಕಿತ ಪರೀಕ್ಷಾರ್ಥಿಗಳು ಹಾಗೂ ರೋಗದ ಲಕ್ಷಣವುಳ್ಳವರಿಗಾಗಿ ಐಸೋಲೇಷನ್‌ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಜ್ವರದಿಂದ ಬಳಲುವವರನ್ನು ಮನೆಗೆ ತಲುಪಿಸಲು ಆಂಬುಲೆನ್ಸ್‌ ವ್ಯವಸ್ಥೆಯೂ ಇದೆ ಎಂದು ಡಾ. ಸುಶೀಲಾ ಬಿ. ಅವರು ಹೇಳಿದರು.

ಜಿಲ್ಲೆಯಲ್ಲಿ ಜನವರಿಯಿಂದಲೇ ಪರೀಕ್ಷೆ ಸಿದ್ಧತೆ ನಡೆಸಲಾಗಿದೆ. ಬದಲಾದ ವಿಧಾನದ ಬಗ್ಗೆ ಮಕ್ಕಳಿಗೆ ಆಗಾಗ ಮಾಹಿತಿ ನೀಡಲಾಗಿದೆ. ಆನ್‌ಲೈನ್‌ ತರಗತಿ ನಡೆಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕೌನ್ಸೆಲಿಂಗ್‌ ಮಾಡಲಾಗಿದೆ. ಕಲಿಕೆಯ ಹೊರೆ ಇಳಿಸಲು ಪಠ್ಯದ ಶೇ 50ರಷ್ಟು ಭಾಗ ಕಡಿತ ಮಾಡಲಾಗಿದೆ. ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್‌ ಶೀಟ್‌ಗಳ ವಿವರವನ್ನು ಎಲ್ಲರಿಗೂ ನೀಡಲಾಗಿದೆ. ಮೊಬೈಲ್‌ ಸೌಲಭ್ಯ ಇಲ್ಲದ ಮಕ್ಕಳನ್ನು ಗುರುತಿಸಿರುವ ಶಿಕ್ಷಕರ ತಂಡ, ಅಂಥವರನ್ನುಶಾಲೆಗೇ ಕರೆತಂದು ನೂತನ ಪರೀಕ್ಷಾ ವಿಧಾನದ ಪರಿಚಯ ಮಾಡಿಕೊಟ್ಟಿದೆ ಎಂದು ವಿವರಿಸಿದರು.

ಆತಂಕಕ್ಕೆ ಒಳಗಾಗಬೇಕಿಲ್ಲ

ಪ‍ರೀಕ್ಷೆಗಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಪರೀಕ್ಷಾ ಕೇಂದ್ರಗಳು ಸುರಕ್ಷಿತ ತಾಣಗಳಾಗಿವೆ. ಮಕ್ಕಳು ಧೈರ್ಯದಿಂದ ಪರೀಕ್ಷಾ ಕೇಂದ್ರಕ್ಕೆ ಬರಬೇಕು. ಪಾಲಕರು ಆತಂಕಕ್ಕೆ ಒಳಗಾಗಬೇಕಿಲ್ಲ. ಪರೀಕ್ಷೆಗೆ ನಿಯೋಜನೆಗೊಂಡ ಎಲ್ಲಾ ಸಿಬ್ಬಂದಿ ಕೋವಿಡ್ ಲಸಿಕೆ ಮೊದಲ ಡೋಸ್ ಪಡೆದಿದ್ದಾರೆ. ಶೇ 30ರಷ್ಟು ಸಿಬ್ಬಂದಿ ಎರಡನೇ ಡೋಸ್‌ ಪಡೆದಿದ್ದಾರೆ. ಪರೀಕ್ಷೆಗಾಗಿ ಅವರಿಗೆ ಸೂಕ್ತ ತರಬೇತಿಯನ್ನೂ ನೀಡಲಾಗಿದೆ ಎಂದು ಮೋಹನ ಎಲ್. ಹಂಚಾಟೆ ಹೇಳಿದರು.

ಮೂರುಬಣ್ಣದ ಒಎಂಆರ್‌ ಶೀಟ್‌

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಎಂಆರ್‌ ಶೀಟ್‌ ನೀಡುತ್ತಿರುವುದು ವಿಶೇಷ. ಮೂರು ಬಣ್ಣಗಳಲ್ಲಿ ಒಎಂಆರ್‌ ಶೀಟ್‌ ಇರಲಿವೆ. ಗಣಿತ, ಪ್ರಥಮ ಭಾಷೆಯ ಪರೀಕ್ಷೆಗೆ ಗುಲಾಬಿ, ವಿಜ್ಞಾನ, ದ್ವಿತೀಯ ಭಾಷೆಯ ವಿಷಯಕ್ಕೆ ಕಿತ್ತಳೆ ಬಣ್ಣ ಹಾಗೂ ಸಮಾಜ ವಿಜ್ಞಾನ, ತೃತೀಯ ಭಾಷೆಯ ವಿಷಯಕ್ಕೆ ಹಸಿರು ಬಣ್ಣದ ಒಎಂಆರ್‌ ಶೀಟ್‌ ನೀಡಲಾಗುತ್ತಿದೆ. ಈ ಬಗ್ಗೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.