ಹುಬ್ಬಳ್ಳಿ: ‘ಹೆಣ್ಣಾಗಿ ಹುಟ್ಟಿದ್ದು ಶಾಪ ಎಂದು ಭಾವಿಸದೆ ಸಾಧನೆ ಮಾಡೋಣ’ ಎಂದುಕುಸುಗಲ್ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಐಶ್ವರ್ಯ ಸವದತ್ತಿ ಹೇಳಿದರು.
ಕುಸುಗಲ್ ಗ್ರಾಮ ಪಂಚಾಯ್ತಿ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮ ಪಂಚಾಯ್ತಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಬಾಲ್ಯ ವಿವಾಹ ನಿಷೇಧ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಲ್ಪನಾ ಚಾವ್ಲಾ, ಸುಧಾಮೂರ್ತಿ ಸೇರಿದಂತೆ ಹಲವು ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಹೆಣ್ಣು ಮಕ್ಕಳಿಗೆ ಸಾಧನೆ ಮಾಡಲು ಹಲವು ಅವಕಾಶಗಳಿವೆ’ ಎಂದರು.
ವೀಣಾ ಬಿ ಮಾತನಾಡಿದರು. ಬಾಲ್ಯ ವಿವಾಹ ನಿಷೇಧ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬಾಲ್ಯ ವಿವಾಹ ತಡೆ ಸಂಬಂಧಿಸಿದ ಜಾಗೃತಿ ವಿಡಿಯೊ ಪ್ರದರ್ಶಿಸಲಾಯಿತು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಕೀರಾಬಾನು ಹುಬ್ಬಳ್ಳಿ, ಉಪಾಧ್ಯಕ್ಷೆ ನೀಲವ್ವ ಡಾಲಾಯತರ, ಪ್ರೌಢಶಾಲೆಯ ಮುಖ್ಯಶಿಕ್ಷಕಿ ಪಿ.ಆರ್.ಮ್ಯಾಗೇರಿ, ಪಿಡಿಒ ಶಶಿಧರ ಮಂಟೂರ, ಶೈಲಜಾ ಅರಕೇರಿ, ನಾಗರತ್ನ ಚನ್ನೋಜಿ, ಹುಸ್ಮಾನ ಮುಲ್ಲಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.