ಹುಬ್ಬಳ್ಳಿ: ‘ಸಾಹಿತ್ಯದ ಓದು ಮತ್ತು ಬರಹ ಜನರನ್ನು ಜೀವನ್ಮುಖಿಯಾಗಿಸುತ್ತವೆ’ ಎಂದು ಸಾಹಿತಿ ಸರಿತಾ ನವಲಿ ಹೇಳಿದರು.
ಇಲ್ಲಿನ ಬಿ.ವಿ.ಬಿ ಎಂಜಿನಿಯರ್ ಕಾಲೇಜಿನಲ್ಲಿ ಶ್ರಾವಣ ಸಾಹಿತ್ಯ, ಸಾಂಸ್ಕೃತಿಕ ಸಂಘ ಮತ್ತು ಶ್ರಾವಣ ಬ್ಲಾಗ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಪುಸ್ತಕ ಬಿಡುಗಡೆ- ಅವಲೋಕನ, ಕವಿಗೋಷ್ಠಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ವಿದೇಶದಲ್ಲಿದ್ದರೂ ನಮ್ಮೂರಿನ ಸಂಸ್ಕೃತಿ ಉಳಿಸಿಕೊಂಡಿದ್ದೇವೆ. ವಿದೇಶದಲ್ಲೂ ಕನ್ನಡ ಸಾಹಿತ್ಯ ಉಳಿವಿಗೆ ಹಲವರು ಶ್ರಮಿಸುತ್ತಿದ್ದಾರೆ’ ಎಂದರು.
ಸರಿತಾ ನವಲಿ ಅವರ ಕಥಾ ಸಂಕಲನ ‘ಆವನಾವನು ಕಾಯ್ವ’ ಬಗ್ಗೆ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಮಕ್ಕಳ ಕಾದಂಬರಿ ‘ಓಡಿ ಹೋದ ಹುಡುಗ’ ಬಗ್ಗೆ ಶಾಲಿನಿ ರುದ್ರಮುನಿ, ‘ಮತ್ತೆ ಹೊಸ ಗೆಳೆಯರು’ ಕುರಿತು ನಾಗರಾಜ ಹುಡೇದ ಮಾತನಾಡಿದರು.
‘ಶ್ರಾವಣ ಬ್ಲಾಗ್’ನ ಸಂಪಾದಕ ರವಿಶಂಕರ ಗಡಿಯಪ್ಪನವರ ಮಾತನಾಡಿ, ‘ಬೇಂದ್ರೆ ನೆಲದ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ‘ಶ್ರಾವಣ ಬ್ಲಾಗ್’ ತನ್ನದೇ ಸೇವೆ ಸಲ್ಲಿಸುತ್ತಿದೆ’ ಎಂದರು.
ಸರಿತಾ ನವಲಿ, ಡಾ.ಬಸು ಬೇವಿನಗಿಡದ, ವೈ.ಜಿ. ಭಗವತಿ ಹಾಗೂ ಸಂಜೀವ್ದುಮಕನಾಳ ಅವರನ್ನು ಸನ್ಮಾನಿಸಲಾಯಿತು.
ಅರವಿಂದ ಕುಲಕರ್ಣಿ, ಶಂಕರಗೌಡ ಸಾತ್ಮಾರ, ಅಹ್ನೀಶ್ ಭಾರದ್ವಾಜ, ವೈ.ಜಿ. ಭಗವತಿ, ಆರ್.ಎಂ.ಗೋಗೇರಿ, ಡಾ.ಸರೋಜಾ ಮೇಟಿ, ಸವಿತಾ ಲಿಂಗಾರೆಡ್ಡಿ, ಸಿದ್ದರಾಮ ಹಿಪ್ಪರಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.