ADVERTISEMENT

ಎಸ್‌ಸಿ ಮೀಸಲಾತಿಗೆ ಮಡಿವಾಳ ಸಮುದಾಯ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 17:00 IST
Last Updated 20 ಜನವರಿ 2022, 17:00 IST

ಹುಬ್ಬಳ್ಳಿ: ‘ಮಡಿವಾಳ ಸಮುದಾಯಕ್ಕೆ ಎಸ್‌ಸಿ ಮೀಸಲಾತಿ ನೀಡಬೇಕು ಹಾಗೂ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ ಕೂಡಲೇ ಅಧ್ಯಕ್ಷರನ್ನು ನೇಮಕ ಮಾಡಬೇಕು’ ಎಂದು ನಗರದ ಗುರು ಮಡಿವಾಳ ಮಾಚಿದೇವ ಸ್ವಸಹಾಯ ಸಂಘದ ಸದಸ್ಯ ಪರಶುರಾಮ ಮಡಿವಾಳ ಆಗ್ರಹಿಸಿದರು.

‘ಬಿ‌.ಎಸ್. ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಸಮುದಾಯಕ್ಕೆ ಎಸ್‌ಸಿ ಮೀಸಲಾತಿ ನೀಡುವ ಕುರಿತು ಅನ್ನಪೂರ್ಣಮ್ಮ ಅವರು ನೀಡಿರುವ ವರದಿಯನ್ನು ಜಾರಿಗೊಳಿಸಬೇಕು. ಪ್ರತಿ ಜಿಲ್ಲೆಯಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹಾಸ್ಟೇಲ್ ಹಾಗೂ ಸಮುದಾಯ ಭವನ ನಿರ್ಮಿಸಬೇಕು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಸಮುದಾಯವು ಹಿಂದುಳಿದ ವರ್ಗದ ಜಾತಿಗಳ ಪಟ್ಟಿಯಲ್ಲಿದೆ. ಆದರೆ, ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಕಂದಾಯ ಇಲಾಖೆಯು ಲಿಂಗಾಯತ ಜಾತಿ ಹೆಸರಿನಲ್ಲಿ ನಮೂದಿಸುತ್ತಿವೆ. ಇದರಿಂದಾಗಿ, ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಸೌಲಭ್ಯಗಳಿಂದಲೂ ಸಮುದಾಯದ ವಂಚಿತವಾಗಿದೆ. ಈ ದೋಷವನ್ನು ಸರಿಪಡಿಸಬೇಕು’ ಹೇಳಿದರು.

ADVERTISEMENT

‘ಸರ್ಕಾರಿ ಕಚೇರಿಗಳಲ್ಲಿ ಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕು. ಜಿಲ್ಲೆ, ತಾಲ್ಲೂಕು ಹಾಗೂ ಸ್ಥಳೀಯ ಮಟ್ಟದಲ್ಲಿ ದೋಭಿ ಘಾಟ್ ನಿರ್ಮಿಸಿ, ವೃತ್ತಿಗೆ ಅಗತ್ಯವಿರುವ ಸಲಕರಣೆಗಳನ್ನು ಒದಗಿಸಬೇಕು.‌ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ಆರಂಭಿಸಲಾಗುವುದು’ ಎಂದು ತಿಳಿಸಿದರು.

ಸಂಘದ ಸದಸ್ಯರಾದ ಪ್ರಕಾಶ ಮಡಿವಾಳರ, ಚನ್ನಬಸಪ್ಪ ಮಡಿವಾಳರ ಹಾಗೂ ಹನುಮಂತಪ್ಪ ಮಡಿವಾಳರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.