ಹುಬ್ಬಳ್ಳಿ: ಕೇಶ್ವಾಪುರದ ಗಜಾನನ ಎಂಬುವವರನ್ನು ಅಪರಿಚಿತ ಮಹಿಳೆಯೊಬ್ಬಳು ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡು ಬೆದರಿಸಿ ಹಣ ಪೀಕಲು ಯತ್ನಿಸಿದ ಘಟನೆ ನಡೆದಿದೆ.
ರಿಯಾ ಶರ್ಮಾ ಎನ್ನುವ ಮಹಿಳೆ ಗಜಾನನ ಎಂಬುವವರಿಗೆ ವಾಟ್ಸ್ ಆ್ಯಪ್ ವಿಡಿಯೊ ಕಾಲ್ ಮಾಡಿ, ಅದರಲ್ಲಿ ಮುಖ ಕಾಣುವಂತೆ; ತಾನು ನಗ್ನವಾಗಿರುವುದನ್ನು ಸ್ರ್ಕೀನ್ ರೆಕಾರ್ಡಿಂಗ್ ಮಾಡಿಟ್ಟುಕೊಂಡಿದ್ದಾಳೆ. ಬಳಿಕ ಗಜಾನನ ಅವರಿಗೆ ಕರೆ ಮಾಡಿ ಹಣ ಕೊಡದಿದ್ದರೆ ವಿಡಿಯೊವನ್ನು ಸಾಮಾಜಿಕ ತಾಣದಲ್ಲಿ ಹರಿಬಿಟ್ಟು ಮಾನ ಹರಾಜು ಹಾಕುವುದಾಗಿ ಬೆದರಿಕೆ ಒಡ್ಡಿದ್ದಾಳೆ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾನೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾರ್ನಲ್ಲಿ ಗಲಾಟೆ: ಗೆಳೆಯರೆಲ್ಲರೂ ಸೇರಿ ಸ್ಟೇಷನ್ ರಸ್ತೆಯ ಬಾರ್ವೊಂದರಲ್ಲಿ ಮದ್ಯಪಾನ ಮಾಡಲು ಹೋದಾಗ ಗಲಾಟೆ ನಡೆದಿದೆ.
ತಬೀಬ್ಲ್ಯಾಂಡ್ನ ವಿನಾಯಕ ಯಕಲಾಸಪುರ ಎಂಬುವರು ಗೆಳೆಯರಾದ ಕಿರಣ ಬಾಗಲಕೋಟೆ, ಸುನೀಲ ಕುಂದರಗಿ ಹಾಗೂ ರೂಪೇಶ ಬಡಿಗೇರಿ ಜೊತೆ ಮದ್ಯ ಕುಡಿಯಲು ಹೋದಾಗ ರೂಪೇಶ ‘ನನ್ನ ತಾಯಿಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಮದ್ಯದ ಬಾಟಲಿಯಿಂದ ಹೊಡೆದಿದ್ದಾನೆ’ ಎಂದು ವಿನಾಯಕ ದೂರಿನಲ್ಲಿ ತಿಳಿಸಿದ್ದಾರೆ.
ಬಂಧನ: ನಗರದ ಹಳೇ ಬಸ್ ನಿಲ್ದಾಣ, ಜನತಾ ಬಜಾರ್ಗೆ ಬರುತ್ತಿದ್ದ ಜನರ ಮೊಬೈಲ್ ಫೋನ್ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವೀರಾಪುರ ಓಣಿಯ ಸುರೇಶ ಭಜಂತ್ರಿ ಹಾಗೂ ಬಸವೇಶ್ವರ ನಗರದ ಬಸವರಾಜ ಹೆಬ್ಬಳ್ಳಿ ಬಂಧಿತರು. ಇವರು ವಿವಿಧ ಕಂಪನಿಗಳ 11 ಮೊಬೈಲ್ ಫೋನ್ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ. ಮೊಬೈಲ್ಗಳ ಒಟ್ಟು ಮೌಲ್ಯ ₹ 1.07 ಲಕ್ಷ ಎಂದು ಅಂದಾಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.