ಹುಬ್ಬಳ್ಳಿ: ಕುಂದಗೋಳ ಕ್ಷೇತ್ರದ ನೂತನ ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಕಿಮ್ಸ್ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ, ಪರಿಶೀಲಿಸಿದರು.
ಆಸ್ಪತ್ರೆಯ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ರೋಗಿಗಳ ಮತ್ತು ಸಾರ್ವಜನಿಕರ ಆಹವಾಲು ಆಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕಿಮ್ಸ್ ಆಸ್ಪತ್ರೆ ಬಗ್ಗೆ ಪತಿ ಸಿ.ಎಸ್.ಶಿವಳ್ಳಿ ವಿಶೇಷ ಕಾಳಜಿ ಹೊಂದಿದ್ದರು. ಬಡವರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವಂತಾಗಬೇಕು ಎಂದು ಅದರ ಸುಧಾರಣೆಗೆ ಆದ್ಯತೆ ನೀಡಿದ್ದರು. ಅವರ ಆಶಯದಂತೆ ಕಿಮ್ಸ್ ಸುಧಾರಣೆಯಾಗಬೇಕು ಎಂಬುದು ನನ್ನ ಆಶಯವೂ ಆಗಿದೆ’ ಎಂದು ಹೇಳಿದರು.
‘ಕಿಮ್ಸ್ನಲ್ಲಿ ಲಭಿಸುತ್ತಿರುವ ಆರೋಗ್ಯ ಸೇವೆಗಳ ಬಗ್ಗೆ ರೋಗಿಗಳು ನನ್ನ ಬಳಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನಷ್ಟು ಗುಣಮಟ್ಟದ ಸೇವೆ ಬಡ ರೋಗಿಗಳಿಗೆ ಲಭಿಸುವಂತಾಗಬೇಕು. ಈ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ’ ಎಂದು ತಿಳಿಸಿದರು.
‘ಕಿಮ್ಸ್ಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು, ಕುಂದುಕೊರತೆಗಳನ್ನು ನಿವಾರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು’ ಎಂದು ಅವರು ಹೇಳಿದರು.
ಪತಿಯ ನೆನಪು: ಪತಿ ಸಿ.ಎಸ್. ಶಿವಳ್ಳಿ ಅವರು ಚಿಕಿತ್ಸೆಗಾಗಿ ಕಿಮ್ಸ್ಗೆ ಭೇಟಿ ನೀಡುತ್ತಿದ್ದ ಹಾಗೂ ತಾವು ಮಕ್ಕಳಿಗೆ ಕಿಮ್ಸ್ನಲ್ಲೇ ಜನ್ಮ ನೀಡಿದ ಸಂದರ್ಭವನ್ನು ಶಾಸಕಿ ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಮುಖಂಡ ಷಣ್ಮುಖ ಶಿವಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.