ಧಾರವಾಡ: ‘ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಉಲ್ಲಂಘಿಸದಂತೆ ನಿಗಾ ವಹಿಸಲು ಪ್ರತಿ ತಾಲ್ಲೂಕಿನಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕಾರ್ಯ ಪಡೆ ಸಮಿತಿ ರಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಮತ್ತು ಪ್ರಾಣಿ ಅಕ್ರಮ ಹತ್ಯೆ ಮತ್ತು ಕಳ್ಳ ಸಾಗಾಣಿಕೆ ತಡೆ ಕುರಿತ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿದರು.
‘ತಹಶೀಲ್ದಾರ್, ಪೊಲೀಸ್ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಸ್ಥಳೀಯ ಸಂಸ್ಥೆ ಅಧಿಕಾರಿ, ಪಶು ಸಂಗೋಪನೆ ಇಲಾಖೆರ ವೈದ್ಯರು ಸಮಿತಿಯಲ್ಲಿ ಇರುತ್ತಾರೆ. ಸಮಿತಿಯು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿನ ಪ್ರಾಣಿ ವಧಾಲಯಗಳ ಮಾಹಿತಿ ಪಡೆದು, ಪರಿಶೀಲಿಸಬೇಕು. ನೋಂದಣಿಯಾಗದ ಪ್ರಾಣಿ ವಧಾಲಯಗಳಿದ್ದರೆ ಬೀಗ ಹಾಕಿ, ಕ್ರಮ ಜರುಗಿಸಬೇಕು’ ಎಂದರು.
‘ನೋಂದಾಯಿತ ವಧಾಗಾರದಲ್ಲಿ ಮಾತ್ರ ನಿಗದಿಪಡಿಸಿದ ಪ್ರಾಣಿಗಳ ವಧೆಗೆ ಅವಕಾಶವಿದೆ. 13 ವರ್ಷ ತುಂಬಿದ ಎಮ್ಮೆ ಮತ್ತು ಕೋಣ ವಧೆ ಮಾಡಲು ಅವಕಾಶವಿದೆ. ಎತ್ತು, ಆಕಳು ಮತ್ತು ಕರು ವಧೆ ಮಾಡಲು ಅವಕಾಶ ಇಲ್ಲ. ಜೂನ್ 7ರಂದು ಬಕ್ರೀದ್ ಆಚರಣೆ ಇದೆ. ಪ್ರಾಣಿ ವಧೆ ಕುರಿತು ಸರಿಯಾಗಿ ಜಾಗೃತಿ ಮೂಡಿಸಬೇಕು’ ಎಂದು ಸೂಚಿಸಿದರು.
‘ಜಿಲ್ಲೆಯಲ್ಲಿ ಒಂದು ಸರ್ಕಾರಿ ಹಾಗೂ 10 ಖಾಸಗಿ ಗೋಶಾಲೆಗಳಿವೆ. ರಕ್ಷಿಸಿದ ಜಾನುವಾರುಗಳನ್ನು ಗೋಶಾಲೆಗೆ ಬಿಡಬೇಕು. ನಗರ ಹಾಗೂ ಪಟ್ಟಣಗಳ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಇತರೆ ಸ್ಥಳಗಳಲ್ಲಿ ಬೀಡಾಡಿ ಜಾನುವಾರುಗಳಿದ್ದರೆ, ಅವುಗಳನ್ನೂ ಗೋಶಾಲೆಗಳಿಗೆ ರವಾನಿಸಬೇಕು’ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಡಿಸಿಪಿ ಮಹಾನಿಂಗ ನಂದಗಾಂವಿ, ಮುಖ್ಯ ಪಶುವೈದ್ಯಾಧಿಕಾರಿ ಡಾ. ಲಿಂಗರಾಜ ಬಿ.ಎಸ್. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.