ಹುಬ್ಬಳ್ಳಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡಿ ಎಲ್ಲರೂ ಶೌಚಾಲಯ ಹೊಂದಬೇಕು ಎನ್ನುವ ಅರಿವು ಮೂಡಿಸಿದ್ದರು. ಸದಾ ಜನರ ಒಳಿತು ಬಯಸುವ ಕೆಲಸ ಮಾಡುತ್ತಿರುವ ಅವರು ಜನರ ಪ್ರಧಾನಿಯಾಗಿದ್ದಾರೆ ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಹೇಳಿದರು.
ಸೇವಾ ಸಪ್ತಾಹ ಅಂಗವಾಗಿ ಬಿಜೆಪಿ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ನರೇಂದ್ರ ಮೋದಿ ವ್ಯಕ್ತಿ ವ್ಯಕ್ತಿತ್ವ ಸಂದೇಶ’ ವರ್ಚುವಲ್ ರ್ಯಾಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಮೋದಿ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರು ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಿದಾಗ ಅಲ್ಲಿನ ನೆಲಕ್ಕೆ ಹಣೆ ಹಚ್ಚಿ ನಮಸ್ಕಾರ ಮಾಡಿದ್ದನ್ನೂ ಯಾರೂ ಮರೆತಿಲ್ಲ. ಚಂದ್ರಯಾನ–2 ಯೋಜನೆ ವಿಫಲಗೊಂಡಾಗ ವಿಜ್ಞಾನಿಗಳಲ್ಲಿ ತುಂಬಿದ ಭರವಸೆ ಅಪಾರವಾದದ್ದು’ ಎಂದು ನೆನಪಿಸಿಕೊಂಡರು.
‘ರಾಜಕಾರಣದಲ್ಲಿ ಎಂದೂ ಅವರು ಭ್ರಷ್ಟಾಚಾರದ ಸುಳಿಗೆ ಸಿಲುಕಿದವರಲ್ಲ. ರಾಮಾಯಣ ಮತ್ತು ಮಹಾಭಾರತದ ಕಥೆಗಳು ಬಂದಿವೆ. ಮುಂದೊಂದು ದಿನ ಮೋದಿ ವ್ಯಕ್ತಿತ್ವದ ಬಗ್ಗೆ ಮೋದಿಮಯ ಎನ್ನುವ ಸರಣಿ ಬಂದರೂ ಅಚ್ಚರಿಯಿಲ್ಲ’ ಎಂದರು.
ಆರು ಅಡಿ ಅಂತರ ಕಾಯ್ದುಕೊಂಡು ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಸಚಿವ ಜಗದೀಶ ಶೆಟ್ಟರ್ ಚಾಲನೆ ನೀಡಿದರು. ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಬಿಜೆಪಿ ಮುಖಂಡರಾದ ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ನಾರಾಯಣ ಜರತಾರಘರ, ದತ್ತಮೂರ್ತಿ ಕುಲಕರ್ಣಿ, ವಿಜಯಾನಂದ ಶೆಟ್ಟಿ, ತಿಪ್ಪಣ್ಣ ಮಜ್ಜಗಿ ಮತ್ತು ರವಿ ನಾಯ್ಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.