ADVERTISEMENT

ಮೂಡದ ಒಮ್ಮತ: ಬಿಡುಗಡೆಯಾಗದ ಪಟ್ಟಿ

ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್ ಮೊದಲ ಪಟ್ಟಿ ಇಂದು ಬಿಡುಗಡೆ?

ಪ್ರಮೋದ
Published 20 ಆಗಸ್ಟ್ 2021, 4:16 IST
Last Updated 20 ಆಗಸ್ಟ್ 2021, 4:16 IST

ಹುಬ್ಬಳ್ಳಿ: ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡು ದಿನ (ಶುಕ್ರವಾರ ಹಾಗೂ ಭಾನುವಾರ ರಜೆ ಕಾರಣ ನಾಮಪತ್ರ ಸಲ್ಲಿಕೆ ಇರುವುದಿಲ್ಲ) ಬಾಕಿ ಉಳಿದಿದ್ದರೂ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿಲ್ಲ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಹಾಗೂ ಇಂತಹ ಆಕಾಂಕ್ಷಿಗೇ ಟಿಕೆಟ್‌ ನೀಡಬೇಕು ಎಂದು ನಾಯಕರು ಪಟ್ಟು ಹಿಡಿದಿರುವುದರಿಂದ ಪಟ್ಟಿ ಅಂತಿಮಗೊಳ್ಳುವುದು ವಿಳಂಬವಾಗುತ್ತಿದೆ.

ಈಗಲೇ ಅಭ್ಯರ್ಥಿಗಳ ಹೆಸರು ಪ್ರಕಟಿಸಿದರೆ, ಬಂಡಾಯ ಏಳಬಹುದು. ಬಂಡಾಯ ಏಳದಂತೆ ಆಕಾಂಕ್ಷಿಗಳ ನಡುವೆ ಮಾತುಕತೆ ನಡೆಸಿ, ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲು ನಾಯಕರು ಕಸರತ್ತು ನಡೆಸಿದ್ದಾರೆ. ಆ ನಂತರವೂ ಬಂಡಾಯ ಏಳುವ ಆಕಾಂಕ್ಷಿಗಳನ್ನು ಸಮಾಧಾನ ಮಾಡಬೇಕಾದ ಸವಾಲು ಮುಖಂಡರ ಮುಂದಿದೆ.

ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಧಿಕೃತವಾಗಿ ಟಿಕೆಟ್‌ ಖಚಿತಪಡಿಸಿಲ್ಲ. ಆದರೆ, ಕೆಲವರಿಗೆ ವೈಯಕ್ತಿಕವಾಗಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಕಳೆದ ಬಾರಿ ಸದಸ್ಯರಾಗಿದ್ದ ಬಹುತೇಕ ಸದಸ್ಯರಿಗೆ ಅವಕಾಶ ನೀಡಬೇಕು ಎನ್ನುವ ಕೂಗು ಕಾಂಗ್ರೆಸ್‌, ಬಿಜೆಪಿ ನಾಯಕರ ಮೇಲೆ ಒತ್ತಡ ಹೆಚ್ಚಾಗಿದೆ.

ADVERTISEMENT

82 ವಾರ್ಡ್‌ಗಳ ಉಮೇದುವಾರಿಕೆಗೆ ಬಿಜೆಪಿಯಿಂದ 800ಕ್ಕೂ ಹೆಚ್ಚು ಹಾಗೂ ಕಾಂಗ್ರೆಸ್‌ನಿಂದ 370ಕ್ಕೂ ಹೆಚ್ಚು ಆಕಾಂಕ್ಷಿಗಳ ಅರ್ಜಿಗಳು ಸಲ್ಲಿಕೆಯಾಗಿವೆ. ಹೀಗಾಗಿ ಪಕ್ಷದ ಮುಖಂಡರಿಗೆ ಅಭ್ಯರ್ಥಿಗಳ ಆಯ್ಕೆಯೇ ಸವಾಲಾಗಿ ಪರಿಣಮಿಸಿದೆ.

ಕ್ಯುಬಿಕ್ಸ್‌ ಹೋಟೆಲ್‌ನಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಉಸ್ತುವಾರಿಗಳ ಸಭೆಯ ವೇಳೆ ಪಾಲಿಕೆಯ ಹಿಂದಿನ ಸದಸ್ಯರು ತಮ್ಮ ಬೆಂಬಲಿಗರೊಂದಿಗೆ ಬಂದು ‘ಶಕ್ತಿ’ ಪ್ರದರ್ಶಿಸಿದರು. ಕೆಲ ಆಕಾಂಕ್ಷಿಗಳು ಪಕ್ಷದಿಂದ ಟಿಕೆಟ್‌ ಕೊಡದೆ ಹೋದರೆ ಬೇರೆ ಪಕ್ಷ ಅಥವಾ ಸ್ವತಂತ್ರ್ಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಯ ‘ಪರ್ಯಾಯ’ ಮಾರ್ಗವನ್ನೂ ಹುಡುಕಿಕೊಂಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯೊಬ್ಬರು ‘ಕೋವಿಡ್‌ ಎರಡೂ ಅಲೆಯ ಸಮಯದಲ್ಲಿ ಜನಪರ ಕೆಲಸ ಮಾಡಿ ವೈಯಕ್ತಿಕವಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇನೆ. ಪಕ್ಷದ ಹೆಸರಿನಲ್ಲಿ ಪಡಿತರ ಹಾಗೂ ಇನ್ನಿತರ ವಸ್ತುಗಳನ್ನು ನೀಡಿದ್ದೇನೆ. ಏನೂ ಕೆಲಸ ಮಾಡದವರು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಕೆಲಸ ಮಾಡಿಯೂ ನನಗೆ ಟಿಕೆಟ್‌ ಸಿಗದಿದ್ದರೆ ಪರ್ಯಾಯ ಹಾದಿ ಅನಿವಾರ್ಯ’ ಎಂದರು.

ಟಿಕೆಟ್‌ ಕೊಡಲೇಬೇಕಾದ ಅನಿವಾರ್ಯವಿರುವ ಕೆಲ ಆಕಾಂಕ್ಷಿಗಳ ಪಟ್ಟಿ ಅಂತಿಮಗೊಳಿಸಲಾಗಿದ್ದು, ಮೊದಲ ಹಂತದಲ್ಲಿ ಅವರ ಹೆಸರು ಪ್ರಕಟಿಸಲಾಗುವುದು ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.ಬಂಡಾಯದ ಬಗ್ಗೆ ಪ್ರಶ್ನಿಸಿದಾಗ ‘ಅದನ್ನು ಪಕ್ಷದ ಹಿರಿಯರು ನೋಡಿಕೊಳ್ಳುತ್ತಾರೆ’ ಎಂದು ಹೇಳಿದರು.

––––

ಟಿಕೆಟ್‌ ಆಕಾಂಕ್ಷಿಗಳ ಉತ್ಸಾಹ ನೋಡಿ ಖುಷಿಯಾಗಿದೆ. ಅವರು ಎಷ್ಟೇ ಸಮರ್ಥರಾಗಿದ್ದರೂ 82 ಜನರಿಗಷ್ಟೇ ಟಿಕೆಟ್‌ ನೀಡಲು ಸಾಧ್ಯ. ಯಾರಿಗೂ ಅತೃಪ್ತಿಯಾಗದಂತೆ ನೋಡಿಕೊಳ್ಳಲಾಗುವುದು

ಆರ್‌.ವಿ. ದೇಶಪಾಂಡೆ,ಚುನಾವಣೆ ಕಾಂಗ್ರೆಸ್‌ ಉಸ್ತುವಾರಿ ಸಮಿತಿ ಅಧ್ಯಕ್ಷ

––––

ಕಾಂಗ್ರೆಸ್‌ 1;3 ಲೆಕ್ಕಾಚಾರ

ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಕೆಲವು ವಾರ್ಡ್‌ಗಳಿಗೆ ನಾಲ್ಕು ಹಾಗೂ ಐದು ಜನ ಆಕಾಂಕ್ಷಿಗಳಿಂದ ಪೈಪೋಟಿಯಿದೆ. ಕೆಲವೆಡೆ ಆರಕ್ಕೂ ಹೆಚ್ಚು ಅಭ್ಯರ್ಥಿಗಳು ಒಂದು ವಾರ್ಡ್‌ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ.

ಎಲ್ಲ ಅರ್ಜಿಗಳ ಪರಿಶೀಲನೆಯನ್ನು ಪಕ್ಷದ ಚುನಾವಣಾ ಉಸ್ತುವಾರಿಗಳೇ ಮಾಡುವ ಬದಲು ಸ್ಥಳೀಯ ಮುಖಂಡರಿಂದ ಕಿರು ಪಟ್ಟಿ ತಯಾರಿಸಿದ್ದಾರೆ. ಒಂದು ಸ್ಥಾನಕ್ಕೆ ಮೂವರು ಎನ್ನುವ ಲೆಕ್ಕಾಚಾರದಲ್ಲಿ ಪಟ್ಟಿ ತಯಾರಿಸಿದ್ದು, ಈ ಪಟ್ಟಿಯಿಂದ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೆಸರು ಹೇಳಲು ಬಯಸದ ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.