ಹುಬ್ಬಳ್ಳಿ: ‘ಎಲ್ಲಾ ವಸ್ತುಗಳ ವಿಷಯದಲ್ಲಿ ‘ಮೇಕ್ ಇನ್ ಇಂಡಿಯಾ’ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಅಸ್ಮಿತೆಯಾದ ರಾಷ್ಟ್ರಧ್ವಜದ ವಿಷಯದಲ್ಲಿ ಮೇಕ್ ಇನ್ ಚೀನಾ ಎನ್ನುತ್ತಿದ್ದಾರೆ’ ಎಂದು ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಆವರಣದಲ್ಲಿರುವ ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೆ ಮಂಗಳವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡಿ, ನಮ್ಮ ನೆಲದ ಖಾದಿಗೆ ಮೋದಿ ಅವಮಾನಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ, ಬ್ರಿಟಿಷರನ್ನು ದೇಶದಿಂದ ಓಡಿಸುವ ದೊಡ್ಡ ಅಸ್ತ್ರವಾಗಿಯೂ ಖಾದಿ ಬಳಕೆಯಾಗಿತ್ತು. ಹೊಸ ತಿದ್ದುಪಡಿಯು, ಖಾದಿ ಧ್ವಜಕ್ಕೆ ಕುತ್ತು ತಂದಿದೆ. ಇಷ್ಟಕ್ಕೂ ಪಾಲಿಸ್ಟರ್ ಧ್ವಜ ಪರಿಸರ ಸ್ನೇಹಿ ಅಲ್ಲ’ ಎಂದರು.
ಕಾಂಗ್ರೆಸ್ನಿಂದ ಖರೀದಿ: ‘ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡಿದ್ದರಿಂದ ಖಾದಿ ಗ್ರಾಮೋದ್ಯೋಗದಲ್ಲಿ ಮಾರಾಟವಾಗದೆ ಉಳಿದಿರುವ ಧ್ವಜಗಳನ್ನು ಕಾಂಗ್ರೆಸ್ ಪಕ್ಷವು ಖರೀದಿಸಲಿದೆ. ಜೊತೆಗೆ, ಖಾದಿ ಗ್ರಾಮೋದ್ಯೋಗವನ್ನು ಉಳಿಸಲು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದೆ’ ಎಂದು ಮೊಹಮ್ಮದ್ ನಲಪಾಡ್ ಹೇಳಿದರು.
‘ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ಧಕ್ಕೆ ತಂದರೆ ಕಾಂಗ್ರೆಸ್ ಸುಮ್ಮನೆ ಇರುವುದಿಲ್ಲ. ಯಾವುದೇ ಕಾರಣಕ್ಕೂ ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡಬಾರದು. ಕೇಂದ್ರ ಸರ್ಕಾರ ಕೂಡಲೇ ತಿದ್ದುಪಡಿ ಹಿಂಪಡೆಯಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.