ADVERTISEMENT

ಹುಬ್ಬಳ್ಳಿ: ನವರಾತ್ರಿ ಸಡಗರ, ಭಕ್ತರ ಸಂಭ್ರಮ

ಮೊದಲ ದಿನ ಅಭಿಷೇಕ, ಅಲಂಕಾರ, ಘಟಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 8:21 IST
Last Updated 8 ಅಕ್ಟೋಬರ್ 2021, 8:21 IST
ನವರಾತ್ರಿ ಅಂಗವಾಗಿ ಹುಬ್ಬಳ್ಳಿಯ ದಾಜೀಬಾನಪೇಟೆಯಲ್ಲಿರುವ ತುಳಜಾಭವಾನಿ ದೇವಸ್ಥಾನವನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು
ನವರಾತ್ರಿ ಅಂಗವಾಗಿ ಹುಬ್ಬಳ್ಳಿಯ ದಾಜೀಬಾನಪೇಟೆಯಲ್ಲಿರುವ ತುಳಜಾಭವಾನಿ ದೇವಸ್ಥಾನವನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು   

ಹುಬ್ಬಳ್ಳಿ: ನವರಾತ್ರಿಯ ಮೊದಲ ದಿನವಾದ ಗುರುವಾರ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ದೇವಿಯರ ದರ್ಶನ ಪಡೆದರು.

ಹೊಸೂರಿನ ದುರ್ಗಾದೇವಿ ದೇವಸ್ಥಾನ, ದಾಜೀಬಾನಪೇಟೆಯ ತುಳಜಾಭವಾನಿ ದೇವಸ್ಥಾನ, ಬನಶಂಕರಿ ಬಡಾವಣೆಯ ಬನಶಂಕರಿದೇವಿ ದೇವಸ್ಥಾನ ಸೇರಿದಂತೆ ಹಲವೆಡೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಉಣಕಲ್‌ ಕೆರೆ ದಂಡೆಯ ಸಮೀಪ ಇರುವ ವೀರಭದ್ರೇಶ್ವರ ಕಾಲೊನಿಯ ಶಾಕ್ತ ಪೀಠದ ತುಳಜಾ ಭವಾನಿ, ಭವಾನಿಶಂಕರ ದೇವಸ್ಥಾನದಲ್ಲಿ ಗುರುವಾರ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು.

ADVERTISEMENT

ಮೊದಲ ದಿನ ದೇವಿಯರ ಮೂರ್ತಿಗಳ ಮೆರವಣಿಗೆ, ಅಭಿಷೇಕ, ಅಲಂಕಾರ, ಘಟಸ್ಥಾಪನೆ, ಮಂಗಳಾರತಿ, ಸಪ್ತಶತಿ ಪಾರಾಯಣ, ನವಚಂಡಿ ಹವನ, ಪೂರ್ಣಾಹುತಿ, ಮಹಾಮಂಗಳಾರತಿ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಿದವು.

‘ತುಳಜಾಭವಾನಿ ದೇವಸ್ಥಾನದಲ್ಲಿ 9 ದಿನಗಳ ಕಾಲ ವಿಶೇಷ ಪೂಜೆಗಳು ನಡೆಯಲಿವೆ’ ಎಂದು ತುಳಜಾಭವಾನಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ನಾರಾಯಣ ಖೋಡೆ ಹೇಳಿದರು.

ಭಂಡಿವಾಡದಲ್ಲಿ ನವರಾತ್ರಿ: ತಾಲ್ಲೂಕಿನ ಭಂಡಿವಾಡ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ನವರಾತ್ರಿಯ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು.

ಭಂಡಿವಾಡದ ಗಿರೀಶ ಆಶ್ರಮದ ಬಾಲಪ್ಪ ಮಹಾರಾಜರು ಸೇರಿದಂತೆ ಹಲವರು ನಿತ್ಯ ಪ್ರವಚನ ನೀಡಲಿದ್ದಾರೆ ಎಂದು ಭಂಡಿವಾಡ ಮಾರುತಿ ಟ್ರಸ್ಟ್‌ ಸಮಿತಿ ಹಾಗೂ ಗ್ರಾಮ ದೇವಿ ಭಜನಾ ಸಂಘದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.