ಹುಬ್ಬಳ್ಳಿ: ವಾಜಪೇಯಿ ಮತ್ತು ಅಂಬೇಡ್ಕರ್ ವಸತಿ ಯೋಜನೆಯ 160 ಫಲಾನುಭವಿಗಳಿಗೆ ಶಾಸಕ ಅರವಿಂದ ಬೆಲ್ಲದ ಸೋಮವಾರ ಕಾರ್ಯಾದೇಶ ಪತ್ರ ವಿತರಿಸಿದರು.
‘ಮನೆ ನಿರ್ಮಾಣದ ಪ್ರಗತಿಗೆ ಅನುಗುಣವಾಗಿ ನಾಲ್ಕು ಕಂತುಗಳಲ್ಲಿ ಹಣ ಬಿಡುಗಡೆ ಆಗುತ್ತದೆ. ಹಣ ಬಿಡುಗಡೆಗೆ ಯಾವ ಅಧಿಕಾರಿಗೂ ಹಣ ನೀಡುವ ಅಗತ್ಯವಿಲ್ಲ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಆನ್ಲೈನ್ ಮೂಲಕ ಅರ್ಜಿ ಹಾಕಿದವರಿಗೆ ಸ್ವೀಕೃತಿ ಪತ್ರ ಸಿಗಲಿದೆ. ಹಣ ಮಂಜೂರು ಮಾಡಿಸುತ್ತೇವೆ ಎಂದು ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೆ ಕೊಡಬೇಡಿ’ ಎಂದು ಅರವಿಂದ ಬೆಲ್ಲದ ಮನವಿ ಮಾಡಿದರು.
‘2022ರ ವೇಳೆಗೆ ಪ್ರತಿಯೊಬ್ಬರೂ ವಸತಿ ಹೊಂದಬೇಕು ಎಂಬುದು ಪ್ರಧಾನಿ ಕನಸಾಗಿದೆ. ಅದಕ್ಕೆ ಅಗತ್ಯ ಇರುವ ಹಣವನ್ನು ಸಹ ತೆಗೆದಿರಿಸಲಾಗಿದೆ. ರಾಜ್ಯ ಸರ್ಕಾರವೂ ತನ್ನ ಪಾಲು ನೀಡುತ್ತದೆ. ಜಾಗ ಇರುವವರ ವಸತಿ ಯೋಜನೆಯ ಪ್ರಯೋಜನಾ ಪಡೆಯಬಹುದು. ಜಿಪಿಎಸ್ ಮೂಲಕ ಜಾಗವನ್ನು ನೋಂದಣಿ ಮಾಡಲಾಗುತ್ತದೆ. ಆದ್ದರಿಂದ ಅದೇ ಜಾಗಕ್ಕೆ ಎರಡನೇ ಬಾರಿ ವಸತಿ ಮಂಜೂರಾಗುವುದಿಲ್ಲ’ ಎಂದರು.
ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ಸಾಮಾನ್ಯ ವರ್ಗದವರು ವಾಜಪೇಯಿ ವಸತಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಅಂಬೇಡ್ಕರ್ ವಸತಿ ಯೋಜನೆಗೆ ಅರ್ಹರು ಎಂದು ಅವರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.