ಹುಬ್ಬಳ್ಳಿ: ಧಾರವಾಡದ ನಿರಂಜನ ಚಂದರಗಿ ಹಾಗೂ ಮುರಗೇಶ ಟೋಪಣ್ಣವರ ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಅಂಗವಿಕಲರ ಕ್ರೀಡಾಕೂಟದ ಚಕ್ರ ಎಸೆತ ಸ್ಪರ್ಧೆಯಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದರು.
ನಗರದ ಬಿ.ವಿ.ಬಿ. ಮೈದಾನದಲ್ಲಿ ಗುರುವಾರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು (ವಿಆರ್ಡಬ್ಲ್ಯು) ಮತ್ತು ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ (ಎಂಆರ್ಡಬ್ಲ್ಯು) ವಿಭಾಗದವರಿಗೆ ನಡೆದ ಸ್ಪರ್ಧೆಯಲ್ಲಿ ಅವರು ಈ ಸಾಧನೆ ಮಾಡಿದರು. ಇದೇ ಸ್ಪರ್ಧೆಯಲ್ಲಿ ಕಲಘಟಗಿಯ ಅಶೋಕ ಮಾಳಗದ ಮೂರನೇ ಸ್ಥಾನ ಪಡೆದರು.
ಶಾಟ್ಪಟ್ ಸ್ಪರ್ಧೆಯಲ್ಲಿ ನಿರಂಜನ, ಕಲಘಟಗಿಯ ಶ್ರವಣ ಕುಮಾರ ಹಾಗೂ ಅಶೋಕ ಮೊದಲ ಮೂರು ಸ್ಥಾನ ಗಳಿಸಿದರು. 75 ವರ್ಷ ಮೇಲ್ಪಟ್ಟವರಿಗೆ ನಡೆದ ಇದೇ ಸ್ಪರ್ಧೆಯಲ್ಲಿ ನವಲಗುಂದದ ಬುಡ್ನೆಸಾಬ ಹಂಚಿನಾಳ ಮತ್ತು ಬಸವರಾಜ ಹೆಬಸೂರ ಮೊದಲ ಎರಡು ಸ್ಥಾನ ಪಡೆದರೆ, ಹುಬ್ಬಳ್ಳಿಯ ಬಸವರಾಜ ಸೋಮಕ್ಕನವರ ಮೂರನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು.
ಬ್ಯಾಬಿಂಗ್ ದ ಸಿಟಿ ಕ್ರೀಡೆಯಲ್ಲಿ ಕಲಘಟಗಿಯ ಸಂಜೀವ ಡೊಂಗ್ರೆ (ಪ್ರಥಮ), ಬುಡ್ನೇಸಾಬ (ದ್ವಿತೀಯ), ನವಲಗುಂದದ ಲಕ್ಷ್ಮಣ ಕಳ್ಳಿಮನಿ (ತೃತೀಯ) ಸ್ಥಾನ ಸಂಪಾದಿಸಿದರು. ಕ್ರಿಕೆಟ್ ಟೂರ್ನಿಯಲ್ಲಿ ಧಾರವಾಡ ತಂಡ ಪ್ರಶಸ್ತಿ ಜಯಿಸಿದರೆ, ನವಲಗುಂದ ತಂಡ ರನ್ನರ್ಸ್ ಅಪ್ ಆಯಿತು.
ಮಹಿಳೆಯರಿಗೆ ನಡೆದ ಶಾಟ್ಪಟ್ನಲ್ಲಿ ಹುಬ್ಬಳ್ಳಿಯ ರೇಖಾ ಕುಂದಗೋಳ–1, ನಲವಗುಂದದ ರತ್ನಾ ಅಜಗೊಂಡ–2, ಹುಬ್ಬಳ್ಳಿಯ ಕಮಲಾ ಬಡಿಗೇರ–3, ಕ್ರಿಕೆಟ್ ಚೆಂಡು ಎಸೆತದಲ್ಲಿ ಧಾರವಾಡದ ಮುತ್ತವ ಕುರುಬರ–1, ಹುಬ್ಬಳ್ಳಿಯ ರೇಖಾ ಕುಂದಗೋಳ–2, ಜೈತುನಬಿ ಸುಂಕದ–3 ಮತ್ತು ಬ್ಯಾಬಿಂಗ್ ದ ಸಿಟಿ ಸ್ಪರ್ಧೆಯಲ್ಲಿ ಕುಂದಗೋಳದ ಲಕ್ಷ್ಮಿ ಕಳಸದ–1, ಧಾರವಾಡದ ಹಾಶಂಬಿ ಶಿವಳ್ಳಿ–2, ನವಲಗುಂದದ ಮಂಜುಳಾ ತಳವಾರ–3ನೇ ಸ್ಥಾನ ಗಳಿಸಿದರು. ಟೆನಿಕಾಯ್ಟ್ನಲ್ಲಿ ಧಾರವಾಡ ತಾಲ್ಲೂಕು ಮೊದಲ ಸ್ಥಾನ ಪಡೆದರೆ, ಎರಡನೇ ಸ್ಥಾನ ಹುಬ್ಬಳ್ಳಿ ತಾಲ್ಲೂಕು ಪಾಲಾಯಿತು.
ಶ್ರವಣದೋಷ ಹೊಂದಿರುವ ಬಾಲಕರ ಜೂನಿಯರ್ ವಿಭಾಗದ ವಾಲಿಬಾಲ್ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಪ್ರಿಯದರ್ಶಿನಿ ಕಿವುಡ ಮಕ್ಕಳ ಶಾಲೆ ಪ್ರಥಮ ಸ್ಥಾನ ಪಡೆದರೆ, ಧಾರವಾಡದ ಹೊನ್ನಮ್ಮ ಕಿವುಡ ಮಕ್ಕಳ ಶಾಲೆ ದ್ವಿತೀಯ ಸ್ಥಾನ ಗಳಿಸಿತು. ಸೀನಿಯರ್ ವಿಭಾಗದಲ್ಲಿ ಹೊನ್ನಮ್ಮ ಶಾಲೆ ಪ್ರಥಮ, ಪ್ರಿಯದರ್ಶಿನಿ ಶಾಲೆ ದ್ವಿತೀಯ ಸ್ಥಾನ ಪಡೆಯಿತು.
ಈ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಡಿ. 12ರಂದು ಇಂದಿರಾಗಾಜಿನ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.