ಹುಬ್ಬಳ್ಳಿ: ಮೊಬೈಲ್ಗೆ ಬಂದ ಕ್ಯಾಶ್ಬ್ಯಾಕ್ ನೋಟಿಫಿಕೇಶನ್ ಕ್ಲಿಕ್ ಮಾಡಿದ ಧಾರವಾಡ ನಾರಾಯಣಪುರದ ಉಜಾಲಾ ಶರ್ಮಾ ಆನ್ಲೈನ್ನಲ್ಲಿ ₹41,838 ಕಳೆದುಕೊಂಡಿದ್ದಾರೆ.
₹1,999 ಕ್ಯಾಶಬ್ಯಾಕ್ ಬಂದಿದೆ ಎಂದು ಉಜಾಲಾ ಅವರ ಮೊಬೈಲ್ಗೆ ಲಿಂಕ್ ಕಳುಹಿಸಿರುವ ವ್ಯಕ್ತಿ, ಅದನ್ನು ಕ್ಲಿಕ್ ಮಾಡಲು ಹೇಳಿದ್ದಾನೆ. ಕ್ಲಿಕ್ ಮಾಡಿದ ತಕ್ಷಣ ಅವರ ಫೋನ್ ಪೇ ಖಾತೆಯಿಂದಲೇ ₹1,999 ಹಣ ಕಡಿತವಾಗಿದೆ. ಗೂಗಲ್ನಲ್ಲಿ ಫೋನ್ ಪೇ ಕಸ್ಟಮರ್ ಕೇರ್ ನಂಬರ್ ಹುಡುಕಿ ಕರೆ ಮಾಡಿದ್ದಾರೆ. ಆಗ ಅವರು, ಕಡಿತವಾಗಿರುವ ಹಣ ಮರಳಿ ಹಾಕುವುದಾಗಿ ಹೇಳಿ, ಬ್ಯಾಂಕ್ ಖಾತೆಯ ಮಾಹಿತಿ ಪಡೆದಿದ್ದಾರೆ. ಆಗ ವಂಚಕರು ಹಂತ ಹಂತವಾಗಿ ನಾಲ್ಕು ಬಾರಿ ಅವರ ಖಾತೆಯಿಂದ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳ ಸೂತ್ರ ಕಳವು: ಮನೆಯ ಕಿಟಕಿ ಮುರಿದು ₹1.95 ಲಕ್ಷ ಮೌಲ್ಯದ ಮಂಗಳ ಸೂತ್ರ ಹಾಗೂ ₹11 ಸಾವಿರ ನಗದು ಕಳವು ಮಾಡಿರುವ ಪ್ರಕರಣ ಗೋಕುಲ ರಸ್ತೆಯ ಚೈತನ್ಯ ನಗರದಲ್ಲಿ ನಡೆದಿದೆ.
ಮಮತಾ ಶೆಟ್ಟರ್ ಅವರ ಮನೆಯ ಕಿಟಕಿ ಮುರಿದು 65 ಗ್ರಾಂ ತೂಕದ ಮಂಗಳ ಸೂತ್ರ ಕಳವು ಮಾಡಿದ್ದಾರೆ. ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
50 ಗ್ರಾಂ ಬಂಗಾರ ಕಳವು: ಮನೆ ಬಾಗಿಲ ಕೀಲಿ ಮುರಿದು ಅಲ್ಮೇರಾದಲ್ಲಿದ್ದ 50 ಗ್ರಾಂ ಬಂಗಾರ ಹಾಗೂ ನಗದು ಕಳವು ಮಾಡಿರುವ ಪ್ರಕರಣ ಹಳೇ ಹುಬ್ಬಳ್ಳಿ ಇಂದ್ರಪ್ರಸ್ಥ ನಗರದಲ್ಲಿ ನಡೆದಿದೆ.
ಶ್ರೀಕಾಂತ ತಪಸ್ಕರ್ ಅವರು ಮನೆ ಬಾಗಿಲಿಗೆ ಕೀಲಿ ಹಾಕಿ ಅಣ್ಣನ ಮನೆಗೆ ತೆರಳಿದ್ದರು. ಆ ವೇಳೆ ಕಳ್ಳರು ಬಾಗಿಲು ಮುರಿದು ಅಲ್ಮೇರಾದ ಸೇಫ್ ಲಾಕರ್ನಲ್ಲಿದ್ದ ₹40 ಸಾವಿರ ನಗದು ಸೇರಿ ಒಟ್ಟು ₹2.46 ಲಕ್ಷದ ಬಂಗಾರದ ಆಭರಣ ಕಳುವು ಮಾಡಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು: ಬಾಕಳೆ ಗಲ್ಲಿಯ ಗಣಪತಿ ದೇವಸ್ಥಾನದ ಬಳಿಯಿರುವ ಗಜಾನನ ಜನರಲ್ ಸ್ಟೋರ್ಸ್ನ ಶೆಟರ್ಸ್ ಮುರಿದು, ₹93 ಸಾವಿರ ಮೌಲ್ಯದ ವಸ್ತು ಕಳವು ಮಾಡಲಾಗಿದೆ. ರಿಪೇರಿಗೆ ಬಂದಿದ್ದ ಮೂರು ಮೊಬೈಲ್ಗಳು, ಸಿಗರೇಟ್ ಪ್ಯಾಕ್ಗಳು ಹಾಗೂ ₹75 ಸಾವಿರ ನಗದು ಕಳುವಾಗಿರುವ ಕುರಿತು ಅಂಗಡಿ ಮಾಲೀಕ ಅನಿಲ ಕಬಾಡೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.