ಹುಬ್ಬಳ್ಳಿ: ಅವಳಿ ನಗರದಲ್ಲಿ ಕೆಲವು ದಿನಗಳಿಂದ ಸುರಿದ ಮುಂಗಾರು ಪೂರ್ವ ಮಳೆಗೆ ಪ್ರಮುಖ ರಸ್ತೆಗಳು ಹಾಳಾಗಿದ್ದು, ಗುಂಡಿಗಳು ಬಾಯ್ತೆರೆದಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಮುಖ್ಯರಸ್ತೆಗಳ ಜತೆಗೆ ಬಡಾವಣೆಗಳಲ್ಲಿನ ಒಳ ರಸ್ತೆಗಳೂ ಸಹ ಹಾಳಾಗಿವೆ. ಇದರಿಂದಾಗಿ ಸಾರ್ವಜನಿಕರು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಹಳೇ ಹುಬ್ಬಳ್ಳಿಯ ದುರ್ಗದಬೈಲ್, ಇಂಡಿ ಪಂಪ್ ವೃತ್ತ, ಕೇಶ್ವಾಪುರ, ಲಿಂಗರಾಜನಗರ, ನೇಕಾರ ನಗರ, ಮಾರುತಿ ನಗರ, ವಿದ್ಯಾನಗರ, ಕಮರಿಪೇಟೆ, ದಿವಟೆಗಲ್ಲಿ, ದಾಜೀಬಾನಪೇಟೆ ರಸ್ತೆ, ಈಶ್ವರ ನಗರ, ಪೆಂಡಾರಗಲ್ಲಿ, ಜನತಾ ಬಜಾರ್ ರಸ್ತೆ, ಅಂಚಟಗೇರಿ ಓಣಿ, ಮಹಾವೀರ ಗಲ್ಲಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರೆ ಗುಂಡಿಗಳ ದರ್ಶನವಾಗುತ್ತದೆ.
ರಸ್ತೆ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ರಸ್ತೆ ಯಾವುದು, ಗುಂಡಿ ಯಾವುದು ಎಂಬುದು ಗೊತ್ತಾಗದೆ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ಕಳೆದ ವರ್ಷದ ಮಳೆಗಾಲದಲ್ಲಿ ಹಾಳಾಗಿದ್ದ ರಸ್ತೆಗಳನ್ನೇ ಇನ್ನೂ ದುರಸ್ತಿ ಮಾಡಿಲ್ಲ. ಈ ವರ್ಷ ಮಳೆಗಾಲ ಆರಂಭಕ್ಕೂ ಮುನ್ನವೇ ಅಕಾಲಿಕ ಮಳೆಗೆ ಮತ್ತೆ ಸಮಸ್ಯೆ ತಲೆದೂರಿದೆ ಎಂಬುದು ವಾಹನ ಸವಾರರ ಅಳಲು.
ಟಿಪ್ಪು ನಗರ ಸೇರಿ ಕೆಲವು ಕಡೆ ರಸ್ತೆ ಕಾಮಗಾರಿಗಾಗಿ ಅಗೆದು ಹಾಗೆ ಬಿಡಲಾಗಿದೆ. ಕಾಮಗಾರಿ ಅಪೂರ್ಣವಾಗಿದೆ. ಹೆಗ್ಗೇರಿಯ ಪ್ರಶಾಂತನಗರದ ರಸ್ತೆ ಅಲ್ಪ ಮಳೆಯಾದರೂ ಕೆಸರು ಗದ್ದೆಯಾಗುತ್ತದೆ.
ಲಿಂಗರಾಜನಗರದ ಬ್ರಿಡ್ಜ್, ದೇಶಪಾಂಡೆ ನಗರದ ಕೆಳಸೇತುವೆ, ಹೊಸೂರು ವೃತ್ತ ಸೇರಿದಂತೆ ಇತೆರೆಡೆಯೂ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಚನ್ನವೃತ್ತದ ಸುತ್ತಮುತ್ತಲಿನ ರಸ್ತೆಗಳಲ್ಲಿಯೂ ಸಂಚಾರ ಸಂಕಷ್ಟಮಯವಾಗಿದೆ.
‘ಸಾರ್ವಜನಿಕರಿಂದ ಪ್ರತಿ ವರ್ಷ ಮಹಾನಗರ ಪಾಲಿಕೆ ತೆರಿಗೆ ಸಂಗ್ರಹಿಸುತ್ತದೆ. ಹೀಗಾಗಿ ಸುಸಜ್ಜಿತ ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಪಾಲಿಕೆಯ ಜವಾಬ್ದಾರಿ. ಅನುದಾನ ಬಂದಿಲ್ಲವೆಂದು ರಾಜ್ಯ ಸರ್ಕಾರದತ್ತ ಬೊಟ್ಟು ಮಾಡುವುದು ಬಿಡಬೇಕು’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಗುರುನಾಥ ಉಳ್ಳಿಕಾಶಿ.
‘ಹೆಸ್ಕಾಂ, ಲೋಕೋಪಯೋಗಿ, ಎಲ್ ಆ್ಯಂಡ್ ಟಿ ಕಂಪನಿ ಸೇರಿದಂತೆ ವಿವಿಧ ಇಲಾಖೆಗಳ ನಡುವೆ ಸಮನ್ವಯ ಇಲ್ಲದಿರುವುದರಿಂದ ಸುಸಜ್ಜಿತವಾಗಿ ನಿರ್ಮಿಸಿದ ರಸ್ತೆಗಳನ್ನು ಕುಡಿಯುವ ನೀರು, ಒಳಚರಂಡಿ ಪೈಪ್, ಕೇಬಲ್ ಅಳವಡಿಕೆಗೆ ಮತ್ತೆ ಮತ್ತೆ ಅಗೆಯಲಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂಬುದು ಅವರ ಆಗ್ರಹ.
‘ಗುಣಮಟ್ಟದ ರಸ್ತೆಗಳನ್ನು ನಿರ್ಮಿಸದ ಕಾರಣ ಪ್ರತಿ ವರ್ಷ ಮಳೆಗಾಲದಲ್ಲಿ ಸಮಸ್ಯೆ ಪುನರಾವರ್ತೆಯಾಗುತ್ತದೆ. ಇದರಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ. ಜನಪ್ರತಿನಿಧಿಗಳು ಸಹ ಜವಾಬ್ದಾರಿಯಿಂದ ನಡೆದುಕೊಳ್ಳುವುದಿಲ್ಲ’ ಎಂದು ವಿದ್ಯಾನಗರದ ನಿವಾಸಿ ವಿನಾಯಕ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ವರ್ಷ ರಸ್ತೆ ಗುಂಡಿ ಮುಚ್ಚಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಸುಸಜ್ಜಿತ ರಸ್ತೆ ನಿರ್ಮಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕುಗುರುನಾಥ ಉಳ್ಳಿಕಾಶಿ ಸಾಮಾಜಿಕ ಹೋರಾಟಗಾರ
ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲಾಗುತ್ತದೆ. ರಸ್ತೆ ಗುಂಡಿ ಮುಚ್ಚಲು ಟೆಂಡರ್ ಪಡೆದವರು ಶೀಘ್ರ ಕಾಮಗಾರಿ ಆರಂಭಿಸಬೇಕುರಾಮಪ್ಪ ಬಡಿಗೇರ ಮೇಯರ್
ಅಧಿಕಾರಿಗಳು ಜನರ ಜೀವದ ಜತೆ ಚೆಲ್ಲಾಟವಾಡಬಾರದು. ಗುತ್ತಿಗೆದಾರಿಗೆ ಹಣು ಬಿಡುಗಡೆ ಮಾಡಿ ತುರ್ತಾಗಿ ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕುರಾಜಶೇಖರ ಕಮತಿ ವಿರೋಧ ಪಕ್ಷದ ನಾಯಕ ಹು–ಧಾ ಮಹಾನಗರ ಪಾಲಿಕೆ
ಒಳಚರಂಡಿ ಕುಡಿಯುವ ನೀರಿನ ಪೈಪ್ ಅಳವಡಿಕೆಗೆ ರಸ್ತೆ ಅಗೆದು ಆರು ತಿಂಗಳಾಗಿದೆ. ಅಧಿಕಾರಿಗಳು ಪಾಲಿಕೆ ಸದಸ್ಯರಿಗೆ ಹೇಳಿದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲನಾಗೇಂದ್ರ ಹಬೀಬ ಅಂಚಟಗೇರಿ ಓಣಿ ನಿವಾಸಿ
‘₹3.23 ಕೋಟಿ ಮೊತ್ತದ ಟೆಂಡರ್’
ರಸ್ತೆ ಗುಂಡಿ ಮುಚ್ಚಲು ಹುಬ್ಬಳ್ಳಿ ದಕ್ಷಿಣ ವಲಯದಲ್ಲಿ ₹1.13 ಕೋಟಿ ಉತ್ತರ ವಲಯ ₹2.81 ಕೋಟಿ ಮತ್ತು ಧಾರವಾಡ ವಲಯದಲ್ಲಿ ₹1.82 ಕೋಟಿ ಮೊತ್ತದ ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ. ಧಾರವಾಡ ವಲಯದಲ್ಲಿ ಬಹುತೇಕ ಕೆಲಸ ಪೂರ್ಣಗೊಂಡಿದೆ’ ಎಂದು ಪಾಲಿಕೆ ಹೆಚ್ಚುವರಿ ಆಯುಕ್ತ ವಿಜಯಕುಮಾರ ಆರ್. ತಿಳಿಸಿದರು.
‘ಕಾಮಗಾರಿ ಆರಂಭಿಸುವಾಗ ಸಾಮಾನ್ಯ ನಿಧಿಯಿಂದ ಹಣ ಪಾವತಿಸಬೇಕು ಎಂದು ಗುತ್ತಿಗೆದಾರರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಶೇ 30ರಷ್ಟು ಕಾಮಗಾರಿ ಸಹ ನಡೆದಿಲ್ಲ’ ಎಂದರು. ‘ಈಗಾಗಲೇ ಕಾರ್ಯಾದೇಶ ನೀಡಿರುವುದರಿಂದ ಮಳೆ ಕಡಿಮೆ ಆದ ನಂತರ ಶೀಘ್ರ ಗುಂಡಿ ಮುಚ್ಚುವಂತೆ ಸೂಚಿಸಲಾಗುವುದು. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅಡಿ ₹250 ಕೋಟಿ 15ನೇ ಹಣಕಾಸು ಯೋಜನೆ ಅಡಿ ₹50 ಕೋಟಿ ಸೇರಿ ₹300 ಕೋಟಿ ಹಣ ಪಾಲಿಕೆಗೆ ಅನುದಾನ ಬರಲಿದ್ದು ಇದರಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಸ್ತೆ ಸಮಸ್ಯೆಗೆ ಪರಿಹಾರ ಸಿಗಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.