ಹುಬ್ಬಳ್ಳಿ: ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವದ ಕೊನೆಯ ದಿನದ ಅಂಗವಾಗಿ, ಭವಾನಿ ನಗರದಲ್ಲಿರುವ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ರಥೋತ್ಸವ ಜರುಗಿತು.
ರಾಯರ ಬೆಳ್ಳಿ ಮೂರ್ತಿಯನ್ನು ಹೊತ್ತ ರಥವನ್ನು ಭಕ್ತರು ಮಠದ ಆವರಣದಲ್ಲಿ ಹಾಗೂ ಪಕ್ಕದ ಬೀದಿಯವರೆಗೆ ಎಳೆದು ಪುನೀತರಾದರು. ಡೋಲು, ವಾದ್ಯ ಹಾಗೂ ಸಂಗೀತವು ರಥೋತ್ಸವ ಮೆರಗು ತಂದಿತು.
ಭಕ್ತರು ಪರಸ್ಪರ ಬಣ್ಣ ಎರಚಾಡಿ ಸಂಭ್ರಮಿಸಿದರು. ಕೋಲಾಟದೊಂದಿಗೆ ನೃತ್ಯ ಮಾಡಿದರು. ರಥೋತ್ಸವದಲ್ಲಿ ಭಕ್ತರು ತ್ರಿವರ್ಣ ಧ್ವಜವನ್ನು ಕೈಯಲ್ಲಿಡಿದು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
‘ಮಠದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ಜರುಗಿದವು. ಜಯ–ವಿಜಯ ಭಜನಾ ಮಂಡಳಿಯವರು ರಾಯರ ಸುಳಾದಿ ಕಾರ್ಯಕ್ರಮ ನಡೆಸಿಕೊಟ್ಟರು. ಸಂಜೆ 6ರಿಂದ 7ರವರೆಗೆ ಕಾಂಚನ ಹಳ್ಯಾಳ ಅವರು ದಾಸವಾಣಿ ಮತ್ತು 7.15ರಿಂದ 8ರವರೆಗೆ ಅನುಷಾ ಮುತಾಲಿಕ ದೇಸಾಯಿ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ’ ಎಂದು ಮಠದ ವ್ಯವಸ್ಥಾಪಕ ಜೆ. ವೇಣುಗೋಪಾಲ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.