ಹುಬ್ಬಳ್ಳಿ: ನಗರದಲ್ಲಿ ಗುರುವಾರವೂ ಭಾರೀ ಗಾಳಿ ಹಾಗೂ ಗುಡುಗು ಸಹಿತ ಧಾರಾಕಾರ ಮಳೆ ಆರ್ಭಟಿಸಿತು. ಇದರಿಂದಾಗಿ ಕೆಲವೆಡೆ ಮರಗಳು ನೆಲಕ್ಕುರುಳಿವೆ. ವಿದ್ಯುತ್ ಕಂಬಗಳು ಸಹ ಹಾನಿಗೊಂಡಿದ್ದು, ತಂತಿಗಳ ಮೇಲೆ ಕೊಂಬೆಗಳು ಬಿದ್ದಿವೆ.ಸಂಜೆ 5.45ಕ್ಕೆ ಆರಂಭಗೊಂಡು ಅಂದಾಜು ಅರ್ಧ ತಾಸು ಎಡೆಬಿಡದೆ ಸುರಿಯಿತು.
ಗಾಳಿ ಆರ್ಭಟಕ್ಕೆ ಬಾದಾಮಿ ನಗರದಲ್ಲಿ ಶಾಸಕ ಜಗದೀಶ ಶೆಟ್ಟರ್ ಅವರ ಮನೆ ಮುಂದೆ ನಿಲ್ಲಿಸಿದ್ದ ಬೆಂಗಾವಲು ವಾಹನದ ಮೇಲೆ, ಗೋಕುಲ ರಸ್ತೆಯ ಕುಮಾರಪಾರ್ಕ್ನ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಉರುಳಿ ಬಿದ್ದಿದೆ.ಹಳೇ ಹುಬ್ಬಳ್ಳಿಯ ದುರ್ಗದ ಬೈಲ್ನ ಮಹಾತ್ಮ ಗಾಂಧಿ ಮಾರುಕಟ್ಟೆಯ ಹಳೆಯ ಕಟ್ಟಡದ ಚಾವಣಿ ಮಳೆಯ ಹೊಡೆತಕ್ಕೆ ಕುಸಿದಿದೆ. ಸ್ಥಳದಲ್ಲಿ ಯಾರೂ ಇಲ್ಲದಿದ್ದರಿಂದ ಅಪಾಯ ಸಂಭವಿಸಿಲ್ಲ.
ರಾಜನಗರ, ಅಶೋಕನಗರ, ದೇಶಪಾಂಡೆ ನಗರ, ಗುರುದೇವನಗರ, ವಿಶ್ವೇಶ್ವರ ನಗರ, ಕೇಶ್ವಾಪುರ, ರಾಧಾಕೃಷ್ಣನಗರ, ನಂದಿ ಬಡಾವಣೆ, ರೇಣುಕಾ ನಗರ, ವಿದ್ಯಾನಗರ, ಗೋಕುಲ ರಸ್ತೆ, ಕೈಗಾರಿಕಾ ಪ್ರದೇಶ ಸೇರಿದಂತೆ ಕೆಲವೆಡೆ ಮರದ ಕೊಂಬೆಗಳು ಧರೆಗುರುಳಿವೆ. ಪಾಲಿಕೆಯ ಸಹಾಯವಾಣಿಗೆ ಸಾರ್ವಜನಿಕರು ಕರೆ ಮಾಡಿ ನೀಡಿರುವ ದೂರಿನ ಮೇರೆಗೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಡಿಯೊ ವೈರಲ್: ನಗರದಲ್ಲಿ ಬುಧವಾರ ಸಂಜೆ ಮಳೆಯಾಗುವುದಕ್ಕೂ ಮುಂಚೆ ಬೀಸಿದ ಭಾರೀ ಗಾಳಿಯ ಆರ್ಭಟಕ್ಕೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮೂವರು ವಿದ್ಯಾರ್ಥಿಗಳು ನಿಲ್ಲಲಾಗದೆ ಪರದಾಡಿದರು. ಪಕ್ಕದಲ್ಲೇ ಇದ್ದ ಸ್ಕೂಟರ್ ನೆಲಕ್ಕುರುಳಿತು. ಈ ವಿಡಿಯೊ ವಾಟ್ಸ್ಆ್ಯಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.