ಕಲಘಟಗಿ: ತಾಲ್ಲೂಕಿನಲ್ಲಿ ಮಂಗಳವಾರ ಸುರಿದ ಮಳೆರಾಯನ ಅಭರಕ್ಕೆ ಮತ್ತೊಮ್ಮೆ ಹಲವು ಕೆರೆ ಕಟ್ಟೆಗಳಿಗೆ ನೀರು ಶೇಖರಯಾಗಿ ಅಲ್ಲಲ್ಲಿ ಕೆಳಮಟ್ಟದ ರಸ್ತೆ ಸೇತುವೆ ನೀರಿನ ಹಳ್ಳಗಳು ಜಲಾವೃತಗೊಂಡವು.
ಮಂಗಳವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಮಳೆ ಆರಂಭವಾಯಿತು. ಮಧ್ಯಾಹ್ನ 3ರಿಂದ 4 ಗಂಟೆ ಕಾಲ ಬಿಟ್ಟು ಬಿಡದೇ ಗಾಳಿ, ಸಿಡಿಲು, ಗುಡುಗು ಸಮೇತ ಮಳೆ ಆರ್ಭಟ ಹೆಚ್ಚಾಯಿತು.
ಮಳೆ ಗಾಳಿಯಿಂದ ಅವಘಡಗಳು: ಮಳೆಗೆ ತಾಲ್ಲೂಕಿನ ತಬಕದಹೊನ್ನಳ್ಳಿ ಗ್ರಾಮದ ಹೊರವಲಯದ ಕಲಘಟಗಿ ತಡಸ ರಾಜ್ಯ ಹೆದ್ದಾರಿ ಬದಿಯ 5 ರಿಂದ 6 ವಿದ್ಯುತ್ ಕಂಬಗಳು ರಸ್ತೆ ಮೇಲೆ ಬಾಗಿದ್ದವು. ಅದೃಷ್ಟವಶಾತ ಪ್ರಾಣ ಹಾನಿ ಸಂಭವಿಸಿಲ್ಲ.
ಕೆಲ ಹೊತ್ತು ರಸ್ತೆ ಸಂಚಾರ ಬಂದಾಯಿತು. ಮಾಹಿತಿ ತಿಳಿದು ಹೆಸ್ಕಾಂ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ತೆರವು ಕಾರ್ಯಚರಣೆ ಮಾಡಿದರು. ಮುಕ್ಕಲ್ ಗ್ರಾಮದ ಆಸ್ತಕಟ್ಟಿ-ಗ್ರಾಮಕ್ಕೆ ಸಂಪರ್ಕಿಸುವ ಕೆಳಮಟ್ಟದ ಸೇತುವೆ ಜಲಾವೃತಗೊಂಡು ವಾಹನ ಸವಾರರಿಗೆ ರಸ್ತೆ ಅಡಚಣೆಯಾಯಿತು.
ವಿಪರೀತ ಮಳೆಗೆ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರದ ಶಿವಪ್ಪ ತಾಳಿಕೋಟಿ ಅವರ ಮನೆಯೊಳಗೆ ಮಳೆ ನೀರು ನುಗ್ಗಿ ಕೆಲವು ವಸ್ತುಗಳು ಹಾನಿಯಾಗಿ ಕುಟುಂಬಸ್ಥರು ತೊಂದರೆ ಅನುಭವಿಸಿದರು.
ತಾಲ್ಲೂಕಿನ ಬೀರವಳ್ಳಿ ಗ್ರಾಮದ ನೀಲಕಂಠಗೌಡ ಪಾಟೀಲ ಎಂಬುವರಿಗೆ ಸೇರಿದ ಆಕಳಿಗೆ ಸಿಡಿಲು ಬಡಿದು ಮೃತಪಟ್ಟಿದೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಂತರ ಸ್ಥಳಕ್ಕೆ ಪೊಲೀಸರು ಹಾಗೂ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಶಿಂಗನಹಳ್ಳಿ, ಗಳಗಿನಕಟ್ಟಿ ಗ್ರಾಮಗಳ ರಸ್ತೆಯ ಸೇತುವೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸಂಚಾರ ಸ್ಥಗಿತಗೊಂಡು ಭಾರಿ ಗಾತ್ರದ ವಾಹನಗಳು ದೇವಿಕೊಪ್ಪ ಮಾರ್ಗವಾಗಿ ತೆರಳಿದವು.
‘ತಾಲ್ಲೂಕಿನಲ್ಲಿರುವ ಹಲವು ಕೆಳಮಟ್ಟದ ಸೇತುವೆಗಳು ಮಳೆಗಾಲದಲ್ಲಿ ಹೆಚ್ಚಿನ ಮಳೆಗೆ ಅಪಾಯ ಮಟ್ಟದಲ್ಲಿ ನೀರಿನಲ್ಲಿ ಮುಳುಗಡೆಯಾಗಿ ನೀರಿನ ರಭಸಕ್ಕೆ ಕೊಚ್ಚಿಹೋಗುತ್ತವೆ. ಅಧಿಕಾರಿಗಳು ಅಂತಹ ಸೇತುವೆ ಪರಿಶೀಲಿಸಿ ಸೇತುವೆ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮುಖಂಡರಾದ ಫಕೀರೇಶ ನೆಸ್ರೇಕರ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.