ADVERTISEMENT

ಧಾರವಾಡ | ಹೆಸರಿಗಷ್ಟೇ ರೈತ ಭವನ, ‘ಸಂತೆ ಕಟ್ಟೆ’!

ಉತ್ತರ ಕರ್ನಾಟಕದ ರೈತರಿಗಾಗಿ ನಿರ್ಮಾಣ: ಸ್ವಚ್ಛತೆ ಮರೀಚಿಕೆ, ಸಿಗದ ಶುದ್ಧ ನೀರು

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 5:20 IST
Last Updated 30 ಜೂನ್ 2025, 5:20 IST
ಹುಬ್ಬಳ್ಳಿಯ ಎಪಿಎಂಸಿಯ ತರಕಾರಿ ಮಾರುಕಟ್ಟೆ ವಿಭಾಗದಲ್ಲಿನ ರೈತ ಭವನವು ಸೌಲಭ್ಯವಿಲ್ಲದೇ ಬಾಗಿಲು ಮುಚ್ಚಿರುವುದು 
–ಪ್ರಜಾವಾಣಿ ಚಿತ್ರ: ಗುರು ಹಬೀಬ 
ಹುಬ್ಬಳ್ಳಿಯ ಎಪಿಎಂಸಿಯ ತರಕಾರಿ ಮಾರುಕಟ್ಟೆ ವಿಭಾಗದಲ್ಲಿನ ರೈತ ಭವನವು ಸೌಲಭ್ಯವಿಲ್ಲದೇ ಬಾಗಿಲು ಮುಚ್ಚಿರುವುದು  –ಪ್ರಜಾವಾಣಿ ಚಿತ್ರ: ಗುರು ಹಬೀಬ    

ಹುಬ್ಬಳ್ಳಿ: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬರುವ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇಲ್ಲಿನ ಅಮರಗೋಳದ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ (ಎಪಿಎಂಸಿ) ಎರಡು ರೈತ ಭವನಗಳು ಮತ್ತು ‘ಭಾನುವಾರ ಮಾರುಕಟ್ಟೆ’ ಸದ್ಬಳಕೆಯಾಗದೇ, ಹಲವು ವರ್ಷಗಳಿಂದ ಪಾಳು ಬಿದ್ದಿವೆ.

ಇಲ್ಲಿನ ಈರುಳ್ಳಿ ಸಗಟು ಮಾರುಕಟ್ಟೆ ಸಮೀಪ 2007ರಲ್ಲಿ ನಿರ್ಮಿಸಲಾದ ರೈತ ಭವನದಲ್ಲಿ ಮಂಚ, ಹಾಸಿಗೆ ವ್ಯವಸ್ಥೆಯಿದೆ. ಆದರೆ, ಶುಚಿತ್ವ ಇಲ್ಲ. ಶೌಚಾಲಯ ದುರ್ನಾತ ಬೀರುತ್ತದೆ. ಸುತ್ತಮುತ್ತಲೂ ಗಿಡಗಂಟಿಗಳು ಬೆಳೆದಿದ್ದು, ಹುಳುಹುಪ್ಪಡಿಗಳ ಕಾಟವೂ ಇದೆ.  ರೈತ ಭವನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದೆ. ಆದರೆ, ಯಂತ್ರಗಳು ಹಾಳಾಗಿರುವ ಶುದ್ಧ ನೀರು ಸಿಗುವುದಿಲ್ಲ. ಯಂತ್ರಗಳ ದುರಸ್ತಿಗೆ ಕೋರಿ ಸಲ್ಲಿಸಿದ ಹಲವು ಮನವಿಗಳಿಗೆ ಈವರೆಗೆ ಸ್ಪಂದನೆ ಸಿಕ್ಕಿಲ್ಲ.

‘ನಿತ್ಯ ಐದು ಸಾವಿರಕ್ಕೂ ಹೆಚ್ಚು ರೈತರು ತರಕಾರಿ ಮಾರಲು ಇಲ್ಲಿಗೆ ಬರುತ್ತಾರೆ. ಕೆಲವರು ಮಧ್ಯರಾತ್ರಿ ಇಲ್ಲವೇ ನಸುಕಿನಲ್ಲಿ ಬರುತ್ತಾರೆ. ಆದರೆ, ತರಕಾರಿ ಮಾರುಕಟ್ಟೆ ಬಳಿಯಿರುವ ರೈತ ಭವನ ಲಭ್ಯವಾಗದ ಕಾರಣ ಅವರು ತರಕಾರಿ ವಾಹನ, ಅಂಗಡಿಗಳ ಎದುರು ಇಲ್ಲವೇ ರಸ್ತೆಯಲ್ಲೇ ಮಲಗುತ್ತಾರೆ. ರೈತರಿಗೆ ಪೂರ್ಣಪ್ರಮಾಣದಲ್ಲಿ ನಿದ್ದೆ ಮಾಡಲು ಅಥವಾ ವಿಶ್ರಾಂತಿ ಪಡೆಯಲು ಆಗುವುದಿಲ್ಲ’ ಎಂದು ತರಕಾರಿ ಸಗಟು ವ್ಯಾಪಾರಿಗಳ ಸಂಘದ ಅಧ್ಯಕ್ಷ ಖತಾಲ್‌ ಮುಲ್ಲಾ ಹೇಳುತ್ತಾರೆ. 

ADVERTISEMENT

‘ದಿನದ 24ಗಂಟೆ ತೆರೆಯಬೇಕಿದ್ದ ಇಲ್ಲಿನ ಸಾರ್ವಜನಿಕ ಶೌಚಾಲಯದ ಬಾಗಿಲು ಹಾಕಿರುತ್ತಾರೆ. ಬೇರೆ ದಾರಿಕಾಣದೇ ರೈತರು ಮತ್ತು ಹಮಾಲರು ಬಯಲು ಶೌಚಕ್ಕೆ ಹೋಗಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ, ಪ್ರಯೋಜನವಾಗಿಲ್ಲ’ ಎಂದು ಎಪಿಎಂಸಿ ಹಮಾಲಿ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ ಅಂಬಿಗೇರ ದೂರಿದರು.

‘ನಿರ್ವಹಣೆ ಕೊರತೆಯಿಂದಾಗಿ ರೈತಭವನಗಳು ಹಾಳಾಗಿದ್ದು, ರೈತರ ಉಪಯೋಗಕ್ಕೆ ಸಿಗುತ್ತಿಲ್ಲ. ದೂರದಿಂದ ಬರುವ ರೈತರಿಗೆ ವಿಶ್ರಾಂತಿ ಪಡೆಯಲು ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಎಪಿಎಂಸಿ ಮಾಜಿ ಅಧ್ಯಕ್ಷ ಸುರೇಶ ಕಿರೇಸೂರ.

‘ಎಪಿಎಂಸಿಯಲ್ಲಿ ಸಿಬ್ಬಂದಿಯ ಕೊರತೆ ಇದೆ. ರೈತಭವನದ ದುರಸ್ತಿ ಕಾರ್ಯ ನಡೆಯುತ್ತಿದೆ. ಮತ್ತೊಂದು ಭವನದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ, ರೈತರ ಉಪಯೋಗಕ್ಕೆ ನೀಡಲಾಗುವುದು. ಸ್ವಚ್ಛವಾಗಿ ಇಟ್ಟುಕೊಳ್ಳುವುದು ರೈತರ ಜವಾಬ್ದಾರಿಯೂ ಇದೆ’ ಎನ್ನುತ್ತಾರೆ ಎಪಿಎಂಸಿಯ ಸಹಾಯಕ ಕಾರ್ಯದರ್ಶಿ.

ಹುಬ್ಬಳ್ಳಿಯ ಅಮರಗೊಳದ ಎಪಿಎಂಸಿಯಲ್ಲಿ ಪಾಳುಬಿದ್ದಿರುವ ‘ಭಾನುವಾರ ಮಾರುಕಟ್ಟೆ’ ಸಂಕೀರ್ಣ –ಪ್ರಜಾವಾಣಿ ವಾರ್ತೆ: ಗುರು ಹಬೀಬ 
ರೈತ ಭವನಗಳನ್ನು ಸ್ವಚ್ಛವಾಗಿಟ್ಟು ರೈತರ ಬಳಕೆಗೆ ನೀಡುವುದು ಅಧಿಕಾರಿಗಳ ಕರ್ತವ್ಯ. ಈ ಬಗ್ಗೆ ಮಾಹಿತಿ ಪಡೆದು ಸರಿಪಡಿಸಿ ರೈತರ ಉಪಯೋಗಕ್ಕೆ ನೀಡಲಾಗುವುದು.
– ದಿವ್ಯಪ್ರಭು ಜಿ.ಆರ್.ಜೆ ಜಿಲ್ಲಾಧಿಕಾರಿ
ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ನೀರಿನ ಟ್ಯಾಂಕ್‌ ಇದೆ. ಆದರೆ ನೀರು ಪೂರೈಕೆಯಾಗುತ್ತಿಲ್ಲ. ‌ದಿನದ 24 ಗಂಟೆಯೂ ಶೌಚಾಲಯ ನೀರಿನ ವ್ಯವಸ್ಥೆ ಮಾಡಿಕೊಡಬೇಕು.
– ಖತಾಲ್‌ ಮುಲ್ಲಾ ಅಧ್ಯಕ್ಷ ತರಕಾರಿ ಸಗಟು ವ್ಯಾಪಾರಿಗಳ ಸಂಘ ಎಪಿಎಂಸಿ.

ಪಾಳುಬಿದ್ದ ‘ಭಾನುವಾರ ಮಾರುಕಟ್ಟೆ’

ಸಂಕೀರ್ಣ 2015–16ನೇ ಸಾಲಿನಲ್ಲಿ ಎಪಿಎಂಸಿ ಆವರಣದಲ್ಲಿ ಅಂದಾಜು ₹30 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಇಲ್ಲಿನ ‘ಭಾನುವಾರ ಮಾರುಕಟ್ಟೆ’ ಸಂಕೀರ್ಣವು ಗಿಡಗಂಟೆಗಳಿಂದ ತುಂಬಿ ಸ್ವಚ್ಛತೆಯಿಲ್ಲದೆ ಪಾಳುಬಿದ್ದಿದೆ.

‘ಭಾನುವಾರ ಮಾರುಕಟ್ಟೆ’ (ಸಂತೆ ಕಟ್ಟೆ) ಕಟ್ಟಡದಲ್ಲಿ ನಿರ್ಮಿಸಲಾದ 14 ಮಳಿಗೆಗಳನ್ನು ಆರಂಭದಲ್ಲಿ ರೈತರು ಬಳಸಿಕೊಂಡರು. ನಂತರದ ದಿನಗಳಲ್ಲಿ ಅದರ ಬಳಕೆಗೆ ಯಾರೂ ಆಸಕ್ತಿ ತೋರಲಿಲ್ಲ. ಇದರಿಂದ ಅವು ಪಾಳು ಬಿದ್ದವು. ಮಳಿಗೆಗಳನ್ನು ಬಾಡಿಗೆಗೆ ಕೊಡಲು ನಿರ್ಧರಿಸಿದೆವು. ಆದರೆ ಯಾರೂ ಆಸಕ್ತಿ ತೋರುತ್ತಿಲ್ಲ’ ಎಂದು ಎಪಿಎಂಸಿಯ ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.