ಹುಬ್ಬಳ್ಳಿ: ಸಮಗ್ರ ನಗರ ಅಭಿವೃದ್ಧಿ ಯೋಜನೆ (ಸಿಡಿಪಿ) ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ ಎರಡು ವರ್ಷ ಕಳೆದರೂ ಅನುಮೋದನೆ ಸಿಗದ ಪರಿಣಾಮ, ನಗರ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಶಾಸಕ ಜಗದೀಶ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ನಗರದ ಇಂದಿರಾ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಕಟ್ಟಡ ನಿರ್ಮಾಣ ಸಾಮಗ್ರಿ ಹಾಗೂ ಗೃಹ ಅಲಂಕಾರ ವಸ್ತು ವಸ್ತುಪ್ರದರ್ಶನ ‘ಕಾನ್ಮ್ಯಾಟ್ 2019’ಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಯಾವುದೇ ನಗರ ಯೋಜನಾಬದ್ಧವಾಗಿ ಬೆಳೆಯಲು ಸಿಡಿಪಿ ಅಗತ್ಯ. ಹುಬ್ಬಳ್ಳಿ–ಧಾರವಾಡ ನಗರ ಸಹ ವ್ಯವಸ್ಥಿವಾಗಿ ಬೆಳೆಯಬೇಕು. ಆದ್ದರಿಂದ ಸಿಡಿಪಿ ತಯಾರಿಸಿ ನೀಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಅಧಿವೇಶದನದಲ್ಲಿ ಈ ವಿಷಯ ಪ್ರಸ್ತಾಪಿಸಿದರೂ ಪ್ರಯೋಜನಾ ಆಗಿಲ್ಲ, ಸರ್ಕಾರದ ಈ ಧೋರಣೆ ಅಭಿವೃದ್ಧಿಗೆ ಮಾರಕವಾಗಿದೆ ಎಂದರು.
ಅನಧಿಕೃತ ಬಡಾವಣೆಗಳ ಹಾವಳಿ ಅವಳಿನಗರದಲ್ಲಿ ಹೆಚ್ಚಾಗುತ್ತಿದೆ. ಜಮೀನಿನಲ್ಲಿ ಗೆರೆ ಎಳೆದು, ಕಂಬಗಳನ್ನು ಹಾಕಿ ಬಡಾವಣೆ ನಿರ್ಮಿಸುತ್ತಿದ್ದಾರೆ. ಈ ವಿಷಯಗಳ ಬಗ್ಗೆ ಮಾಹಿತಿ ಇಲ್ಲದ ಜನರು ಅಂತಹ ನಿವೇಶನ ಖರೀದಿಸಿ ಮೋಸ ಹೋಗುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಮಾಯಕ ಜನರು ಮೋಸ ಹೋಗದಂತೆ ನೋಡಿಕೊಳ್ಳಬೇಕು ಎಂದರು.
ದೇಶದ ನಿರ್ಮಾಣದಲ್ಲಿ ಎಂಜಿನಿಯರ್ಗಳ ಪಾತ್ರ ಬಹುಮುಖ್ಯ. ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ನಿರ್ಮಾಣ ಮಾಡುವ ತಂತ್ರಜ್ಞಾನವನ್ನು ನೀಡಬೇಕು ಎಂದರು.
ಆಶೀರ್ವಾದ ಪೈಪ್ಸ್ ಪ್ರಾದೇಶಿಕ ಅಭಿವೃದ್ಧಿ ಅಧಿಕಾರಿ ಹೇಮಂತ್, ಕಾನಮ್ಯಾಟ್ ಮುಖ್ಯಸ್ಥ ಅಶೋಕ ಬಸವಾ, ಎಸಿಸಿಇ ಅಧ್ಯಕ್ಷ ಶ್ರೀಕಾಂತ ಪಾಟೀಲ, ಸುರೇಶ ಸೆಜವಾಡ್ಕರ್, ಸುರೇಶ ಕಿರೆಸೂರ, ನಾರಾಯಣ ಪ್ರಸಾದ ಪಾಠಕ, ಉಮೇಶ ನೀಲಿ, ಸಂಜೀವ ಜೋಶಿ, ವಸಂತ ಪಾಲಕರ್ ಇದ್ದರು.
ಶನಿವಾರ ಮತ್ತು ಭಾನುವಾರ ವಸ್ತು ಪ್ರದರ್ಶನ ನಡೆಯಲಿದೆ. ಕಟ್ಟಡ ನಿರ್ಮಾಣಕ್ಕೆ ಅಗತ್ಯ ಇರುವ ಎಲ್ಲ ಸಾಮಗ್ರಿಗಳನ್ನು, ಆಧುನಿಕ ತಂತ್ರಜ್ಞಾನವನ್ನು ಕಾನ್ಮ್ಯಾಟ್ನಲ್ಲಿ ನೋಡಬಹುದು. ಗೃಹ ಅಲಂಕಾರ ವಸ್ತುಗಳು ಸಹ ಇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.