ಹುಬ್ಬಳ್ಳಿ: ‘ದುಷ್ಟ ಶಕ್ತಿಯನ್ನು ಸಂಹಾರ ಮಾಡಿ, ಧರ್ಮ ಮತ್ತು ಸಜ್ಜನರನ್ನು ರಕ್ಷಿಸುವ ಕೆಲಸ ಆಗಾಗ ನಡೆಯುತ್ತಿರಬೇಕು’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದ ಮಯೂರಿ ಎಸ್ಟೇಟ್ನಲ್ಲಿ ವಿಪ್ರ ಸಮಾಜದ ‘ಪ್ರಾಜ್ಞ ಸದನ’ವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ‘370 ಕಲಂ ರದ್ದುಪಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ಶಾರದಾ ದೇವಿ ನೆಲೆಸಿರುವ ಕಾಶ್ಮೀರವನ್ನು ದುಷ್ಟರಿಂದ ಬಂಧಮುಕ್ತಗೊಳಿಸಿದರು’ ಎಂದರು.
ಮಹಾಚಾರ್ಯ ವಿದ್ಯಾಲಯದ ಕುಲಪತಿ ಪಂಡಿತ ಪ್ರದ್ಯುಮ್ನಾಚಾರ್ಯ ಜೋಶಿ ಮಾತನಾಡಿ, ‘ಸಚಿವ ಜೋಶಿ ಅವರು ಪ್ರಾಜ್ಞ ಸದನದ ಮಹಾ ಪೋಷಕರಾಗಿದ್ದಾರೆ. ಮನೆಯಲ್ಲಿ ಯಾರಾದರೂ ತೀರಿಕೊಂಡಾಗ ಅನೇಕರಿಗೆ ಮೈಲಿಗೆ ಆಚರಣೆ ಮಾಡಲು ಆಗುವುದಿಲ್ಲ. ಅಂತಹವರಿಗೆ ಸದನದಲ್ಲಿ ಉಚಿತವಾಗಿ ಮೈಲಿಗೆ ಆಚರಣೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದರು.
‘ದೇಶದಲ್ಲಿ ಗುರುಕುಲ ಶಿಕ್ಷಣ ಪದ್ಧತಿ ನಿಷೇಧ, ಇಂಗ್ಲಿಷ್ ಬಲ್ಲವರಿಗೆ ಹೆಚ್ಚು ಸಂಬಳ ಹಾಗೂ ಸ್ಥಳೀಯ ಭಾಷೆಯನ್ನಷ್ಟೇ ಬಲ್ಲವರ ಕಡೆಗಣನೆ ಮಾಡುವ ಮೂಲಕ ಮೆಕಾಲೆ ದೇಶದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಬುನಾದಿ ಹಾಕಿದ. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕವಾದರೂ, ಆ ಸಂಸ್ಕೃತಿಯಿಂದ ನಾವು ಹೊರಬರಲು ಸಾಧ್ಯವಾಗಿಲ್ಲ. ದೇಶದಲ್ಲಿ ಮತ್ತೆ ಗುರುಕುಲ ಶಿಕ್ಷಣ ಪದ್ಧತಿ ಹಾಗೂ ಸನಾತನ ಸಂಸ್ಕೃತಿಯ ಮರು ಸ್ಥಾಪನೆಯಾಗಬೇಕಿದೆ’ ಎಂದು ಹೇಳಿದರು.’ ಎಂದು ಬೇಸರ ವ್ಯಕ್ತಪಡಿಸಿದರು.
ರವಿ ಆಚಾರ್ಯ ನಿರೂಪಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.