ಹುಬ್ಬಳ್ಳಿ: ‘ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರಿಗೆ ಪಠ್ಯ ಚಟುವಟಿಕೆಗಳಿಗಿಂತ ಪಠ್ಯೇತರ ಚಟುವಟಿಕೆಯ ಜವಾಬ್ದಾರಿಗಳೇ ಹೆಚ್ಚು ಇವೆ. ಇದರಿಂದಾಗಿ ಮಕ್ಕಳಿಗೆ ಶಿಕ್ಷಕರು ಗುಣಮಟ್ಟದ ಬೋಧನೆ ನೀಡುವಲ್ಲಿ ಕಷ್ಟವಾಗುತ್ತಿದ್ದು, ಇತರೆ ಕೆಲಸಗಳಿಗೆ ಬೇರೆ ಸಿಬ್ಬಂದಿಯನ್ನು ನೇಮಿಸಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.
ಕಡಿಮೆ ಫಲಿತಾಂಶ ಕೊಟ್ಟ ಶಿಕ್ಷಕರಿಗೆ ಬಡ್ತಿ ಇಲ್ಲ ಎಂದು ಈಚೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆದೇಶ ಹೊರಡಿಸಿರುವುದು ಗಮನಕ್ಕೆ ಬಂದಿದೆ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಬಿಸಿಯೂಟದ ಹೊಣೆಗಾರಿಕೆ, ಮೊಟ್ಟೆ, ಹಾಲು, ಬಾಳೆಹಣ್ಣು ಕೊಡುವುದು, ಪಠ್ಯೇತರ ವಿಷಯಗಳಿಗೆ ಸಂಬಂಧಿಸಿದ ಸಾಮಗ್ರಿ ಖರೀದಿಸುವುದು ಇಂತಹ ಹಲವು ಜವಾಬ್ದಾರಿಗಳನ್ನು ಶಿಕ್ಷಕರಿಗೆ ನೀಡಲಾಗಿದೆ.
ಇದರ ನಡುವೆಯೇ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಬೇಕು. ಇದರಿಂದ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಫಲಿತಾಂಶ ತರುವುದು ಕಷ್ಟ. ಹೀಗಾಗಿ ಶಾಲೆಯ ಪಠ್ಯೇತರ ಚಟುವಟಿಕೆಗಳಿಗಾಗಿ ಇತರೆ ಸಿಬ್ಬಂದಿಯನ್ನು ನೇಮಿಸುವ ಮೂಲಕ ಶಿಕ್ಷಕರಿಗೆ ಕೇವಲ ಪಾಠ ಮಾಡಲು ಅನುಮತಿ ನೀಡಬೇಕು. ಈ ಬಗ್ಗೆ ಮನವಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.