ಹುಬ್ಬಳ್ಳಿ: ಕುರುಬ ಜನಾಂಗದವರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಜೂನ್ 2ರಂದು ಹುಬ್ಬಳ್ಳಿಯಲ್ಲಿ ದುಂಡು ಮೇಜಿನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಮನಸೂರ ಕ್ಷೇತ್ರದ ರೇವಣಸಿದ್ದೇಶ್ವರ ಮಹಾಮಠದ ಸ್ವಾಮೀಜಿ ಹಾಗೂ ಕುರುಬ ಸಮುದಾಯದ ಕುಲಶಾಸ್ತ್ರೀಯ ಸತ್ಯಶೋಧನಾ ಸಮಿತಿಯ ಅಧ್ಯಕ್ಷ ಬಸವರಾಜ ದೇವರು ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘1961ರಲ್ಲಿ ಭಾರತ ಎಸ್.ಸಿ, ಎಸ್.ಟಿ. ಆಯೋಗದ ಸದಸ್ಯ ಎ.ಎ. ಲೋಯಿಜ್ ಅವರು ಕುರುಬರನ್ನು ಎಸ್.ಟಿ.ಗೆ ಸೇರಿಸಲು ಶಿಫಾರಸು ಮಾಡಿದ್ದರು. ಕುರುಬರಿಗೆ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಎಸ್.ಟಿ. ಮೀಸಲಾತಿ ನೀಡಿಲ್ಲ. ಇದಕ್ಕಾಗಿ ಅನೇಕ ಹೋರಾಟಗಳನ್ನು ಮಾಡಿದ್ದೇವೆ. ಇದರ ಬಗ್ಗೆ ದುಂಡು ಮೇಜಿನ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದರು.
‘ಅತ್ಯಂತ ಹಿಂದುಳಿದ ಕುರುಬ ಜನಾಂಗವು ಭಾರತದ ಮೂಲ ನಿವಾಸಿಗಳಾಗಿದ್ದಾರೆ. ಈ ಸಮಾಜದವರು ಪರಿಶಿಷ್ಟ ಪಂಗಡ, ಬುಡಗಟ್ಟು ಮತ್ತು ಅಲೆಮಾರಿ ಜನಾಂಗವೆಂದು ಅಧ್ಯಯನದಿಂದ ಸಾಬೀತಾಗಿದೆ. ಕರ್ನಾಟಕದಲ್ಲಿ ಕುರುಬರನ್ನು ಕುರುಬ, ಕುರುಮನ್, ಕಾಡುಕುರುಬ, ಜೇನುಕುರುಬ, ಗೊಂಡ, ರಾಜಗೊಂಡ, ಹಾಲುಮತ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ’ ಎಂದರು.
‘ಶಿವಳ್ಳಿ ಪತ್ನಿ ಕುಸುಮಾವತಿ ಚುನಾವಣೆಯಲ್ಲಿ ಗೆದ್ದರೆ ಅವರಿಗೆ ಸಚಿವ ಸ್ಥಾನ ಕೊಡಬೇಕು. ಮುಂದಿನ ಸಂಸದರು ಮಹದಾಯಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಆಗ್ರಹಿಸಿದರು.
ಅರ್ಜುನ ಗೊರವಿ, ಶಿವಪ್ಪ ಲಾಯದಗುಂದಿ, ಸಂಜೀವ ಧುಮಕ್ಕನಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.