ಹುಬ್ಬಳ್ಳಿ: ‘ನನ್ನ ಜನ್ಮದಿನದಂದು ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಉಚಿತವಾಗಿ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಯಂತಹ ಸಾಮಾಜಿಕ ಸೇವೆ ಮಾಡುವ ಮೂಲಕ, ಈ ದಿನವನ್ನು ಸಾರ್ಥಕಗೊಳಿಸಿದ್ದಾರೆ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ಜಗದೀಶ ಶೆಟ್ಟರ್ ಅವರ ಜನ್ಮದಿನದ ಅಂಗವಾಗಿ, ಸಂಕಲ್ಪ ಚಾರಿಟೆಬಲ್ ಟ್ರಸ್ಟ್, ಜಗದೀಶ ಶೆಟ್ಟರ್ ಅಭಿಮಾನಿ ಸೇವಾ ಸಂಘ ಹಾಗೂ ಜಯಪ್ರಿಯಾ ಮೆಡಿಕಲ್ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳಲು ವೈಯಕ್ತಿಕವಾಗಿ ನನಗೆ ಇಷ್ಟವಿಲ್ಲ. ಆದರೆ, ರಾಜಕೀಯ ಕ್ಷೇತ್ರದಲ್ಲಿರುವುದರಿಂದ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಆಚರಿಸಿದಾಗ ಬೇಡ ಎನ್ನಲಾಗದು. ಅದಕ್ಕಾಗಿ ಸರಳವಾಗಿ, ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರಗಳ ಮೂಲಕ ಜನ್ಮದಿನ ಆಚರಿಸುತ್ತಿರುವುದು ಸಾರ್ಥಕ ತಂದಿದೆ’ ಎಂದರು.
ಸನ್ಮಾನ:
ಕಾರ್ಯಕ್ರಮದಲ್ಲಿ ಜಗದೀಶ ಶೆಟ್ಟರ್ ಮತ್ತು ಅವರ ಪತ್ನಿ ಶಿಲ್ಪಾ ಶೆಟ್ಟರ್ ಅವರನ್ನು ಸನ್ಮಾನಿಸಲಾಯಿತು. ಜತೆಗೆ, ನೇತ್ರ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಭಾಗವಹಿಸಿದ್ದ ಡಾ. ಸವಿತಾ ನಾಡಗೌಡ, ಡಾ. ವೆಂಕಟರಾಮ ಕಟ್ಟಿ, ಡಾ. ಪ್ರಿಯಾ ಕಟ್ಟಿ, ಡಾ. ಜಯಾ, ಡಾ. ರಾಜಶೇಖರ, ಡಾ. ಕುನಾಲ್ ಹಾಗೂ ಡಾ. ಪ್ರಮೋದ್ ಅವರನ್ನು ಶೆಟ್ಟರ್ ದಂಪತಿ ಸನ್ಮಾನಿಸಿದರು.
ನೇತ್ರ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಭಾಗವಹಿಸಿದ್ದವರಿಗೆ ಶೆಟ್ಟರ್ ದಂಪತಿ ಹಣ್ಣುಗಳನ್ನು ವಿತರಿಸಿದರು.ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಸೆಂಟ್ರಲ್ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹಾಗೂ ಮುಖಂಡ ಸಾವಕಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.