ADVERTISEMENT

ಗುಜರಿ ಬಸ್‌ ಈಗ ಸಂಚಾರಿ ಮಹಿಳಾ ಶೌಚಾಲಯ!

ಶೌಚಾಲಯಗಳಿಲ್ಲದ ಶಾಲೆಗಳಲ್ಲೂ ಸಂಚಾರಿ ಶೌಚಾಲಯ ಬಳಸುವ ಯೋಜನೆ: ಕೃಷ್ಣ ಬಾಜಪೇಯಿ

ಕೃಷ್ಣಿ ಶಿರೂರ
Published 16 ಮಾರ್ಚ್ 2021, 2:55 IST
Last Updated 16 ಮಾರ್ಚ್ 2021, 2:55 IST
ಹುಬ್ಬಳ್ಳಿಯ ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಪ್ರಾದೇಶಿಕ ಕಾರ್ಯಾಗಾರದಲ್ಲಿ ಗುಜರಿ ಬಸ್‌ಅನ್ನು ಮಹಿಳಾ ಶೌಚಾಲಯವಾಗಿ ಮಾರ್ಪಡಿಸಿರುವುದು
ಹುಬ್ಬಳ್ಳಿಯ ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಪ್ರಾದೇಶಿಕ ಕಾರ್ಯಾಗಾರದಲ್ಲಿ ಗುಜರಿ ಬಸ್‌ಅನ್ನು ಮಹಿಳಾ ಶೌಚಾಲಯವಾಗಿ ಮಾರ್ಪಡಿಸಿರುವುದು   

ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಗುಜರಿ ಬಸ್ಸೊಂದು ವಿಭಿನ್ನ ಸಂಚಾರಿಮಹಿಳಾ ಶೌಚಾಲಯವಾಗಿ ರೂಪುಗೊಂಡಿದ್ದು, ನೋಡುಗರು ಕಣ್ಣನ್ನು ಹೊರಳಿಸಿ, ಅರಳಿಸಿ ನೋಡುವಂತೆ ಮಾಡಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ಅಂತಿಮ ಸ್ಪರ್ಶ ಪಡೆಯುತ್ತಿದ್ದು, ಮಹಿಳಾ ಶೌಚಾಲಯ ಬಸ್‌ ಕೆಲವೇ ದಿನಗಳಲ್ಲಿ ಬಳಕೆಗಾಗಿ ರಸ್ತೆಗಿಳಿಯಲಿದೆ.

ನಾಲ್ಕು ಟಾಯ್ಲೆಟ್‌ಗಳಲ್ಲಿ ಎರಡು ಇಂಡಿಯನ್‌, ಎರಡು ಕಮೋಡ್‌, ಎರಡು ವಾಷ್‌ ಬೆಸಿನ್‌, ಕನ್ನಡಿ, ಮಗುವಿನ ಆರೈಕೆ ಕೊಠಡಿ ಒಂದು ಹಾಗೂ ಒಂದು ರೆಸ್ಟ್‌ ರೂಂ... ಗುಜರಿ ಸೇರಿದ ಬಸ್ಸೊಂದು ಮಹಿಳಾ ಶೌಚಾಲಯವಾಗಿ, ವಿಶ್ರಾಂತಿ ಕೊಠಡಿಯಾಗಿ ಬದಲಾದ ಸಂಕ್ಷಿಪ್ತ ಚಿತ್ರಣವಿದು.

ನಗರದ ಗೋಕುಲ ರಸ್ತೆಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ಇಂಥ ವಿಶಿಷ್ಟ ಬಸ್ಸೊಂದು ಸಿದ್ಧವಾಗಿದೆ. ಹೊರಗಿನಿಂದ ಹಸಿರು, ಗುಲಾಬಿ ಬಣ್ಣಗಳಿಂದ ಕಂಗೊಳಿಸುವ ಮಹಿಳಾ ಶೌಚಾಲಯ ಬಸ್ಸಿನ ಒಳಗೆ ಹೋದರೆ ಮಹಿಳಾಸ್ನೇಹಿ ವಾತಾವರಣ ಸ್ವಾಗತಿಸಲಿದೆ.

ADVERTISEMENT

ಡ್ರೈವರ್‌ ಸೀಟ್‌ಒಂದನ್ನು ಬಿಟ್ಟರೆ ಉಳಿದೆಲ್ಲವನ್ನು ಕಿತ್ತು ಒಳಾಂಗಣವನ್ನು ಮಾರ್ಪಡಿಸಲಾಗಿದೆ. ಡ್ರೈವರ್‌ ಸೀಟ್‌ ಪಕ್ಕದಲ್ಲಿ ನೀರಿನ ಟ್ಯಾಂಕ್‌ ಇಡಲಾಗಿದೆ. ಯುಪಿಎಸ್‌ ಬ್ಯಾಟರಿ ಅಳವಡಿಸಲಾಗಿದೆ. ನಾಲ್ಕು ಶೌಚಾಲಯಗಳಲ್ಲಿ ಎಕ್ಸಾಸ್ಟ್‌ ಫ್ಯಾನ್‌ ಅಳವಡಿಸಲಾಗಿದೆ.

ಬಸ್‌ನ ಹಿಂಭಾಗದ ಸೀಟ್‌ಗಳ ಜಾಗವನ್ನು ಎರಡು ಕೊಠಡಿಯಾಗಿಸಲಾಗಿದೆ. ಈ ಪೈಕಿ, ಒಂದನ್ನು ಮಗುವಿನ ಆರೈಕೆಗೆ, ಮತ್ತೊಂದನ್ನು ವಿಶ್ರಾಂತಿಗೆಂದು ಮೀಸಲಿಡಲಾಗಿದೆ. ಎರಡೂ ಮಿನಿ ಕೊಠಡಿಗಳಲ್ಲೂ ಎರಡೆರಡು ಆಸನಗಳನ್ನು ಇಡಲಾಗಿದೆ. ಎರಡು ಫ್ಯಾನ್‌ಗಳಿವೆ. ಮೂಲೆಮೂಲೆಗಳಲ್ಲಿ ಲೈಟುಗಳಿವೆ.

ಉತ್ತರ ಕರ್ನಾಟಕದಲ್ಲಿ ನಡೆಯುವ ದೊಡ್ಡ ದೊಡ್ಡ ಜಾತ್ರೆಗಳಿಗೆ ದೂರದೂರುಗಳಿಂದ ಬರುವ ಮಹಿಳೆಯರನ್ನು, ಹಾಲುಣಿಸುವ ತಾಯಂದಿರನ್ನು ಗಮನದಲ್ಲಿ ಇಟ್ಟುಕೊಂಡು ಸಿದ್ಧಪಡಿಸಲಾಗಿದೆ. ಜಾತ್ರಾ ಸ್ಥಳಗಳಲ್ಲಿ ಸೂಕ್ತವೆನಿಸುವ ಜಾಗ ಗುರುತಿಸಿ, ಸೆಪ್ಟಿಕ್‌ ಟ್ಯಾಂಕ್‌ ವ್ಯವಸ್ಥೆ ಕಲ್ಪಿಸಿಕೊಟ್ಟಲ್ಲಿ ಈ ಸಂಚಾರಿ ಶೌಚಾಲಯವನ್ನು ನಿಲ್ಲಿಸಲಾಗುವುದು. ಇದು ಪ್ರಾಯೋಗಿಕವಾಗಿದ್ದು, ಪ್ರತಿಕ್ರಿಯೆಹೇಗೆ ಬರಲಿದೆ ಎಂಬುದನ್ನು ಮನಗಂಡು ಮುಂದಿನ ದಿನಗಳಲ್ಲಿ ಇಂಥ ಸಂಚಾರಿ ಶೌಚಾಲಯ ಬಸ್‌ಗಳನ್ನು ಹೆಚ್ಚಿಸುವ ಯೋಜನೆ ಇದೆ ಎನ್ನುತ್ತಾರೆ ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ.

‘ನಮ್ಮ ನಿಗಮದಲ್ಲಿರುವ ಗುಜರಿ ಬಸ್‌ಗಳು ಕಡಿಮೆ ದರಕ್ಕೆ ಮಾರಾಟವಾಗುತ್ತಿವೆ. ಹಾಗಾಗಿ, ಅದನ್ನು ಜನಸ್ನೇಹಿಯಾಗಿ ಬಳಸಿಕೊಳ್ಳುವ ಯೋಜನೆಗಳಿವೆ. ಶೌಚಾಲಯವನ್ನಾಗಿ ಪರಿವರ್ತಿಸಲು ₹12 ಲಕ್ಷವನ್ನು ವೆಚ್ಚ ಮಾಡಲಾಗಿದೆ. ಶೌಚಾಲಯಗಳಿಲ್ಲದ ಶಾಲೆಗಳಲ್ಲಿ ಇಂತಹ ಸಂಚಾರಿ ಬಸ್‌ ಶೌಚಾಲಯಗಳನ್ನು ಇಡುವ ಯೋಚನೆಯೂ ಇದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.