ಧಾರವಾಡ: ‘ಬೆಳಗಾವಿಯ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸಹಯೋಗದಲ್ಲಿ ಕಟ್ಟಿಮನಿ ಅವರ ಸಾಹಿತ್ಯ ಸೈದ್ಧಾಂತಿಕ ಆಯಾಮಗಳ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಶನಿವಾರದಿಂದ (ಮಾರ್ಚ್ 19) ಆಯೋಜಿಸಲಾಗಿದೆ’ ಎಂದುಪ್ರತಿಷ್ಠಾನದ ಸದಸ್ಯ ಸಂಚಾಲಕ ಡಾ.ಕೆ.ಎಸ್. ದುರ್ಗಾದಾಸ್ ಹೇಳಿದರು.
‘ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಈ ವಿಚಾರ ಸಂಕಿರಣದಲ್ಲಿ 20ಕ್ಕೂ ಹೆಚ್ಚು ವಿದ್ವಾಂಸರು ಭಾಗವಹಿಸಲಿದ್ದಾರೆ. 10 ಜನ ಯುವ ಸಂಶೋಧಕರು ಕಟ್ಟಿಮನಿ ಸಾಹಿತ್ಯ ಕುರಿತ ಪ್ರಬಂಧ ಮಂಡಿಸಲಿದ್ದಾರೆ. ವಿಚಾರ ಸಂಕಿರಣಕ್ಕೆ ಬೆಳಿಗ್ಗೆ 10.30ಕ್ಕೆ ಲೇಖಕ ಸಿದ್ಧಲಿಂಗ ಪಟ್ಟಣಶೆಟ್ಟಿ ಚಾಲನೆ ನೀಡಲಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ವಿಚಾರ ಸಂಕಿರಣದಲ್ಲಿ ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ನಾ. ದಿವಾಕರ್, ಡಾ. ಸಿದ್ಧನಗೌಡ ಪಾಟೀಲ, ಪ್ರೊ. ಕೇಶವ ಶರ್ಮಾ, ಡಾ. ಸಬಿತಾ ಬನ್ನಾಡಿ, ಡಾ. ಗುರುಪಾದ ಬರಿಗುದ್ದಿ, ಹೃಷಕೇಶ್ ಬಹಾದ್ದೂರ ದೇಸಾಯಿ ಅವರು ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ. ಸಂಸ್ಕೃತಿ ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಅವರು ಆಶಯ ಭಾಷಣ ಮಾಡಲಿದ್ದಾರೆ. ಯುವ ಸಂಶೋಧಕರಿಗಾಗಿ ಪ್ರತ್ಯೇಕ ಗೋಷ್ಠಿಗಳನ್ನು ಆಯೋಜಿಸಲಾಗಿದೆ‘ ಎಂದು ಹೇಳಿದರು.
‘ಭಾನುವಾರ ಮಧ್ಯಾಹ್ನ 3.30ಕ್ಕೆ ಸಮಾರೋಪ ನಡೆಯಲಿದ್ದು, ಶಾಂತಿ ಕೆ. ಅಪ್ಪಣ್ಣ ಅವರ ‘ಒಂದು ಬಾಗಿಲು ಮೂರು ಚಿಲ್ಲರೆ ವರ್ಷಗಳು’ ಕಥಾ ಸಂಕಲನಕ್ಕೆ ಯುವ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಗುವುದು. ವಿದ್ವಾಂಸ ಪ್ರೊ. ಎಸ್.ಆರ್. ಗುಂಜಾಳ ಭಾಗವಹಿಸಲಿದ್ದಾರೆ’ ಎಂದು ಡಾ. ದುರ್ಗಾದಾಸ್ ತಿಳಿಸಿದರು.
ಪ್ರೊ. ಮಲ್ಲಿಕಾರ್ಜುನ ಹಿರೇಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.