ಹುಬ್ಬಳ್ಳಿ: ಸೇವಾ ಭಾರತಿ ಟ್ರಸ್ಟ್ ನೀಡಿರುವ ಆಂಬುಲೆನ್ಸ್ ಪ್ರಯೋಜನವನ್ನು ಅಗತ್ಯವಿರುವವರು ಪಡೆಯಬೇಕು. ಟ್ರಸ್ಟ್ ಕಿಮ್ಸ್ಗೆ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ನೆರವು ನೀಡುತ್ತಾ ಬಂದಿದೆ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಹೇಳಿದರು.
ಸೇವಾ ಭಾರತಿ ಟ್ರಸ್ಟ್ ಕಿಮ್ಸ್ಗುರುವಾರ ಕೊಡುಗೆಯಾಗಿ ನೀಡಿದ ಅಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಸ್ಪತ್ರೆಗೆ ಇನ್ಫೋಸಿಸ್ ಪ್ರತಿಷ್ಠಾನವು ಎರಡು ಹಾಗೂ ಕೆನರಾ ಬ್ಯಾಂಕ್ ಒಂದು ಆಂಬುಲೆನ್ಸ್ ಅನ್ನು ಈಗಾಗಲೇ ದೇಣಿಗೆಯಾಗಿ ನೀಡಿವೆ. ಆದರೂ, ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅಂಬುಲೆನ್ಸ್ ಅಗತ್ಯ ಹೆಚ್ಚಾಗಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ರಘು ಅಕಮಂಚಿ ಮಾತನಾಡಿ, ಯಾವುದೇ ಅಪೇಕ್ಷೆ ಇಲ್ಲದೆ ಟ್ರಸ್ಟ್ ಸೇವೆ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಕೋವಿಡ್ ಸಂದರ್ಭದಲ್ಲಿ ಟ್ರಸ್ಟ್ ಕಿಮ್ಸ್ ಗೆ ಪೂರಕವಾಗಿ ಕೆಲಸ ಮಾಡಿದೆ. ಸ್ವಯಂ ಸೇವಕರು ಹಗಲುರಾತ್ರಿ ಕೆಲಸ ಮಾಡಿದ್ದಾರೆ. ಇನ್ಫೋಸಿಸ್ ಕಿಮ್ಸ್ ಆವರಣದಲ್ಲಿ ನಿರ್ಮಿಸಿರುವ ಕಟ್ಟಡದ ಸದುಪಯೋಗ ಆಗಬೇಕು. ಅದರ ನಿರ್ವಹಣೆಯನ್ನು ಟ್ರಸ್ಟ್ ಸೇರಿದಂತೆ ಯಾರಿಗಾದರೂ ವಹಿಸಬೇಕು ಎಂದು ಸಲಹೆ ನೀಡಿದರು.
ಟ್ರಸ್ಟ್ ಕಾರ್ಯದರ್ಶಿ ಗೋವರ್ಧನ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಾನಂದ ಟಿಕಾರೆ, ಉದ್ಯಮಿ
ಮಂಜುನಾಥ ಎಂ., ಜಯತೀರ್ಥ ಕಟ್ಟಿ, ಸಂದೀಪ ಬೂದಿಹಾಳ, ದತ್ತಮೂರ್ತಿ ಕುಲಕರ್ಣಿ ಹಾಗೂ ಶಂಕರ ಗುಮಾಸ್ತೆ ಇದ್ದರು. ಚಂದ್ರಶೇಖರ ಗೋಕಾಕ ಅತಿಥಿಗಳನ್ನು ಸ್ವಾಗತಿಸಿದರು. ಸಂದೀಪ ಬೂದಿಹಾಳ ವಂದನಾರ್ಪಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.