ಹುಬ್ಬಳ್ಳಿ: ‘ಭೂಮಿ ಮೇಲಿನ ಸಾವಿರಾರು ಜೀವರಾಶಿಗಳಿಗೆ ನೀರು ಅತಿ ಅವಶ್ಯಕವಾಗಿದೆ. ಗಾಳಿಯಷ್ಟೇ ನೀರು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಗಂಗೆಯನ್ನು ಧರೆಗೆ ಇಳಿಸಿದ ಮಹಾನ್ ತಪಸ್ವಿ ಭಗೀರಥ ಮಹರ್ಷಿ ಸಕಲ ಜೀವಿಗಳಿಗೂ ಒಳಿತು ಮಾಡಿದರು. ಮನುಷ್ಯರೂ ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು’ ಎಂದು ಹುಬ್ಬಳ್ಳಿ ಶಹರ ತಹಶೀಲ್ದಾರ ಶಶಿಧರ್ ಮಾಡ್ಯಾಳ ಹೇಳಿದರು.
ನಗರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಹುಬ್ಬಳ್ಳಿ ಗ್ರಾಮೀಣ ಹಾಗೂ ಹುಬ್ಬಳ್ಳಿ ಶಹರ ತಾಲ್ಲೂಕು ಆಡಳಿತ ಭಾನುವಾರ ಆಯೋಜಿಸಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಗೀರಥ ಮಹರ್ಷಿಯ ಆದರ್ಶವನ್ನು ಪಾಲಿಸುತ್ತಾ, ಅವರು ತೋರಿದ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯಬೇಕು’ ಎಂದರು.
‘ಇಂದಿನ ಹಾಗೂ ಮುಂದಿನ ಪೀಳಿಗೆಯು ಭಗೀರಥ ಮಹರ್ಷಿ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ತಂತ್ರಜ್ಞಾನದ ಯುಗದಲ್ಲಿ ನಾವಿದ್ದೇವೆ. ಜಗತ್ತಿನ ಎಲ್ಲ ವಿಷಯಗಳನ್ನು ಕುಳಿತಲ್ಲೇ ತಿಳಿದುಕೊಳ್ಳಬಲ್ಲೆವು. ಹೀಗಿರುವಾಗ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದವರ ಬಗ್ಗೆ ಅರಿವು ಮುಖ್ಯ ಎಂದು ತಿಳಿಸಿದರು.
ಸುಧೀರ ಉಪ್ಪಾರ ಮಾತನಾಡಿ, ‘ಎರಡು ವರ್ಷಗಳಿಂದ ಭಗೀರಥ ಜಯಂತಿ ಆಚರಣೆ ಮಾಡಲಾಗಿರಲಿಲ್ಲ. ಈ ವರ್ಷ ಜಯಂತಿ ಆಚರಿಸಲು ಅವಕಾಶ ಮಾಡಿಕೊಟ್ಟ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಭಗೀರಥರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಿದಾಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ’ ಎಂದು ಹೇಳಿದರು.
ಸಮಾಜದ ಮುಖಂಡರಾದ ಹೇಮಂತ ಉಪ್ಪಾರ ಈಶ್ವರಪ್ಪ ಶಿರಕೋಳ, ಪಿ.ವೈ. ಕರೆಣ್ಣನವರ, ಮಾರುತಿ ಮೆಳವಂಕಿ, ಹನುಮಂತಪ್ಪ ಹಿತ್ತಲಮನಿ, ಪರಮೇಶಪ್ಪ ಶಿರಕೋಳ, ಕೃಷ್ಣಪ್ಪ ಕುಸುಗಲ್, ಮೈಲಾರ ಗೋರೆಬಾಳ, ನಿಂಗಪ್ಪ ಉಪ್ಪಾರ, ಪ್ರಕಾಶ ಹಿತ್ತಲಮನಿ, ಬಸವರಾಜ ಹಿರಗಣ್ಣವರ, ಪಂಪಾಪತಿ ಉಪ್ಪಾರ, ನಾಗರಾಜ ಉಪ್ಪಾರ, ಸಂತೋಷ ರೆಡ್ಡಿ, ರಘು ಬೊಮ್ಮನಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.