ADVERTISEMENT

ಕುಂದಗೋಳ | ಕೊರೊನಾ ಮುಕ್ತ ಭಾರತಕ್ಕೆ ಮೌನ ವ್ರತ

ಕುಂದಗೋಳದ ಕಲ್ಯಾಣಪೂರದ ಬಸವಣ್ಣಜ್ಜನವರಿಂದ ಕಾರ್ಯ

ಅಶೋಕ ಘೋರ್ಪಡೆ
Published 17 ಜೂನ್ 2020, 14:47 IST
Last Updated 17 ಜೂನ್ 2020, 14:47 IST
ಮೌನವೃತದಲ್ಲಿ ತೊಡಗಿರುವ ಕಲ್ಯಾಣಪೂರದ ಬಸವಣ್ಣಜ್ಜನವರು
ಮೌನವೃತದಲ್ಲಿ ತೊಡಗಿರುವ ಕಲ್ಯಾಣಪೂರದ ಬಸವಣ್ಣಜ್ಜನವರು   

ಕುಂದಗೋಳ: ಇಲ್ಲಿನ ಕಲ್ಯಾಣಪೂರದ ತ್ರಿವಿಧ ದಾಸೋಹಿ ಬಸವಣ್ಣಜ್ಜನವರು ಕೊರೊನಾ ಮುಕ್ತ ನಾಡು ಹಾಗೂ ಜನರ ಒಳಿತಿಗಾಗಿ ಪ್ರಾರ್ಥಿಸಿ ಜೂನ್‌ 1ರಿಂದ ಮಠದ ಆವರಣದಲ್ಲಿ ಮೌನ ನೃತ ಆರಂಭಿಸಿದ್ದಾರೆ.

ಕಲ್ಯಾಣಪೂರದ ಲಿಂಗ್ಯಕ್ಯ ಅಮ್ಮನವರ ಶಿಷ್ಯರಾದ ಬಸವಣ್ಣಜ್ಜನವರು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕೂಡಲ ಗ್ರಾಮದವರು. ಇವರ ಮೂಲ ಹೆಸರು ಬಸಯ್ಯ ಹಿರೇಮಠ. 1991ರಲ್ಲಿ ಕಲ್ಯಾಣಪೂರ ಮಠಕ್ಕೆ ವಿದ್ಯಾಭ್ಯಾಸಕ್ಕೆಂದು ಬಂದು ಇಲ್ಲಿಯೇ ವಾಸ್ತವ್ಯ ಹೂಡಿದರು.2012ರಲ್ಲಿ ಮಠದ ಅಮ್ಮನವರು ಲಿಂಗೈಕ್ಯರಾದ ಬಳಿಕ ಮಠದ ಉತ್ತರಾಧಿಕಾರಿಯಾದರು.‌

21 ದಿನ ಮೌನವೃತ ಮಾಡುವ ಸಂಕಲ್ಪ ಮಾಡಿರುವ ಬಸವಣ್ಣಜ್ಜನವರು ನಿತ್ಯ ಒಂದು ಲೋಟ ಹಾಲು ಮತ್ತು ನೆನಸಿದ ಮಡಿಕೆ ಕಾಳುಗಳನ್ನು ಮಾತ್ರ ಸೇವಿಸುತ್ತಾರೆ.ಮೌನಾನುಷ್ಠಾನದ ವೇಳೆ ಮಠಕ್ಕೆ ಬರುವ ಭಕ್ತರನ್ನು ಭೇಟಿ ಮಾಡುವುದಿಲ್ಲ.ಪ್ರತಿ ದಿನ ಬೆಳಿಗ್ಗೆ 4 ಗಂಟೆಗೆ ಪೂಜೆ ಆರಂಭಿಸುತ್ತಾರೆ. ಈ ವೃತ ಜೂನ್‌ 22ರಂದು ಬೆಳಿಗ್ಗೆ 9ರಂದು ಪೂರ್ಣಗೊಳ್ಳುತ್ತದೆ.

ADVERTISEMENT

ಬಸವಣ್ಣಜ್ಜನವರು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ, ಜನಜಾಗೃತಿ ಕೆಲಸಗಳನ್ನು ಮಾಡುತ್ತಿದ್ದಾರೆ. ಯುವಕರಲ್ಲಿ ಮಾದಕ ವಸ್ತು ಸೇವನೆ ದುಶ್ಚಟಗಳಿಂದ ದೂರ ಇರುವಂತೆ ಅರಿವು ಮೂಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ'ಬಸವಣ್ಣನ ನಡೆ ಭಕ್ತರ ಮನೆ ಕಡೆ' ಎಂಬ ಕಾರ್ಯಕ್ರಮದ ಮೂಲಕ ಗಮನ ಸೆಳೆದಿದ್ದರು.

‘ಬಸವಣ್ಣಜ್ಜನವರು ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಸಕ್ರಿಯರಾಗಿರುತ್ತಾರೆ. ಬಡಮಕ್ಕಳನ್ನು ಮಠದಲ್ಲಿಟ್ಟುಕೊಂಡು ಉಚಿತ ಶಿಕ್ಷಣ ನೀಡುವುದು, ಧಾರ್ಮಿಕ ಮಹತ್ವದ ಬಗ್ಗೆ ಅರಿವು ಮೂಡಿಸುವುದು, ಪರಿಸರ ಬೆಳೆಸುವುದು ಹೀಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿ ಈ ಭಾಗದ ನೆಡೆದಾಡುವ ದೇವರೆಂದೇ ಪ್ರಖ್ಯಾತಿ ಹೊಂದಿದ್ದಾರೆ’ ಎಂದುಹಿರೇನರ್ತಿ ಗ್ರಾಮದ ಮಠದ ಭಕ್ತ ಕಲ್ಲಪ್ಪ ಹರಕುಣಿ ಹೇಳುತ್ತಾರೆ.

ಬಸವಣ್ಣಜ್ಜನವರ ಆಪ್ತ ಶಿಷ್ಯ ರವಿ ಸಿರಸಂಗಿ ‘ಸಮಾಜದ ಒಳಿತಿಗಾಗಿ ಬಸವಣ್ಣಜ್ಜನವರುಹಿಂದೆಯೂ ಮೌನಾನುಷ್ಠಾನ ಹಮ್ಮಿಕೊಂಡಿದ್ದರು. ಈಗ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಭಾರತ ಸೋಂಕು ಮುಕ್ತವಾಗಲಿ ಎಂದುಸ್ವಾಮೀಜಿ ಮೌನದ ಮೊರೆ ಹೋಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.