ಹುಬ್ಬಳ್ಳಿ: ನೈರುತ್ಯ ರೈಲ್ವೆಯು ಹುಬ್ಬಳ್ಳಿ–ಚಿಕ್ಕಜಾಜೂರು ನಡುವೆ ಜೋಡಿ ಮಾರ್ಗ ಅಳವಡಿಕೆ ಕಾಮಗಾರಿ ಕೈಗೊಂಡಿರುವ ಕಾರಣ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.
ಮಾ. 23ರಿಂದ 29ರ ತನಕ ಹುಬ್ಬಳ್ಳಿ–ಅರಸೀಕೆರೆ ನಡುವೆ ನಿತ್ಯ ಸಂಚರಿಸುತ್ತಿದ್ದ ರೈಲು ಎರಡೂ ಮಾರ್ಗದಿಂದ, ಹುಬ್ಬಳ್ಳಿ–ಚಿತ್ರದುರ್ಗ ನಡುವೆ ನಿತ್ಯ ಸಂಚರಿಸುತ್ತಿದ್ದ ವಿಶೇಷ ಪ್ಯಾಸೆಂಜರ್ ರೈಲು ಎರಡೂ ಮಾರ್ಗದಿಂದ ಹಾಗೂ ಮೈಸೂರು–ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲು ರದ್ದು ಮಾಡಲಾಗಿದೆ. ವಿಶ್ವಮಾನವ ಎಕ್ಸ್ಪ್ರೆಸ್ ಬೆಳಗಾವಿಯಿಂದ 23ರಿಂದ 30ರ ತನಕ ರದ್ದುಗೊಳಿಸಲಾಗಿದೆ.
ಮಾ. 25ರಿಂದ 28ರ ತನಕ ಕೆಎಸ್ಆರ್ ಬೆಂಗಳೂರು–ಹುಬ್ಬಳ್ಳಿ ಎಕ್ಸ್ಪ್ರೆಸ್ ಬೆಂಗಳೂರಿನಿಂದ, 25 ಹಾಗೂ 26ರಂದು ಹುಬ್ಬಳ್ಳಿಯಿಂದ, 27 ಹಾಗೂ 28ರಂದು ಹೊಸಪೇಟೆ–ಕೆಎಸ್ಆರ್ ಬೆಂಗಳೂರು ನಿತ್ಯ ಪ್ಯಾಸೆಂಜರ್ ವಿಶೇಷ ರೈಲುಗಳು ರದ್ದಾಗಿವೆ.
ಭಾಗಶಃ ರದ್ದು: ಮಾ. 23ರಿಂದ 29ರ ತನಕ ಕೆಎಸ್ಆರ್ ಬೆಂಗಳೂರು–ಹುಬ್ಬಳ್ಳಿ ಜನಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಎರಡೂ ಮಾರ್ಗದಿಂದ ಹರಿಹರ–ಹುಬ್ಬಳ್ಳಿ ನಡುವೆ ರದ್ದುಪಡಿಸಲಾಗಿದೆ. ಬೆಂಗಳೂರಿಗೆ ತೆರಳುವಾಗ ಹರಿಹರದಿಂದ ತನ್ನ ಪ್ರಯಾಣ ಆರಂಭಿಸಲಿದೆ.
ವಾರದಲ್ಲಿ ಎರಡು ದಿನ ಅಜ್ಮೀರ್–ಮೈಸೂರು ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲು ಮಾ. 27ರಂದು ಹಾವೇರಿ, ರಾಣೆಬೆನ್ನೂರು ಮತ್ತು ಹರಿಹರ ಮಾರ್ಗದ ಬದಲಾಗಿ ಹುಬ್ಬಳ್ಳಿ, ಗದಗ, ಕೊಪ್ಪಳ, ಮುನಿರಾಬಾದ್, ಹೊಸಪೇಟೆ, ಕೊಟ್ಟೂರು, ಅಮರಾವತಿ ಕಾಲೊನಿ ಮತ್ತು ದಾವಣಗೆರೆ ಮಾರ್ಗದ ಮೂಲಕ ಸಂಚರಿಸಲಿದೆ.
ಹುಬ್ಬಳ್ಳಿ–ಯಶವಂತಪುರ ಎಕ್ಸ್ಪ್ರೆಸ್ ರೈಲು ಮಾ. 26ರಂದು ಹಾವೇರಿ ಹಾಗೂ ಹರಿಹರ ಬದಲಾಗಿ ಹುಬ್ಬಳ್ಳಿ, ಗದಗ, ಮುನಿರಾಬಾದ್, ಹೊಸಪೇಟೆ, ಕೊಟ್ಟೂರು, ಅಮರಾವತಿ ಕಾಲೊನಿ ಮಾರ್ಗದ ಮೂಲಕ ದಾವಣಗೆರೆ ತಲುಪಲಿದೆ. 28ರಂದು ವಾಸ್ಕೋಡಗಾಮ–ನಾಗಪ್ಪಟ್ಟಿನಮ್ ನಡುವೆ ವಾರಕ್ಕೊಮ್ಮೆ ಸಂಚರಿಸುತ್ತಿದ್ದ ಎಕ್ಸ್ಪ್ರೆಸ್ ರೈಲು ಕೂಡ ಹುಬ್ಬಳ್ಳಿ, ಕೊಪ್ಪಳ, ಕೊಟ್ಟೂರು ಮಾರ್ಗದಲ್ಲಿ ತೆರಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.