ಹುಬ್ಬಳ್ಳಿ: ‘ವಿವಿಧ ಯೋಜನೆಗಳಡಿ ಹುಬ್ಬಳ್ಳಿ–ಧಾರವಾಡದಲ್ಲಿ ಹಲವು ಅಭಿವೃದ್ಧಿ ಕೆಲಸಗಳಾಗಿದ್ದು, ಅವಳಿನಗರಗಳು ಪ್ರಗತಿಯತ್ತ ಮುನ್ನುಗ್ಗುತ್ತಿವೆ. ಮೂಲಸೌಕರ್ಯ, ಕೈಗಾರಿಕೆ, ಸಾರಿಗೆ ಸೇರಿದಂತೆ ಹಲವು ವಿಷಯಗಳಲ್ಲಿ ಇಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಸಿದ್ದಾರೂಢಸ್ವಾಮಿ ಮಠದ ರಥಬೀದಿಯ ಸಿ.ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಈಗಾಗಲೇ ₹7.42 ಕೋಟಿ ವೆಚ್ಚದಲ್ಲಿ ಅಂಚಟಗೇರಿಯಿಂದ ಗದಗ ರಸ್ತೆಯವರೆಗೆ ಆಗುತ್ತಿರುವ ಸಿ.ಸಿ ರಸ್ತೆಯಲ್ಲಿ ಉಳಿದಿರುವ ಅನುದಾನದಲ್ಲಿ, 600 ಮೀಟರ್ ಸಿ.ಸಿ ರಸ್ತೆ ನಿರ್ಮಿಸಲಾಗುವುದು. ಜೊತೆಗೆ ಎರಡು ಬದಿ ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗುವುದು’ ಎಂದರು.
‘ಉತ್ತರ ಕರ್ನಾಟಕದ ಪುಣ್ಯಕ್ಷೇತ್ರವಾದ ಸಿದ್ಧಾರೂಢ ಮಠದ ಸುತ್ತಮುತ್ತ ಸೌಂದರ್ಯೀಕರಣಕ್ಕೆ ಒತ್ತು ನೀಡಬೇಕು. ಅದಕ್ಕೆ ಹಣದ ಕೊರತೆಯಾದರೆ ಗಮನಕ್ಕೆ ತನ್ನಿ. ಮುಂಬರುವ ಶಿವರಾತ್ರಿ ಜಾತ್ರೆಯ ಹೊತ್ತಿಗೆ ಕಾಮಗಾರಿ ಪೂರ್ಣಗೊಳಿಸಬೇಕು. ಜಾಗದ ಅತಿಕ್ರಮಣವಾಗಿದ್ದರೆ ಮುಲಾಜಿಲ್ಲದೆ ತೆರವು ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ನ.14ರಿಂದ ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ದೇಶದ ರಾಜಧಾನಿ ದೆಹಲಿಗೆ ನೇರ ವಿಮಾನ ಸೇವೆಗೆ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.
ಮಠದ ಚೇರ್ಮನ್ ಧರಣೇಂದ್ರ ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ವತಿಯಿಂದ ಜೋಶಿ ಅವರನ್ನು ಸನ್ಮಾನಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯರಾದ ಶೀಲಾ ಕಾಟ್ಕರ, ಶಾಂತಾ ಹಿರೇಮಠ, ಶಿವು ಮೆಣಸಿನಕಾಯಿ, ಗುಂಜಾಳ, ಮುಖಂಡರಾದ ಪ್ರಭು ನವಲಗುಂಮಠ, ಮಾ. ನಾಗರಾಜ, ರಂಗಾ ಬದ್ದಿ, ಶಿವಾನಂದ ಮುತ್ತಣ್ಣವರ, ಟ್ರಸ್ಟ್ ಪದಾಧಿಕಾರಿಗಳಾದ ಸಿದ್ದರಾಮಪ್ಪ ಕೋಳಕರ, ಜಿ.ಎಸ್. ನಾಯ್ಕ, ದೀಪಕ ಮೆಹರವಾಡೆ, ಅಕ್ಷತಾ ರೂಗಿ, ಮುರಗೇಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.