ಧಾರವಾಡ: ಬ್ಯಾಂಕಿಗೆ ಹತ್ತಾರು ಸಾವಿರ ಕೋಟಿ ರೂಪಾಯಿ ಪಂಗನಾಮ ಹಾಕಿ ವಿದೇಶಕ್ಕೆ ಹಾರಿದವರನ್ನು ಸುಮ್ಮನೇ ಬಿಡ್ತೀರಿ. ತುತ್ತಿನ ಚೀಲ ತುಂಬಿಸಿಕೊಳ್ಳಲು ರೊಟ್ಟಿ ಕದ್ದವರನ್ನು ಮುಲಾಜಿಲ್ಲದೇ ಜೈಲಿಗೆ ಅಟ್ಟುತ್ತೀರಿ...
ಹೀಗೆ ಹೇಳುತ್ತಲೇ ಹೋದವರು ಮರಾಠಿಯ ಪ್ರಖ್ಯಾತ ಆತ್ಮಕಥೆ ಉಚಲ್ಯಾದ ಕಥನಕಾರ ಲಕ್ಷ್ಮಣ ಗಾಯಕವಾಡ.
ಇಲ್ಲಿ ನಡೆಯುತ್ತಿರುವ ‘ಪ್ರಜಾವಾಣಿ’ ಪ್ರಾಯೋಜಿತ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಶುಕ್ರವಾರ ದಲಿತ ಸಂಕಥನ ಗೋಷ್ಠಿಯಲ್ಲಿ ತಾವು ಕಂಡುಂಡ ನೋವುಗಳನ್ನು ಪಟ್ಟಿ ಮಾಡುತ್ತಲೇ ಹೋದರು.
ಮನುವಾದ ಎಂದಿಗೂ ದಲಿತರನ್ನು, ನಾರಿಯರನ್ನು ಅಸ್ಪೃಶ್ಯ ಎಂದು ಕರೆಯುತ್ತಲೇ ಬಂದಿದೆ. ಅದು ಈಗಲೂ ನಿಂತಿಲ್ಲ ಎಂದು ವಿಷಾದಿಸಿದರು.
‘ಗೋವನ್ನು ದೇವರು ಎಂದು ಪೂಜಿಸಲಾಗುತ್ತದೆ. ಗೋಮೂತ್ರವನ್ನು ಪವಿತ್ರವೆಂದು ಕುಡಿಯುತ್ತಾರೆ. ಅದೇ ರೀತಿ ವಿಷ್ಣುವಿನ ಅವತಾರ ಎನ್ನಲಾಗುವ ವರಾಹ (ಹಂದಿ)ವನ್ನು ಒಂದು ದಿನವಾದರೂ ಮನೆಯಲ್ಲಿಟ್ಟುಕೊಳ್ಳುತ್ತಾರೆಯೇ? ಅದರ ಮೂತ್ರವನ್ನು ಪವಿತ್ರವೆಂದು ಕುಡಿಯುತ್ತಾರೆಯೇ? ಇಲ್ಲ ಎಂದಾದರೆ ಇದೆಂಥ ಆಷಾಢಭೂತಿತನ’ ಎಂದು ಟೀಕಿಸಿದರು.
ಅಂಧಶ್ರದ್ಧೆ ಆಚರಣೆ ಬೇಡ. ಜಾತಿ ತಾರತಮ್ಯ ಬೇಡ ಎಂದು ಹೇಳಿದರೆ ಕೆಲವರಿಗೆ ಆಗಿಬರುವುದಿಲ್ಲ. ಅದಕ್ಕಾಗಿಯೇ ನರೇಂದ್ರ ದಾಬೋಲ್ಕರ್, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಅವರ ಹತ್ಯೆ ನಡೆಯಿತು ಎಂದರು.
'ಅಂದು ಗೃಹ ಸಚಿವರಾಗಿದ್ದ ಶಿವರಾಜ ಪಾಟೀಲರು ನನ್ನನ್ನು ಲಾತೂರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವಂತೆ ಪ್ರೋತ್ಸಾಹಿಸಿದ್ದರು. ಬರಹಗಾರನಾಗಿ ನನ್ನನ್ನು ಒಪ್ಪಿಕೊಂಡ ಜನರು ರಾಜಕಾರಣಿಯಾಗಿ ಒಪ್ಪಲಿಲ್ಲ. ಅದಕ್ಕಾಗಿಯೇ ನನ್ನ ಠೇವಣಿ ನಷ್ಟವಾಯಿತು! ಮತ್ತೊಂದು ಬಾರಿ ಸೊಲ್ಲಾಪುರ ಕ್ಷೇತ್ರದಿಂದ ನಿಂತಾಗಲೂ ಗೆಲುವು ದಕ್ಕಲಿಲ್ಲ’ ಎಂದರು.
ಗೋಷ್ಠಿಯ ನಿರ್ದೇಶಕ ಸರಜೂ ಕಾಟ್ಕರ್, ‘ಉಚಲ್ಯಾ ಕಾದಂಬರಿಗಾಗಿ ಗಾಯಕವಾಡರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯು ₹ 1 ಲಕ್ಷ ಬಹುಮಾನ ನೀಡಿ ಗೌರವಿಸಿತು. ಆ ಕಾದಂಬರಿಯಲ್ಲಿ ಹೆಸರಿಸಲಾದ ಕೆಲವರು ಆ ಹಣದಲ್ಲಿ ತಮಗೂ ಪಾಲು ಬೇಕು ಎಂದು ಕೇಳಲು ಶುರು ಮಾಡಿದರು. ಕಾದಂಬರಿಯಲ್ಲಿ ತಮ್ಮ ಬಗ್ಗೆ ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಸಿಟ್ಟಿಗೆದ್ದ ಕೆಲವರು ಗಾಯಕವಾಡರ ಮನೆ ಮೇಲೆ ಕಲ್ಲು ಒಗೆದರು’ ಎಂದು ಅಂದಿನ ಘಟನೆಗಳನ್ನು ನೆನಪಿಸಿಕೊಂಡರು.
ಗಾಯಕವಾಡರು ತಾವು ಚುನಾವಣೆಯಲ್ಲಿ ನಿಂತ ಅನುಭವವನ್ನು ಹೇಳುವಾಗ ಹರ್ಷ ಡಂಬಳ ಎಂಬುವವರು 'ನೀವು ಸಂವಾದದಲ್ಲಿ ಸಾಹಿತ್ಯ ಬಿಟ್ಟು ರಾಜಕೀಯ ಏಕೆ ತಂದಿರಿ' ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರ ನೀಡಿದ ಗಾಯಕವಾಡ, ‘ಮೊದಲು ನಿಮ್ಮ ಚಿಂತನಾ ಕ್ರಮವನ್ನು ಬದಲಿಸಿಕೊಳ್ಳಿ. ನನ್ನನ್ನು ಇಲ್ಲಿ ಸಂಘಟಕರು ಕರೆಸಿದ್ದು ನನ್ನ ಜೀವನಾನುಭವ ಹೇಳಿಕೊಳ್ಳಲಿಕ್ಕೆ. ಅದನ್ನೇ ಹೇಳುತ್ತಿದ್ದೇನೆ’ ಎಂದು ಚರ್ಚೆಗೆ ವಿರಾಮ ಹಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.